ಪಾಟ್ನಾ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಬಿಹಾರದ ಸಿವಾನ್ ಜಿಲ್ಲೆಯಲ್ಲಿ (Siwan, Bihar) ಜುಲೈ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ (Students Protest on NEET) ವೇಳೆ ಪೊಲೀಸರು ಎಕೆ-47 ರೈಫಲ್ ಬಳಸಿದ ವಿವಾದದ ಹಿನ್ನೆಲೆಯಲ್ಲಿ, ಸಿವಾನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಪುರನ್ ಕುಮಾರ್ ಝಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಅವರನ್ನು ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಅವರಿಗೆ ಯಾವುದೇ ಹೊಸ ಹುದ್ದೆಯನ್ನು ನೀಡಿಲ್ಲ. ಎಕೆ-47 ರೈಫಲ್ ಬಳಸಿದ್ದ ಕಾನ್ಸ್ಟೆಬಲ್ ಅಭಿಷೇಕ್ ಕುಮಾರ್ ಅವರನ್ನು ಈ ಹಿಂದೆಯೇ ಅಮಾನತುಗೊಳಿಸಲಾಗಿದೆ. ಈಗ ಉನ್ನತಾಧಿಕಾರಿಯ ಸರದಿಯಾಗಿದೆ.
ಜುಲೈ 25 ರಂದು ಸಿವಾನ್ನ ಜೆಪಿ ಚೌಕ್ ಬಳಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಪ್ರತಿಭಟನಾಕಾರರ ಗುಂಪಿನ ನಡುವೆ ಸಿಲುಕಿದ್ದ ಕಾನ್ಸ್ಟೆಬಲ್ ಅಭಿಷೇಕ್ ಕುಮಾರ್, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಕೆ-47 ನಿಂದ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದರು ಎನ್ನಲಾಗಿದೆ. ಈ ಘಟನೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಸರ್ಕಾರದ ಸ್ಪಷ್ಟನೆ: ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ. ಕಾನ್ಸ್ಟೆಬಲ್ ಅವರು ಪ್ರತಿಭಟನಾಕಾರರ ಗುಂಪಿನ ನಡುವೆ ಸಿಲುಕಿದ್ದಾಗ, ಪರಿಸ್ಥಿತಿಯನ್ನು ನಿಭಾಯಿಸಲು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಆದರೆ, ಅಂದಿನ ಘಟನೆಯ ದಿನದಂದು ಪೊಲೀಸ್ ಕ್ರಮದಿಂದ ಮೂವರು ಪ್ರತಿಭಟನಾಕಾರರಿಗೆ ಗಾಯಗಳಾಗಿದ್ದವು. ಆದರೆ, ಎಕೆ-47 ರೈಫಲ್ನಿಂದ ಹಾರಿಸಲಾದ ಗುಂಡಿಗೂ ಆ ಗಾಯ ಘಟನೆಗೂ ಸಂಬಂಧ ಇಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.
ಗುಂಡು ಹಾರಿಸಿದ ಕಾನ್ಸ್ಟೆಬಲ್ ಅಭಿಷೇಕ್ ಕುಮಾರ್ ಅವರನ್ನು ಈಗಾಗಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದೀಗ ಸಿವಾನ್ ಜಿಲ್ಲೆಯ ಉಸ್ತುವಾರಿ ಹೊಂದಿದ್ದ ಎಸ್ಪಿ ಪುರನ್ ಕುಮಾರ್ ಝಾ ಅವರನ್ನೂ ಸ್ಥಾನದಿಂದ ತೆರವುಗೊಳಿಸಲಾಗಿದೆ








