ಮಂಗಳೂರು: ಕಂಕನಾಡಿ ನಾಗುರಿ ಪ್ರದೇಶದಲ್ಲಿ ಕಂಪೌಂಡ್ ವಾಲ್ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಇಬ್ಬರು ಪುಟ್ಟ ಮಕ್ಕಳಿಗೆ ಗುರುವಾರ ನಂದಿಗುಡ್ಡೆ ರುದ್ರಭೂಮಿಯಲ್ಲಿ ಕಣ್ಣೀರಿನ ವಿದಾಯ ಹೇಳಲಾಯಿತು. ಕುಟುಂಬಸ್ಥರ ಆಕ್ರಂದನ, ಬಂಧು-ಬಳಗ ಹಾಗೂ ಸ್ಥಳೀಯರ ದುಃಖದ ನಡುವೆ ಅಂತ್ಯಕ್ರಿಯೆ ನೆರವೇರಿತು.
ದುರಂತದಲ್ಲಿ ಮೃತಪಟ್ಟ 8 ವರ್ಷದ ಅನಾಮಿಕ ಚೌರಾಸಿಯ ಹಾಗೂ 4 ವರ್ಷದ ಪರಿ (ತನು) ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೂ ಮುನ್ನ ನಾಗುರಿಯಲ್ಲಿರುವ ನಿವಾಸಕ್ಕೆ ತರಲಾಗಿತ್ತು. ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನೂರಾರು ಮಂದಿ ಆಗಮಿಸಿ ಮಕ್ಕಳಿಗೆ ಅಂತಿಮ ನಮನ ಸಲ್ಲಿಸಿದರು.
ಇನ್ನೇನು ಕೆಲವೇ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಆಟವಾಡುತ್ತಿದ್ದ ಪುಟ್ಟ ಕಂದಮ್ಮಗಳನ್ನು ಜೀವವಿಲ್ಲದ ಸ್ಥಿತಿಯಲ್ಲಿ ಕಂಡು ಸ್ಥಳೀಯರು ಭಾವುಕರಾದರು. ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ರೋಧನ ಇಡೀ ವಾತಾವರಣವನ್ನು ಮೌನದಲ್ಲಿ ಮುಳುಗಿಸಿತು.
ಮೃತ ಮಕ್ಕಳ ಮನೆ ಸಮೀಪದಲ್ಲೇ ಇರುವ ಕಂಕನಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕರ್ತವ್ಯದ ನಡುವೆಯೂ ಮಕ್ಕಳ ಅಕಾಲಿಕ ಸಾವಿಗೆ ಮರುಗಿದ ಪೊಲೀಸರು ಕಣ್ಣೀರಿನ ನಮನ ಸಲ್ಲಿಸಿದರು.
ಬಳಿಕ ಬಂಧು-ಬಳಗ, ಸ್ಥಳೀಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ನಂದಿಗುಡ್ಡೆ ಚಿತಾಗಾರದಲ್ಲಿ ಇಬ್ಬರು ಮಕ್ಕಳ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.








