ಕಾರ್ಕಳ: ರೆಂಜಾಳ ಗ್ರಾಮದ ಹೆಡ್ಮೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ, ಬೆಂಗಳೂರಿನ ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹರಿಪ್ರಸಾದ್, ಸುಮಿತ್ರಾ ಅವರ ಮನೆಯ ಸಮೀಪ ಗುಡ್ಡದ ಒಂದು ಭಾಗ ಕುಸಿದಿದ್ದು, ಮನೆಗೂ ಅಪಾಯ ಎದುರಾಗಿರುವ ಕಾರಣ ಜಿಲ್ಲಾಡಳಿತ ಈಗಾಗಲೇ ಕುಟುಂಬ ವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಮತ್ತಷ್ಟು ಭೂಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಅವರ ನಿರ್ದೇಶನದಂತೆ ಜಿಎಸ್ಐ ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿತ್ತು. ವಿಜ್ಞಾನಿಗಳ ತಂಡ ಸ್ಥಳದಲ್ಲಿ ಗುಡ್ಡದ ಇಳಿಜಾರು, ಮಣ್ಣಿನ ರಚನೆ, ಬಂಡೆಗಳ ಸ್ಥಿರತೆ, ಮಳೆ ನೀರಿನ ಹರಿವಿನ ದಿಕ್ಕು, ಭೂಮಿಯಲ್ಲಿ ಉಂಟಾಗಿರುವ ಬಿರುಕುಗಳು ಹಾಗೂ ಮುಂದಿನ ದಿನಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳ ಕುರಿತು ತಾಂತ್ರಿಕವಾಗಿ ಪರಿಶೀಲನೆ ನಡೆಸಿತು.
ಸ್ಥಳದ ವಿವಿಧ ಭಾಗಗಳಲ್ಲಿ ಮಾಹಿತಿ ಸಂಗ್ರಹಿಸಿ, ಮುಂದಿನ ಸುರಕ್ಷ ಕ್ರಮಗಳಿಗೆ ಅಗತ್ಯವಾಗುವ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ವಿಜ್ಞಾನಿಗಳ ತಂಡ ಮಾಹಿತಿ ನೀಡಿದೆ. ಪರಿಶೀಲನೆ ವೇಳೆ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಅವರ ನಿರ್ದೇಶನದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಕಾರ್ಕಳ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿ ಉಪಸ್ಥಿತರಿದ್ದರು.








