ಮಂಗಳೂರು:ಮೂಡುಬಿದಿರೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಲ್ಲಿ ಓರ್ವ ಕಾಂಗ್ರೆಸ್ ಮುಖಂಡ ಸೇರಿ ಮೂವರ ಮೇಲೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ನಿರ್ವಹಿಸುವ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಪ್ತ ರಿತಿಲ್ ಪೂಜಾರಿ, ಸಂಘ ಪರಿವಾರದ ಕಾರ್ಯಕರ್ತರಾದ ಪ್ರೇಮ್ ಭಂಡಾರಿ, ಬಜರಂಗದಳ ಮಾಜಿ ಸಂಚಾಲಕ ಸಂಜಯ್ ಹೆಗ್ಡೆ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೂಡುಬಿದಿರೆಯ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಮೂಡುಬಿದಿರೆ ಬಸ್ ನಿಲ್ದಾಣದ ಬಳಿಯ ಕೆಫೆಯೊಂದಕ್ಕೆ ಉಪಾಹಾರ ಸೇವಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ಕೆಫೆಗೆ ಅಕ್ರಮವಾಗಿ ನುಗ್ಗಿ ವಿದ್ಯಾರ್ಥಿಗಳ ಹೆಸರು ಕೇಳಿ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಆರೋಪಿಗಳ ಬೆದರಿಕೆಯಿಂದ ಹೆದರಿದ ವಿದ್ಯಾರ್ಥಿಗಳು ದೂರು ನೀಡಲು ನಿರಾಕರಿಸಿದ್ದರು. ಆದರೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್ಸೈ ಪ್ರತಿಭಾ ನೀಡಿರು ದೂರಿನಂತೆ ಕಲಂ126(2), 352, 351(2) 2 3(5)ಬಿಎನ್ಎಸ್ ನಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ಪೈಕಿ ಸಂಘ ಪರಿವಾರದ ಕಾರ್ಯಕರ್ತರಾದ ಪ್ರೇಮ್ ಭಂಡಾರಿ, ಸಂಜಯ್ ಹೆಗ್ಡೆ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯೊಂದರಲ್ಲೇ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಇವರ ಮೇಲೆ ರೌಡಿ ಶೀಟ್ ತೆರೆಯಲಾಗಿತ್ತು. ಸದ್ಯ ಆರೋಪಿಗಳ ರೌಡಿ ಶೀಟ್ ಸಂಬಂಧಿತ ಬಾಂಡ್ ನ ಅವಧಿ ಮುಗಿದಿದೆ ಎಂದು ತಿಳಿದು ಬಂದಿದೆ.








