ಮಂಗಳೂರು : ಮಂಗಳೂರು ತಾಲೂಕಿನ ಪಡವು ಗ್ರಾಮದ ಕೊಪ್ಪಳಕಾಡುವಿನಲ್ಲಿರುವ ಮನೆಯೊಂದರ ಬೆಡ್ರೂಮ್ ಟೇಬಲ್ ಡ್ರಾವರ್ನಲ್ಲಿಟ್ಟಿದ್ದ ಬರೋಬ್ಬರಿ ₹6,37,000 (ಆರು ಲಕ್ಷದ ಮೂವತ್ತೇಳು ಸಾವಿರ ರೂಪಾಯಿ) ಮೌಲ್ಯದ ಚಿನ್ನಾಭರಣ ಹಾಗೂ ಕೈಗಡಿಯಾರ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳಕಾಡುವಿನ ‘ಶ್ರೀದೇವಿ ನಿವಾಸ’ದ ನಿವಾಸಿ ಜಗದೀಶ್ ದಾಸ್ ಎಂಬುವರು ತಮ್ಮ ಮನೆಯ ಹಿಂಭಾಗದ ಕೊಠಡಿಯ ಸಿಮೆಂಟ್ ಸ್ಲಾಬ್ ಕೆಲಸ ಮುಗಿದ ಬಳಿಕ, ಮನೆಯ ಹಾಲ್ನಲ್ಲಿ ಫಾಲ್ ಸೀಲಿಂಗ್ (False Ceiling) ಕೆಲಸವನ್ನು ವಹಿಸಿಕೊಟ್ಟಿದ್ದರು. ಅದರಂತೆ ಐದು ಮಂದಿ ಜುಲೈ 8, 2026 ರಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ದೂರುದಾರ ಜಗದೀಶ್ ದಾಸ್ ಅವರು ತಮ್ಮ ಬೆಡ್ರೂಮ್ನಲ್ಲಿರುವ ಕಬ್ಬಿಣದ ಆಫೀಸ್ ಟೇಬಲ್ ಡ್ರಾವರ್ನಲ್ಲಿ (ಬೀಗ ಹಾಕಿರಲಿಲ್ಲ)
ಸಣ್ಣ ಪರ್ಸ್ನಲ್ಲಿ ಇರಿಸಿದ್ದ:
20 ಗ್ರಾಂ ತೂಕದ ಚಿನ್ನದ ಕಡಗ (1),17 ಗ್ರಾಂ ತೂಕದ ವೆಂಕಟರಮಣ ದೇವರ ಪೆಂಡೆಂಟ್ ಹೊಂದಿದ್ದ ಚಿನ್ನದ ಚೈನ್ (1),8 ಗ್ರಾಂ ತೂಕದ ನವಗ್ರಹ ಉಂಗುರ (1),4 ಗ್ರಾಂ ತೂಕದ ಸಾದಾ ಚಿನ್ನದ ಉಂಗುರ (1)
2000 ಮೌಲ್ಯದ ಸೋನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್, ಒಟ್ಟು 49 ಗ್ರಾಂ ತೂಕದ ₹6.37 ಲಕ್ಷ ಮೌಲ್ಯದ ಆಭರಣಗಳು ಕಳವಾಗಿವೆ. ಜುಲೈ 6 ರಂದು ಕೈಕಡಗವನ್ನು ಬಳಸಿ ವಾಪಸ್ ಅದೇ ಪರ್ಸ್ನಲ್ಲಿಟ್ಟಿದ್ದ ಜಗದೀಶ್ ಅವರು, ಜುಲೈ 16 ರಂದು ಬೆಳಿಗ್ಗೆ ನೋಡಿದಾಗ ಡ್ರಾವರ್ನಲ್ಲಿದ್ದ ಪರ್ಸ್ ನಾಪತ್ತೆಯಾಗಿತ್ತು. ಮನೆಯವರನ್ನು ವಿಚಾರಿಸಿದಾಗ ಯಾರೂ ತೆಗೆದಿರಲಿಲ್ಲ ಎಂಬುದು ಗೊತ್ತಾಗಿದೆ.
ಮನೆಯಲ್ಲಿ ಸೀಲಿಂಗ್ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರೇ ಈ ಕೃತ್ಯ ಎಸಗಿದ್ದಾರೆ ಎಂಬ ದಟ್ಟ ಶಂಕೆ ವ್ಯಕ್ತಪಡಿಸಿ ಜಗದೀಶ್ ದಾಸ್ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.








