ನವದೆಹಲಿ : ಕೊಂಕಣ ರೈಲ್ವೆ ನಿಗಮದ (KRCL) ಮೂಲಸೌಕರ್ಯ ನವೀಕರಣ, ಸುರಕ್ಷತೆ ಹಾಗೂ ಸಾಮರ್ಥ್ಯ ವರ್ಧನೆಗಾಗಿ ಹಣಕಾಸು ನೆರವು ನೀಡುವ ಉದ್ದೇಶದಿಂದ ಸಂಸ್ಥೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಮತ್ತು ಶೇ 100ರಷ್ಟು ಸಂಪೂರ್ಣ ಕೇಂದ್ರ ಸರ್ಕಾರಿ ಸ್ವಾಮ್ಯಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಷೇರುದಾರ ರಾಜ್ಯಗಳಿಂದ ಷೇರು ವರ್ಗಾವಣೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದ್ದಾರೆ.
ಆಗಸ್ಟ್ 12ರಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ ಸಚಿವರು, “ಗೋವಾ ಸರ್ಕಾರ ಮಾತ್ರ ತನ್ನ ಷೇರುಗಳನ್ನು ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಲು ಒಪ್ಪಿಗೆ ಸೂಚಿಸಿದೆ. ಆದರೆ, ಮಹಾರಾಷ್ಟ್ರ ಸರ್ಕಾರವು ತನ್ನ ಇಕ್ವಿಟಿ ಬಂಡವಾಳ ಹೂಡಿಕೆಯನ್ನು ಮರುಪಾವತಿಸುವಂತೆ (Refund) ಒತ್ತಾಯಿಸಿದ್ದರೆ, ಕರ್ನಾಟಕ ಸರ್ಕಾರವು ವಿವಿಧ ರೀತಿಯ ನಿರ್ಗಮನ (Exit options) ಮಾರ್ಗಗಳನ್ನು ಪರಿಶೀಲಿಸುತ್ತಿದೆ” ಎಂದು ವಿವರಿಸಿದರು.
1990ರಲ್ಲಿ ಸ್ಥಾಪನೆಯಾದ ಕೆಆರ್ಸಿಎಲ್, ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರು (ಮಂಗಳೂರು) ವರೆಗಿನ 739 ಕಿ.ಮೀ ರೈಲು ಮಾರ್ಗವನ್ನು ನಿರ್ವಹಿಸುತ್ತಿದೆ. ಇದರಲ್ಲಿ ರೈಲ್ವೆ ಸಚಿವಾಲಯ (ಶೇ 66.79), ಮಹಾರಾಷ್ಟ್ರ (ಶೇ 14.91), ಕರ್ನಾಟಕ (ಶೇ 10.17), ಗೋವಾ (ಶೇ 4.07) ಹಾಗೂ ಕೇರಳ (ಶೇ 4.07) ಷೇರುಗಳನ್ನು ಹೊಂದಿವೆ.
ಮಾರ್ಗದ ಮೂಲಸೌಕರ್ಯವು 30 ವರ್ಷ ಹಳೆಯದಾಗಿದ್ದು, ಸುರಂಗಗಳ ನಿರ್ವಹಣೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕೆ ಗಣನೀಯ ಬಂಡವಾಳದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಅಗತ್ಯ ಬಂಡವಾಳ ಹೂಡಿಕೆ ಮಾಡಬೇಕು ಇಲ್ಲವೇ ತಮ್ಮ ಷೇರುಗಳನ್ನು ಕೇಂದ್ರಕ್ಕೆ ಬಿಟ್ಟುಕೊಡಬೇಕು ಎಂದು ಸಚಿವಾಲಯ ಕೋರಿತ್ತು.
739 ಕಿ.ಮೀ ಮಾರ್ಗದಲ್ಲಿ ರೋಹಾ-ವೀರ್ ಮತ್ತು ಮಡ್ಗಾಂವ್-ಮಜೋರ್ಡಾ ನಡುವಿನ 55 ಕಿ.ಮೀ ಹಳಿ ದ್ವಿಗುಣಗೊಳಿಸುವಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ ಸಾಮರ್ಥ್ಯ ಹೆಚ್ಚಳಕ್ಕಾಗಿ ಗುರುತಿಸಲಾದ 263 ಕಿ.ಮೀ ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸುವಿಕೆ ಕಾರ್ಯಸಾಧ್ಯತಾ ಸಮೀಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ ಕೊಂಕಣ ರೈಲ್ವೆಯಲ್ಲಿ ಹೆಚ್ಚು ಷೇರು ಹೊಂದಿರುವ ಮಹಾರಾಷ್ಟ್ರ ಮತ್ತು ಕರ್ನಾಟಕದ ನಿರ್ಧಾರದ ಮೇಲೆ ಈ ವೀಲಿನ ನಿಂತಿದೆ.








