ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿರುವ ಬಲ ಪ್ರಯೋಗ, ಲಾಠಿಚಾರ್ಜ್ ಖಂಡಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರಿದ್ದ ಪೀಠವು, “ನಮ್ಮ ಸಮಯವನ್ನೂ ವ್ಯರ್ಥ ಮಾಡಬೇಡಿ, ನಿಮ್ಮ ಸಮಯವನ್ನೂ ವ್ಯರ್ಥ ಮಾಡಿಕೊಳ್ಳಬೇಡಿ” ಎಂದು ಅರ್ಜಿದಾರ ಪರ ವಕೀಲರಿಗೆ ಖಡಕ್ ಆಗಿ ತಿಳಿಸಿದೆ.
ವೀಡಿಯೊ ನೋಡಲು ನಮಗೆ ಸಮಯವಿಲ್ಲ: ಸಿಜೆಐ ಸೂರ್ಯ ಕಾಂತ್ ಅರ್ಜಿ ಪ್ರಸ್ತಾಪಿಸಿದ ವಕೀಲ ನರೇಂದ್ರ ಮಿಶ್ರಾ, ಪೊಲೀಸರ ಕ್ರೌರ್ಯ ಮತ್ತು ಲಾಠಿಚಾರ್ಜ್ ಪ್ರದರ್ಶಿಸುವ ವೀಡಿಯೊ ಆಧಾರಗಳು ತಮ್ಮ ಬಳಿಯಿವೆ ಎಂದು ಪೀಠದ ಗಮನಕ್ಕೆ ತರಲು ಯತ್ನಿಸಿದರು. ನಮಗೆ ವೀಡಿಯೊಗಳನ್ನು ವೀಕ್ಷಿಸಲು ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ. ಈ ವಿಷಯದಲ್ಲಿ ನ್ಯಾಯಾಲಯದ ಸಮಯವನ್ನು ದಯವಿಟ್ಟು ವ್ಯರ್ಥ ಮಾಡಬೇಡಿ ಎಂದು ಸಿಜೆಐ ಅರ್ಜಿದಾರರ ಮಾತಿಗೆ ಅಡ್ಡಿಪಡಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇನ್ನೂ ಸ್ಥಳದಲ್ಲೇ ಇದ್ದಾರೆ, ದಯವಿಟ್ಟು ಗುರುವಾರ ವಿಚಾರಣೆಗೆ ಪಟ್ಟಿ ಮಾಡಿ ಎಂದು ವಕೀಲರು ವಿನಂತಿಸಿದಾಗ, ಇಲ್ಲ, ನಾಳೆ ನಮಗೆ ಸಮಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. ಸುಪ್ರೀಂ ಕೋರ್ಟ್ಗಿಂತ ಒಂದು ದಿನ ಮುಂಚಿತವಾಗಿ, ಅಂದರೆ ಮಂಗಳವಾರವಷ್ಟೇ ದೆಹಲಿ ಹೈಕೋರ್ಟ್ ಕೂಡ ಇದೇ ರೀತಿಯ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ಈ ರೀತಿಯ ವಿಷಯಗಳು ಮತ್ತು ರಾಜಕೀಯ ಪ್ರತಿಭಟನೆಗಳೊಳಗೆ ನ್ಯಾಯಾಲಯವನ್ನು ಎಳೆದು ತರಬೇಡಿ ಎಂದು ಹೈಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿತ್ತು.
ಸಿಜೆಪಿ ಪ್ರತಿಭಟನೆಯ ಹಿನ್ನೆಲೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಜೂನ್ 20 ರಿಂದ ಜಂತರ್ ಮಂತರ್ನಲ್ಲಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಜುಲೈ 20 ರಂದು ನಡೆದ ‘ಸಂಸತ್ ಚಲೋ’ ಮೆರವಣಿಗೆಯ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ಘರ್ಷಣೆ ನಡೆದು, ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ್ದರು. ಈ ಘಟನೆಯಲ್ಲಿ 170 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪೊಲೀಸರ ಈ ಅತಿಯಾದ ಬಲಪ್ರಯೋಗದ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ನ್ಯಾಯಾಲಯದ ಬಾಗಿಲು ತಟ್ಟಿದ್ದ ಪ್ರತಿಭಟನಾಕಾರರಿಗೆ ಈಗ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡರಿಂದಲೂ ಹಿನ್ನಡೆಯಾಗಿದೆ.








