ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ದಶಕದಲ್ಲಿ ಭಾರತವು ಕೊರೊನಾ ಸಾಂಕ್ರಾಮಿಕ ರೋಗ, ಅಂತಾರಾಷ್ಟ್ರೀಯ ಯುದ್ಧಗಳು ಮತ್ತು ಅಗತ್ಯ ವಸ್ತುಗಳ ಅಭಾವದಂತಹ ಸಾಲು ಸಾಲು ಸವಾಲುಗಳನ್ನು ಎದುರಿಸಿದ್ದರೂ, ಮುನ್ನೆಚ್ಚರಿಕೆ ಹಾಗೂ ನಿಖರ ಯೋಜನೆಯಿಂದ ಅವುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿದೆ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲೇ ಪ್ರಧಾನಿ ಮೋದಿ ಸುದೀರ್ಘ ಭಾಷಣಕ್ಕೆ ಬ್ರೇಕ್: ಕೆಂಪುಕೋಟೆಯಲ್ಲಿ 78 ನಿಮಿಷಗಳಲ್ಲೇ ಮುಗಿದ ಮಾತು!
ಕೊರೊನಾ ಸಾಂಕ್ರಾಮಿಕವು ಇಡೀ ಜಗತ್ತನ್ನು ಅನಿಶ್ಚಿತತೆಗೆ ತಳ್ಳಿ, ಜಾಗತಿಕ ವ್ಯವಸ್ಥೆಗಳನ್ನೇ ಬುಡಮೇಲು ಮಾಡಿತ್ತು. ವಿಶ್ವದ ದೇಶಗಳು ಆ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ ಉಕ್ರೇನ್ ಹಾಗೂ ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿದ ಯುದ್ಧಗಳು ಮತ್ತಷ್ಟು ಹೊಸ ಸವಾಲುಗಳನ್ನು ತಂದೊಡ್ಡಿದವು ಎಂದು ಪ್ರಧಾನಿ ಸ್ಮರಿಸಿದರು. ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಕೆಲವರು ಭಾರತೀಯರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಿ, ದುರಂತದ ಭವಿಷ್ಯ ನುಡಿಯುವ ಮೂಲಕ ಆನಂದಪಡುತ್ತಿದ್ದರು ಎಂದು ಪ್ರಧಾನಿ ಮೋದಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ 10 ರಿಂದ 12 ವರ್ಷಗಳಲ್ಲಿ ಸರ್ಕಾರ ಜಾರಿಗೆ ತಂದ ಸುಸಜ್ಜಿತ ಯೋಜನೆಗಳು ಮತ್ತು ನೀತಿಗಳು ಇಂದು ಅತ್ಯುತ್ತಮ ಫಲ ನೀಡುತ್ತಿವೆ ಎಂದು ಮೋದಿ ಪ್ರತಿಪಾದಿಸಿದರು. ಈ ಸುಧೀರ್ಘ ಯೋಜನಾಬದ್ಧ ತಯಾರಿಯಿಂದಾಗಿಯೇ ಭಾರತವು ಯಾವುದೇ ಜಾಗತಿಕ ಆಘಾತಗಳನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಕಷ್ಟದ ಸಮಯದಲ್ಲಿ ನಮ್ಮ ಸರ್ಕಾರವು “ನಾಗರಿಕ್ ದೇವೋ ಭವ” ಎಂಬ ತತ್ವಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಿದ್ದು, ಪ್ರತಿಯೊಬ್ಬ ಪ್ರಜೆಯ ಭದ್ರತೆ ಮತ್ತು ಕ್ಷೇಮಕ್ಕೆ ಮೊದಲ ಆದ್ಯತೆ ನೀಡಿದೆ ಎಂದು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.








