ಕೇರಳ : ಹೆಂಡತಿ ತನ್ನ ಬಿಟ್ಟು ಹೋದರೂ ಮಗನೇ ತನ್ನ ಪ್ರಪಂಚ ಎಂದು ಬದುಕಿದ್ದ ತಂದೆಯೊಬ್ಬ, ನ್ಯಾಯಾಲಯದ ಆದೇಶದಂತೆ ತಾಯಿಯ ಜೊತೆ ಮಗನನ್ನು ಕಳುಹಿಸಿಕೊಟ್ಟ ನೋವನ್ನು ತಾಳಲಾರದೆ ಪ್ರಾಣ ಬಿಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಕುಮಿಲಿಯಲ್ಲಿ ನಡೆದಿದೆ. ಕುಮಿಲಿಯ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಂಜೀಶ್ ಎಂಬುವವರೇ ಮಗನ ಅಗಲಿಕೆಯ ನೋವಿನಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ.
ಕುಟುಂಬಸ್ಥರ ಮಾಹಿತಿ ಪ್ರಕಾರ, ರಂಜೀಶ್ ಹಾಗೂ ಅವರ ಮಗ ಕೋಝಿಮಲದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದರು. ಸುಮಾರು ಆರು ವರ್ಷಗಳ ಹಿಂದೆ ರಂಜೀಶ್ ಅವರ ಪತ್ನಿ ಕೆಲಸ ಅರಸಿ ಶಾರ್ಜಾಗೆ ತೆರಳಿದ್ದರು. ಅಲ್ಲಿಗೆ ತೆರಳಿದ ಬಳಿಕ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ, ರಂಜೀಶ್ ಅವರೊಂದಿಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಆರು ವರ್ಷಗಳ ಕಾಲ ತಾಯಿಯೂ ಇಲ್ಲದೆ, ಒಂಟಿಯಾದ ಮಗನನ್ನು ರಂಜೀಶ್ ಅವರೇ ಅತ್ಯಂತ ಮುತವರ್ಜಿಯಿಂದ, ಎದೆಯಲ್ಲೇ ಇಟ್ಟು ಬೆಳೆಸಿದ್ದರು.
ಆದರೆ, ಒಂದು ತಿಂಗಳ ಹಿಂದೆ ಶಾರ್ಜಾದಿಂದ ಮನೆಗೆ ಮರಳಿದ್ದ ಪತ್ನಿ, ಬಾಲಕನನ್ನು ತನ್ನ ವಶಕ್ಕೆ ಪಡೆಯಲು ಕಟ್ಟಪ್ಪಣ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮಗನನ್ನು ತಾಯಿಯ ವಶಕ್ಕೆ ಒಪ್ಪಿಸಲು ಆದೇಶಿಸಿತು. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆರು ವರ್ಷಗಳಿಂದ ಅಮ್ಮನಂತೆ ಸಲಹಿದ್ದ ಮಗ ತನ್ನಿಂದ ದೂರವಾದ ತೀವ್ರ ಮಾನಸಿಕ ಆಘಾತದಿಂದ ರಂಜೀಶ್ ಚೇತರಿಸಿಕೊಳ್ಳಲಿಲ್ಲ. ಮಗನ ಅಗಲಿಕೆಯ ನೋವನ್ನು ತಾಳಲಾರದೆ ರಂಜೀಶ್ ಒಂದು ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕಳೆದ ಬುಧವಾರ ಕೊನೆಯುಸಿರೆಳೆದರು.
ರಂಜೀಶ್ ಅವರ ನಿಧನದ ಬಳಿಕ, ಆರಂಭದಲ್ಲಿ ಪತ್ನಿಯು ಮಗನನ್ನು ತನ್ನ ತಂದೆಯ ಅಂತಿಮ ದರ್ಶನಕ್ಕಾಗಲಿ ಅಥವಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಲಿ ಕಳುಹಿಸಲು ಒಪ್ಪಲಿಲ್ಲ. ಬಳಿಕ ಸಂಬಂಧಿಕರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿ, ಕೋರ್ಟ್ ಮಧ್ಯಸ್ಥಿಕೆಯಿಂದ ಮಗನನ್ನು ಅಂತ್ಯಕ್ರಿಯೆಗೆ ಕರೆತರಲಾಯಿತು” ಎಂದು ಸ್ಥಳೀಯ ಪಂಚಾಯತ್ ಸದಸ್ಯ ರಾಬಿನ್ ಕರಕ್ಕಡನ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೌಮ್ಯ ಸ್ವಭಾವದ ರಂಜೀಶ್ ಅವರ ನಿಧನಕ್ಕೆ ಇಡೀ ಕುಮಿಲಿ ಗ್ರಾಮ ಹಾಗೂ ಅವರ ಬಸ್ ಚಾಲಕ-ಕಂಡಕ್ಟರ್ ಗೆಳೆಯರು ಕಣ್ಣೀರಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಂಜೀಶ್ ಅವರ ಹಳೆಯ ವೀಡಿಯೊಗಳು ಹಾಗೂ ಮಗನ ಜೊತೆಗಿನ ನೆನಪುಗಳು ವೈರಲ್ ಆಗುತ್ತಿದ್ದು, ಪ್ರತಿಯೊಬ್ಬರ ಕಣ್ಣಂಚಿನಲ್ಲೂ ಕಣ್ಣೀರು ತರಿಸುತ್ತಿವೆ.








