ಬೆಂಗಳೂರು: ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಪ್ರತಿದಿನವೂ ಹೊಸ ರೋಚಕ ಸಂಗತಿಗಳು ಹೊರಬರುತ್ತಿವೆ. ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ, ಸದ್ಯ ಜೈಲು ಪಾಲಾಗಿರುವ 2016ರ ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ (41), ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಲಂಚದ ಹಣದಲ್ಲೇ ತನ್ನ ಆಪ್ತ ಗೆಳತಿಗೆ ಭರ್ಜರಿ ಗಿಫ್ಟ್ ನೀಡಿರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ.
ಅಯೋಧ್ಯೆ ಮೂಲದ ತನ್ನ ಗೆಳತಿ ಯಾಶೀ ಜೈಸ್ವಾಲ್ಗೆ ಗಂಗ್ವಾರ್ 26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದನು.
ಡಿಕನ್ಸನ್ ರಸ್ತೆಯ ಜ್ಯುವೆಲರಿ ಶಾಪ್ನಲ್ಲಿ ಸಿಕ್ಕಿತು ಫೋಟೊ ಸಾಕ್ಷ್ಯ
ಪ್ರಶ್ನೆಪತ್ರಿಕೆ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಲಂಚ ಸಂಗ್ರಹಿಸಿದ ಬಳಿಕ ಜಾಲಿ ಮೂಡ್ನಲ್ಲಿದ್ದ ಜ್ಞಾನೇಂದ್ರ, ತನ್ನ ಗೆಳತಿ ಯಾಶೀಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದನು. ಬಳಿಕ ನಗರದ ಪ್ರತಿಷ್ಠಿತ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲರಿ ಶಾಪ್ಗೆ ಕರೆದೊಯ್ದು 26 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕೊಡಿಸಿದ್ದನು. ಈ ಖರೀದಿಗೆ ಬೀದರ್ನ ‘ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸೊಸೈಟಿ’ಯ ಬಸವರಾಜು ಅವರ ಬ್ಯಾಂಕ್ ಖಾತೆಯಿಂದಲೇ ನೇರವಾಗಿ ಜ್ಯುವೆಲರಿ ಶೋರೂಂಗೆ ಬಿಲ್ ಪಾವತಿಸಲಾಗಿತ್ತು.
ಇದು ಅಕ್ರಮ ಹಣದಲ್ಲೇ ನಡೆದಿರುವ ಖರೀದಿ ಎಂಬುದಕ್ಕೆ ಸಿಐಡಿಗೆ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿವೆ. ಜ್ಯುವೆಲರಿ ಶಾಪ್ನಲ್ಲಿ ಜ್ಞಾನೇಂದ್ರ ಮತ್ತು ಅವರ ಗೆಳತಿ ಒಟ್ಟಿಗಿರುವ ಫೋಟೊ ಹಾಗೂ ಆಭರಣ ಖರೀದಿಸಿದ ಬಿಲ್ ಅನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಕ್ರಮ ಹಣದಿಂದ ಖರೀದಿಸಿದ ಈ ಆಭರಣಗಳನ್ನು ಕಾನೂನುರೀತ್ಯ ಜಪ್ತಿ ಮಾಡಬೇಕಿರುವ ಹಿನ್ನೆಲೆಯಲ್ಲಿ, ಗೆಳತಿ ಯಾಶೀ ಜೈಸ್ವಾಲ್ಗೆ ಶುಕ್ರವಾರ ಕಾರ್ಲ್ಟನ್ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಪೆನ್ಡ್ರೈವ್ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಅಧಿಕಾರಿ
2024ರ ಫೆಬ್ರವರಿಯಿಂದ 2026ರ ಮಾರ್ಚ್ವರೆಗೆ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ, ತಮ್ಮ ಕೊಠಡಿಯಲ್ಲೇ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಮುಂಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದರು. ನಂತರ ಅದನ್ನು ಪೆನ್ಡ್ರೈವ್ ಮುಖಾಂತರ ಅಥವಾ ಕಾಗದದಲ್ಲಿ ಬರೆದುಕೊಂಡು ತನ್ನ ಆಪ್ತ ಬಸವರಾಜ ಕನ್ನಾಳೆಗೆ ನೀಡುತ್ತಿದ್ದರು.
ಬಸವರಾಜ ಕನ್ನಾಳೆ ಈ ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ಮಾರಾಟ ಮಾಡಿ, ಸುಮಾರು 70 ಲಕ್ಷಕ್ಕೂ ಹೆಚ್ಚು ಹಣವನ್ನು ತಮ್ಮ ‘ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸೊಸೈಟಿ’ಯ ಖಾತೆಗೆ ವರ್ಗಾಯಿಸಿಕೊಂಡಿದ್ದನು. ತನಿಖೆ ಪ್ರಕಾರ, ಗಂಗ್ವಾರ್ಗೆ ಅಭ್ಯರ್ಥಿಗಳೊಂದಿಗೆ ನೇರ ಸಂಪರ್ಕವಿರಲಿಲ್ಲ; ಕನ್ನಾಳೆಯೇ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದನು.
ವಿಮಾನ ನಿಲ್ದಾಣ ಸಮೀಪ ಅಣ್ಣನ ಹೆಸರಲ್ಲಿ ಐಷಾರಾಮಿ ವಿಲ್ಲಾ!
ಅಕ್ರಮದ ಹಣ ಕೇವಲ ಆಭರಣ ಖರೀದಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕೆಪಿಎಸ್ಸಿಯಲ್ಲಿದ್ದ ಅವಧಿಯಲ್ಲಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಭಾರಿ ಮೌಲ್ಯದ ಐಷಾರಾಮಿ ವಿಲ್ಲಾವೊಂದನ್ನು ಖರೀದಿ ಮಾಡಿದ್ದರು. ಈ ಆಸ್ತಿಯನ್ನು ತಮ್ಮ ಅಣ್ಣ ಕಮಲಾಪತಿ ಅವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಈ ವಿಲ್ಲಾ ಖರೀದಿಗೆ ಪರೀಕ್ಷಾ ಅಕ್ರಮದ ಕಪ್ಪುಹಣವನ್ನೇ ಬಳಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಅಧಿಕಾರಿಗಳು ಈ ದಿಸೆಯಲ್ಲೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.








