ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸಂಘರ್ಷ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ತನ್ನ ಪ್ರಜೆಗಳಿಗೆ ಭಾರತ ಸರ್ಕಾರ ಅತ್ಯಂತ ತುರ್ತು ಪ್ರಯಾಣ ಸಲಹೆಯನ್ನು ಹೊರಡಿಸಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಇರಾನ್ ಪ್ರಯಾಣವನ್ನು ಸಂಪೂರ್ಣವಾಗಿ ಮುಂದೂಡುವಂತೆ ಸೂಚಿಸಿರುವ ಕೇಂದ್ರ ಸರ್ಕಾರ, ಈಗಾಗಲೇ ಇರಾನ್ನಲ್ಲಿರುವ ಭಾರತೀಯರು ಲಭ್ಯವಿರುವ ವಿಮಾನಗಳ ಮೂಲಕ ತಕ್ಷಣವೇ ದೇಶಕ್ಕೆ ವಾಪಸಾಗುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಇರಾನ್ ದೇಶದಾದ್ಯಂತ ರಾಜಕೀಯ ಅಸ್ಥಿರತೆ ಹಾಗೂ ಸೈನಿಕ ಕಾರ್ಯಾಚರಣೆಗಳು ಉಲ್ಬಣಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಟೆಹರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಷ್ಕೃತ ಪ್ರಯಾಣ ಸಲಹೆಯನ್ನು ಬಿಡುಗಡೆ ಮಾಡಿದೆ. “ಯಾವುದೇ ಉದ್ದೇಶಕ್ಕಾಗಿ ಭಾರತೀಯ ಪ್ರಜೆಗಳು ಇರಾನ್ಗೆ ಪ್ರಯಾಣಿಸುವ ಯೋಜನೆ ಮಾಡಿಕೊಂಡಿದ್ದರೆ, ಭದ್ರತಾ ವಾತಾವರಣ ಸುಧಾರಿಸುವವರೆಗೂ ಪ್ರವಾಸವನ್ನು ತಡೆಹಿಡಿಯಬೇಕು. ಇರಾನ್ನಲ್ಲಿರುವ ಭಾರತೀಯರು ಕಾಯದೆ ಲಭ್ಯವಿರುವ ಕಮರ್ಷಿಯಲ್ ವಿಮಾನಗಳ ಮೂಲಕ ತಕ್ಷಣವೇ ಭಾರತಕ್ಕೆ ಹಿಂದಿರುಗಬೇಕು” ಎಂದು ತಿಳಿಸಲಾಗಿದೆ.
ಒಂದು ವೇಳೆ ಇರಾನ್ನಲ್ಲೇ ಉಳಿಯಲು ಬಯಸುವ ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು. ನಿಯಮಿತವಾಗಿ ಸುದ್ದಿಗಳನ್ನು ಗಮನಿಸುತ್ತಾ ಪ್ರಚಲಿತ ಬೆಳವಣಿಗೆಗಳ ಮಾಹಿತಿ ಹೊಂದಿರಬೇಕು. ವಿಶೇಷವಾಗಿ ದೇಶದ ದಕ್ಷಿಣ ಕರಾವಳಿ ತೀರಗಳು ಹಾಗೂ ಮಿಲಿಟರಿ ಚಟುವಟಿಕೆಗಳು ನಡೆಯುವ ಸೂಕ್ಷ್ಮ ಪ್ರದೇಶಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇರಾನ್ನಲ್ಲಿರುವ ಭಾರತೀಯರು ಈವರೆಗೆ ರಾಯಭಾರ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದಿದ್ದರೆ, ತಕ್ಷಣವೇ ಆನ್ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮುಂದಿನ ಅಪ್ಡೇಟ್ಗಳಿಗಾಗಿ ರಾಯಭಾರ ಕಚೇರಿಯ ಅಧಿಕೃತ ವೆಬ್ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಗಮನಿಸುವಂತೆ ಕೋರಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ರಾಯಭಾರ ಕಚೇರಿಯು 24/7 ಕೆಲಸ ಮಾಡುವ ವಿಶೇಷ ಸಹಾಯವಾಣಿ ಸಂಖ್ಯೆ ಹಾಗೂ ಇಮೇಲ್ ಐಡಿಯನ್ನು ಹಂಚಿಕೊಂಡಿದೆ.








