ಬೆಂಗಳೂರು: ಹಲವು ಸುತ್ತಿನ ಸಭೆಗಳು ಹಾಗೂ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ, ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ 13 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಖಾತೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಅಧಿಕೃತ ಅನುಮೋದನೆಗಾಗಿ ರಾಜಭವನಕ್ಕೆ ಕಳುಹಿಸಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಖಾತೆ ನಿರ್ವಹಿಸುತ್ತಿದ್ದ ಕೆ.ಎಚ್. ಮುನಿಯಪ್ಪ ಅವರಿಗೆ ಅವರ ಒತ್ತಾಸೆಯಂತೆ ಸಮಾಜ ಕಲ್ಯಾಣ ಇಲಾಖೆನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಮುನಿಯಪ್ಪ ಅವರು ಇದೇ ಖಾತೆಗಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ರಾಜ್ಯಪಾಲರ ಅಧಿಕೃತ ಅನುಮೋದನೆಯ ಬಳಿಕ ಖಾತೆ ಹಂಚಿಕೆ ಅಂತಿಮವಾಗಿ ಘೋಷಣೆಯಾಗಲಿದೆ.
ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ 19 ಸಚಿವರ ಪೈಕಿ ಸದ್ಯ 13 ಮಂದಿಗೆ ಮಾತ್ರ ಖಾತೆ ಹಂಚಿಕೆ ಮಾಡಲಾಗಿದೆ. ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಅಗತ್ಯವಾಗಿದ್ದರೂ, ಅಬಕಾರಿ ಸೇರಿದಂತೆ ಕೆಲವು ಪ್ರಮುಖ ಖಾತೆಗಳು ಇನ್ನೂ ಹಂಚಿಕೆಯಾಗಿಲ್ಲ. ತೀವ್ರ ಆಕ್ಷೇಪಕ್ಕೆ ಗುರಿಯಾಗಿರುವ ನಾಗೇಂದ್ರ ಸೇರಿದಂತೆ ಆರು ಸಚಿವರಿಗೆ ಸದ್ಯ ಯಾವುದೇ ಖಾತೆ ನೀಡಲಾಗಿಲ್ಲ.
ಖಾತೆ ಪಡೆದ ಸಚಿವರ ಪಟ್ಟಿ
- ಚಲುವರಾಯಸ್ವಾಮಿ — ಕೃಷಿ
- ರಿಜ್ವಾನ್ ಅರ್ಷದ್ — ಆಹಾರ ಮತ್ತು ನಾಗರಿಕ ಸರಬರಾಜು
- ಕೆ.ಎಚ್. ಮುನಿಯಪ್ಪ — ಸಮಾಜ ಕಲ್ಯಾಣ
- ಸಂತೋಷ್ ಲಾಡ್ — ಕಾರ್ಮಿಕ
- ಬಸಂತಪ್ಪ — ಮೀನುಗಾರಿಕೆ
- ಮಧು ಬಂಗಾರಪ್ಪ — ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತೆ
- ರಾಯರೆಡ್ಡಿ — ಉನ್ನತ ಶಿಕ್ಷಣ
- ಜಮೀರ್ ಖಾನ್ — ವಸತಿ
- ಲಕ್ಷ್ಮಣ ಸವದಿ — ಸಹಕಾರ
- ಅಜಯ್ ಸಿಂಗ್ — ಅರಣ್ಯ
- ಎಸ್.ಎಸ್. ಮಲ್ಲಿಕಾರ್ಜುನ — ಗಣಿ ಮತ್ತು ವಿಜ್ಞಾನ
- ಮಾಗಡಿ ಬಾಲಕೃಷ್ಣ — ಸಣ್ಣ ನೀರಾವರಿ
ಬಾಲಕೃಷ್ಣ ಹಾಗೂ ನಾಗೇಂದ್ರ ಅವರ ಸಚಿವ ಸ್ಥಾನ ಬದಲಾಗಬಹುದು ಎಂಬ ವದಂತಿಗಳು ಈ ಹಿಂದೆ ಹರಿದಾಡಿದ್ದವು. ಆದರೆ ಬಾಲಕೃಷ್ಣ ಅವರಿಗೆ ಖಾತೆ ನೀಡಿರುವುದರಿಂದ ಸಚಿವ ಸಂಪುಟದಲ್ಲಿ ಬದಲಾವಣೆಯಾಗುವ ಸಾಧ್ಯತೆಯ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ಹೊರಬಂದಿಲ್ಲ.








