ಮಹಾರಾಷ್ಟ್ರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾವ್ಡಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ 19 ವರ್ಷದ ಮಗನನ್ನು ರಕ್ಷಿಸಲು ಹೋಗಿ ಹೆತ್ತ ಪೋಷಕರೂ ಪ್ರಾಣ ಕಳೆದುಕೊಂಡಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ.
ಈ ಘಟನೆ ಬರೀ ಐಫೋನ್ ಇಎಂಐಗೆ ಸಂಬಂಧ ನಡೆದಿಲ್ಲವೆಂದು ಮೃತರ ಸಂಬಂಧಿ ತಿಳಿಸಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ.
ದುರಂತವು ಐಫೋನ್ ಇಎಂಐಗಾಗಿ ಆಗಿಲ್ಲ. ಆಗಾಗ್ಗೆ ಮನೆಯಲ್ಲಿ ಪೋಷಕರ ಮಧ್ಯೆ ನಡೆಯುತ್ತಿದ್ದ ಜಗಳದಿಂದ ಸಂಭವಿಸಿದೆ ಎಂದು ಮೃತರ ಸಂಬಂಧಿ ತಿಳಿಸಿದ್ದಾರೆ.
ಮೃತನ ಅಣ್ಣನ ಸಾವಿನ ಬಳಿಕ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಎಂದು ಮೂಲಗಳ ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ವರ್ಷವೂ ಆತ್ಮಹತ್ಯೆಗೆ ಯತ್ನಿಸಿದ್ದ..
ಕುನಾಲ್ ಕಳೆದ ವರ್ಷ ಇದೇ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಮಯದಲ್ಲಿ ಆತನ ಮನವೊಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಅವರು ವಿಫಲರಾದರು.
ತಂದೆ ಮುರಳೀಧರ್ 250 ಅಡಿ ಆಳದ ಕಮರಿಗೆ ಬಿದ್ದರು, ಮತ್ತು ಮಗನ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ತಾಯಿ ಸಂಗೀತಾ ಕೂಡ ಅದೇ ಕಮರಿಗೆ ಹಾರಿದರು – ಇಬ್ಬರೂ ತಮ್ಮ ಎರಡನೇ ಮಗನೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದರು.
ಮೂಲಗಳ ಪ್ರಕಾರ, ಆರು ವರ್ಷಗಳ ಹಿಂದೆ ದಂಪತಿಯ ಹಿರಿಯ ಮಗ ಅನಾರೋಗ್ಯದಿಂದ ಮೃತಪಟ್ಟ ನಂತರ ಈ ಕೌಟುಂಬಿಕ ಕಲಹ ಪ್ರಾರಂಭವಾಗಿತ್ತು.
ಚಾಲಕನಾಗಿ ಕೆಲಸ ಮಾಡುತ್ತಿದ್ದ ತಂದೆ, ಕೆಲಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದರು. ಅವರು ಸತತವಾಗಿ ಹಲವು ತಿಂಗಳುಗಳ ಕಾಲ ಮನೆಗೆ ಬರುತ್ತಿರಲಿಲ್ಲ ಎಂದು ವರದಿಯಾಗಿದೆ.
ಆತ್ಮಹತ್ಯೆಗೂ ಎರಡು ದಿನಗಳ ಮೊದಲು ಅವರು ಮನೆಗೆ ಮರಳಿದ್ದರು, ಇದು ಮನೆಯಲ್ಲಿ ಜಗಳಕ್ಕೆ ಕಾರಣವಾಗಿತ್ತು.
ಕುನಾಲ್ ಐಫೋನ್ ಖರೀದಿಸಿದ್ದ, ಆದರೆ ಅದರ ಕಂತುಗಳನ್ನು (ಇಎಂಐ) ಪಾವತಿಸಲು ಆತನಿಗೆ ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರವಾಗಿ ಆತ ಮತ್ತು ಆತನ ತಂದೆಯ ನಡುವೆ ವಾಗ್ವಾದ ನಡೆದಿತ್ತು, ಆ ನಂತರ ಬೆಳಗ್ಗೆ 10 ಗಂಟೆ ಸುಮಾರಿಗೆ ಆತ ಬೆಟ್ಟದ ಕಡೆಗೆ ಹೋಗಿದ್ದ ಎನ್ನಲಾಗಿದೆ.
ತಾಯಿ ಸಂಗೀತಾರ ನಿಗೂಢ ಪೋಸ್ಟ್..
ಸಂಗೀತಾ ಚಾಂದಗುಡೆ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳು ಕೂಡ ಕುಟುಂಬದಲ್ಲಿನ ಉದ್ವಿಗ್ನತೆಯ ಸುಳಿವು ನೀಡಿದ್ದವು. ಅವರು 29,000ಕ್ಕೂ ಹೆಚ್ಚು ಚಂದಾದಾರರನ್ನು (ಸಬ್ಸ್ಕ್ರೈಬರ್ಸ್) ಹೊಂದಿದ್ದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು.
“ನೀವು ನನ್ನ ಮತ್ತು ನನ್ನ ಮಗನ ಆಸ್ತಿಯ ಹಕ್ಕನ್ನು ಕಸಿದುಕೊಂಡಿದ್ದೀರಿ. ಅಣ್ಣ-ತಮ್ಮಂದಿರು ಮತ್ತು ಪೋಷಕರು ಒಂದಾಗಲು ನೀವು ಎಂದಿಗೂ ಬಿಡಲಿಲ್ಲ. ನನ್ನ ಸುಖಿ ಕುಟುಂಬವನ್ನು ನೀವು ನಾಶಪಡಿಸಿದಿರಿ. ನನ್ನ ಕುಟುಂಬಕ್ಕೆ ನೀವು ವಿಷ ಉಣಿಸಿದಿರಿ… ನನ್ನ ಮಗನನ್ನು ಅವನ ಪೋಷಕರಿಂದ ಬೇರ್ಪಡಿಸಿದಿರಿ. ಈ ಪಾಪವನ್ನು… ನಿಮ್ಮ ಮುಂದಿನ ಏಳು ತಲೆಮಾರುಗಳು ಅನುಭವಿಸಲಿವೆ. ಇದು ನನ್ನ ಶಾಪ,” ಎಂದು ಅವರು ಇತ್ತೀಚಿನ ವಿಡಿಯೋವೊಂದರಲ್ಲಿ ಹೇಳಿದ್ದರು.
ಸಂಗೀತಾ ಅವರು ಯಾರ ಬಗ್ಗೆ ಈ ಮಾತುಗಳನ್ನು ಹೇಳಿದ್ದಾರೆ ಮತ್ತು ವಿವಾದವೇನು ಎಂಬುದರ ಬಗ್ಗೆ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.








