ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಅಬು ಸಲೇಂಗೆ ಸುಪ್ರೀಂ ಕೋರ್ಟ್ನಿಂದ ಮತ್ತೊಮ್ಮೆ ಹಿನ್ನಡೆಯಾಗಿದೆ. 25 ವರ್ಷಗಳ ಜೈಲು ಅವಧಿ ಪೂರ್ಣಗೊಂಡಿರುವುದರಿಂದ ತನ್ನನ್ನು ಬಿಡುಗಡೆ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ವಜಾಗೊಳಿಸಿದೆ.
ಪೋರ್ಚುಗಲ್ನಿಂದ ಭಾರತಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ಆಧಾರವಾಗಿಸಿಕೊಂಡು ಸಲೇಂ ತನ್ನ ಬಿಡುಗಡೆಗೆ ಮನವಿ ಮಾಡಿದ್ದ. ಹಸ್ತಾಂತರದ ಷರತ್ತುಗಳ ಪ್ರಕಾರ ತನಗೆ 25 ವರ್ಷಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಬಾರದು ಎಂಬ ಭರವಸೆ ನೀಡಲಾಗಿತ್ತು ಎಂಬುದು ಆತನ ವಾದವಾಗಿತ್ತು.
ತಾನು ವಿಚಾರಣಾಧೀನ ಕೈದಿಯಾಗಿ ಕಳೆದ ಅವಧಿ, ಶಿಕ್ಷೆ ಅನುಭವಿಸಿದ ಅವಧಿ ಹಾಗೂ ಜೈಲಿನಲ್ಲಿ ಉತ್ತಮ ನಡವಳಿಕೆಗೆ ದೊರೆತ ಕ್ಷಮಾದಾನವನ್ನು ಒಟ್ಟಾಗಿ ಪರಿಗಣಿಸಿದರೆ 25 ವರ್ಷಗಳ ಮಿತಿ ಈಗಾಗಲೇ ಪೂರ್ಣಗೊಂಡಿದೆ ಎಂದು ಸಲೇಂ ಹೇಳಿಕೊಂಡಿದ್ದ. ಆದರೆ ಈ ಲೆಕ್ಕಾಚಾರವನ್ನು ನ್ಯಾಯಾಲಯ ಒಪ್ಪಲಿಲ್ಲ. ಒಂದೇ ಅವಧಿಯನ್ನು ಎರಡು ಬಾರಿ ಲೆಕ್ಕ ಹಾಕುವಂತಾಗುತ್ತದೆ ಎಂಬ ಕಾರಣಕ್ಕೂ ಆತನ ವಾದವನ್ನು ತಿರಸ್ಕರಿಸಲಾಗಿದೆ.
ಪೋರ್ಚುಗಲ್ನಿಂದ ಸಲೇಂನನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕವೇ 25 ವರ್ಷಗಳ ಅವಧಿಯನ್ನು ಲೆಕ್ಕ ಹಾಕಬೇಕು ಎಂಬ ನಿಲುವನ್ನು ನ್ಯಾಯಾಲಯ ಪರಿಗಣಿಸಿದೆ. ಈ ಲೆಕ್ಕಾಚಾರದ ಪ್ರಕಾರ ಆತನ 25 ವರ್ಷಗಳ ಅವಧಿ 2030ರಲ್ಲಿ ಪೂರ್ಣಗೊಳ್ಳಲಿದೆ.
ಈ ಹಿಂದೆ ಸಲೇಂ ಬಿಡುಗಡೆ ಕೋರಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಆದರೆ ಹೈಕೋರ್ಟ್ ಕೂಡ ಆತನ ಮನವಿಯನ್ನು ತಿರಸ್ಕರಿಸಿತ್ತು. ಇದೀಗ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜೀವಾವಧಿ
1995ರಲ್ಲಿ ಮುಂಬೈ ಉದ್ಯಮಿ ಪ್ರದೀಪ್ ಜೈನ್ ಹತ್ಯೆ ಪ್ರಕರಣದಲ್ಲಿಯೂ ಅಬು ಸಲೇಂಗೆ 2015ರಲ್ಲಿ ಟಾಡಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಪ್ರಕರಣದಲ್ಲಿ ಜೈನ್ ಅವರ ಚಾಲಕ ಮೆಹೆಂದಿ ಹಸನ್ ಕೂಡ ಹತ್ಯೆಯಾಗಿದ್ದರು.
ಇನ್ನು 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2017ರಲ್ಲಿ ಸಲೇಂಗೆ ಮತ್ತೊಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಎರಡೂ ಶಿಕ್ಷೆಗಳು ಜೀವಾವಧಿಯದ್ದಾಗಿದ್ದು, ಅವುಗಳ ನಡುವೆ ಅವಧಿ ಲೆಕ್ಕಾಚಾರಕ್ಕೆ ಸಂಬಂಧಿಸಿದ ಕಾನೂನು ಅಂಶಗಳನ್ನೂ ನ್ಯಾಯಾಲಯ ಪರಿಶೀಲಿಸಿದೆ.
2022ರಲ್ಲಿಯೇ ಸುಪ್ರೀಂ ಕೋರ್ಟ್, ಹಸ್ತಾಂತರದ ಸಂದರ್ಭದಲ್ಲಿ ಭಾರತ ಸರ್ಕಾರ ಪೋರ್ಚುಗಲ್ಗೆ ನೀಡಿದ್ದ 25 ವರ್ಷಗಳ ಭರವಸೆಯನ್ನು ಪರಿಗಣಿಸಿತ್ತು. ಆದರೆ ಆ ಭರವಸೆಯಿಂದ ಸಲೇಂನ ಜೀವಾವಧಿ ಶಿಕ್ಷೆ ನಿಗದಿತ ಅವಧಿಯ ಶಿಕ್ಷೆಯಾಗಿ ಪರಿವರ್ತನೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. 25 ವರ್ಷ ಪೂರ್ಣಗೊಂಡ ಬಳಿಕ ಸರ್ಕಾರವು ಕಾನೂನುಬದ್ಧವಾಗಿ ಬಿಡುಗಡೆ ಅಥವಾ ಕ್ಷಮಾದಾನದ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿತ್ತು








