ಮನೆಯಲ್ಲಿ ಸಿಸಿಟಿವಿ ಕಣ್ಗಾವಲು ಇಟ್ಟಿದ್ದಲ್ಲದೆ, ತಡರಾತ್ರಿಯ ಪಾರ್ಟಿ ಹಾಗೂ ಖರ್ಚಿನ ವಿಷಯಕ್ಕೆ ಪದೇ ಪದೇ ಕಿರಿಕಿರಿ ಮಾಡುತ್ತಿದ್ದ ಮಾವನ ಕಿರುಕುಳ ತಾಳಲಾರದೆ, ಸೊಸೆಯೇ ಮಾಜಿ ಮನೆಕೆಲಸದವನಿಗೆ ಸುಪಾರಿ ನೀಡಿ ಭೀಕರವಾಗಿ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕೊಲೆಯಾದವರನ್ನು ಪ್ರಸಿದ್ಧ ಔಷಧ ಉದ್ಯಮಿ ವಿನೀತ್ ಮಿನೋಚಾ (63) ಎಂದು ಗುರುತಿಸಲಾಗಿದೆ. ಅವರು ಶನಿವಾರ ರಾತ್ರಿ ತಮ್ಮ ಅಪಾರ್ಟ್ಮೆಂಟ್ನಲ್ಲೇ 26 ಬಾರಿ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಸಿಸಿಟಿವಿ ತನಿಖೆಯಿಂದ ಬಯಲಾಯ್ತು ರಹಸ್ಯ:
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕಾನ್ಪುರ ಪೊಲೀಸರು ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕುಟುಂಬದ ಮಾಜಿ ಉದ್ಯೋಗಿ ವಿಶಾಲ್ (30) ಮತ್ತು ಆತನ ಸಹಚರ ರಾಜ್ ಕಿಶೋರ್ ನಡೆದಾಡಿದ್ದು ಕಂಡುಬಂದಿದೆ. ಭಾನುವಾರ ತಡರಾತ್ರಿ ನಡೆದ ಪೋಲಿಸ್ ಎನ್ಕೌಂಟರ್ ಬಳಿಕ ಇಬ್ಬರೂ ಆರೋಪಿಗಳನ್ನು ಬಂಧಿಸಲಾಯಿತು. ವಿಚಾರಣೆ ವೇಳೆ, ವಿನೀತ್ ಅವರ ಸೊಸೆ ಶಾಲು (36) ನೀಡಿದ ಸುಪಾರಿ ಆಧರಿಸಿ ಈ ಕೊಲೆ ನಡೆಸಿರುವುದಾಗಿ ವಿಶಾಲ್ ಬಾಯಿಬಿಟ್ಟಿದ್ದಾನೆ. ತಕ್ಷಣವೇ ಶಾಲು ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆರಂಭದಲ್ಲಿ ದಾರಿ ತಪ್ಪಿಸಲು ಯತ್ನಿಸಿದರೂ ಬಳಿಕ ಆಕೆ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ಶ್ರೀಮಂತ ಕುಟುಂಬದ ಸೊಸೆಯಾಗಿದ್ದರೂ ಶಾಲು ಅವರಿಗೆ ಮನೆಯ ವೆಚ್ಚದ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಸಣ್ಣಪುಟ್ಟ ಖರ್ಚಿಗೂ ಮಾವ ವಿನೀತ್ ಬಳಿಯೇ ಹಣ ಕೇಳಬೇಕಿತ್ತು. ಜೊತೆಗೆ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ವಿನೀತ್, ಶಾಲು ಅವರ ಪ್ರತಿಯೊಂದು ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಜುಲೈ 28 ರಂದು ಶಾಲು ಪಾರ್ಟಿಯಿಂದ ತಡವಾಗಿ ಮನೆಗೆ ಮರಳಿದ್ದಾಗ ಮಾವ-ಸೊಸೆ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ಕಿರಿಕಿರಿಯಿಂದ ಮುಕ್ತಿ ಪಡೆಯಲು ಶಾಲು ಮಾವನನ್ನೇ ಮುಗಿಸಲು ಸಂಚು ರೂಪಿಸಿದ್ದರು.
ಮಾಜಿ ಕೆಲಸಗಾರ ವಿಶಾಲ್ನನ್ನು ಸಂಪರ್ಕಿಸಿದ ಶಾಲು, ಮಾವನನ್ನು ಕೊಲ್ಲಲು ₹6 ಲಕ್ಷ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ ₹2 ಲಕ್ಷ ಹಾಗೂ ಕೆಲಸ ಮುಗಿದ ಬಳಿಕ ಉಳಿದ ₹4 ಲಕ್ಷ ನೀಡುವುದಾಗಿ ತಿಳಿಸಿದ್ದರು. ಸೆಪ್ಟೆಂಬರ್ 4ರಂದು ಜನ್ಮಾಷ್ಟಮಿ ಹಬ್ಬದ ನೆಪದಲ್ಲಿ ವಿಶಾಲ್ಗೆ ನಕಲಿ ಕೀಲಿಕೈ ನೀಡಿದ್ದ ಶಾಲು, ಶನಿವಾರ ರಾತ್ರಿ ತಮ್ಮ ಪತಿ ಸುಬ್ರತ್ ಹಾಗೂ ಮಗುವಿನೊಂದಿಗೆ ಪಾರ್ಟಿಗೆ ತೆರಳಿದ್ದರು.
ಪಾರ್ಟಿಗೆ ಹೋಗುವ ಮುನ್ನ ಭದ್ರತಾ ಸಿಬ್ಬಂದಿಗೆ ಫೋನ್ ಮಾಡಿ, “ಔಷಧಿ ತಲುಪಿಸಲು ವಿಶಾಲ್ ಬರುತ್ತಿದ್ದಾನೆ ಒಳಗೆ ಬಿಡಿ” ಎಂದು ಹೇಳಿದ್ದರು. ಯೋಜನೆಯಂತೆ ವಿನೀತ್ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ಹೃದಯಾಘಾತವೆಂದು ಬಿಂಬಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ವಿನೀತ್ ಮಲಗುವ ಕೋಣೆಗೆ ಬರುತ್ತಿದ್ದಂತೆ ವಿಶಾಲ್ ಹಾಗೂ ರಾಜ್ ಕಿಶೋರ್ ಚಾಕುವಿನಿಂದ ಬರೋಬ್ಬರಿ 26 ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಕಳುವಾಗದಿರುವುದು ಪೊಲೀಸರಿಗೆ ಸುಪಾರಿ ಕೊಲೆಯ ಅನುಮಾನ ತಂದಿತ್ತು. ಸದ್ಯ ಮುಖ್ಯ ರೂವಾರಿ ಶಾಲು ಹಾಗೂ ಇಬ್ಬರು ಹಂತಕರನ್ನು ಜೈಲಿಗಟ್ಟಲಾಗಿದ್ದು, ಈ ಕೊಲೆ ಸಂಚಿನಲ್ಲಿ ಶಾಲು ಪತಿ ಸುಬ್ರತ್ ಅವರ ಪಾತ್ರವೇನಾದರೂ ಇದೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








