ಜೈಪುರ: ನಗರದ ಕರ್ಧಾನಿ ಪ್ರದೇಶದ ಮನೆಯಲ್ಲಿ ಸ್ವಂತ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಕ್ರೂರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ 45 ವರ್ಷದ ರಾಹುಲ್ ಝಾನನ್ನು ಪೊಲೀಸರು ಭಾನುವಾರ ಸಿಕ್ಕಾರ್ ಜಿಲ್ಲೆಯ ರೀಂಗಸ್ ಪಟ್ಟಣದ ಹೋಟೆಲ್ ಒಂದರ ಹೊರಭಾಗದಲ್ಲಿ ಬಂಧಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಈ ಭೀಕರ ಕೊಲೆ ಕೃತ್ಯಗಳು ಬೆಳಕಿಗೆ ಬಂದಿದ್ದವು. ಕೊಲೆಗಳು ಬೆಳಕಿಗೆ ಬರುವ ಕೆಲವೇ ಗಂಟೆಗಳ ಮೊದಲು ಜೈಪುರದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪತ್ತೆಹಚ್ಚಲಾಗಿದೆ ಎಂದು ಡಿಸಿಪಿ (ಪಶ್ಚಿಮ) ಪ್ರಶಾಂತ್ ಕಿರಣ್ ತಿಳಿಸಿದ್ದಾರೆ.
ತನಿಖಾ ಮೂಲಗಳ ಪ್ರಕಾರ, ಜೈಪುರದಿಂದ ಪರಾರಿಯಾದ ರಾಹುಲ್ ಝಾ ಆರಂಭದಲ್ಲಿ ದೈವಿಕ ಆಶೀರ್ವಾದ ಪಡೆಯಲು ಖಾತೂ ಶ್ಯಾಮ್ಜಿ ಧಾಮಕ್ಕೆ ತೆರಳಿದ್ದ. ಬಳಿಕ ಹತ್ತಿರದ ಹೋಟೆಲ್ನಲ್ಲಿ ತಂಗಿದ್ದ ಆತನ ಬಳಿ ದಿನನಿತ್ಯದ ಖರ್ಚಿಗೆ ಹಣ ಖಾಲಿಯಾಗಿತ್ತು. ಉಳಿದುಕೊಳ್ಳಲು ಮತ್ತು ಖರ್ಚಿಗೆ ಹಣವಿಲ್ಲದೆ ಹೋಟೆಲ್ ಸಿಬ್ಬಂದಿಗೆ ತನ್ನ ಕೈಯಲ್ಲಿದ್ದ ಉಂಗುರವನ್ನು ಮಾರಾಟ ಮಾಡಲು ಯತ್ನಿಸಿದ್ದ. ಆದರೆ ಅದು ಸಾಧ್ಯವಾಗದಿದ್ದಾಗ ಅಲ್ಲಿಂದ ಕಾಲ್ಕಿತ್ತು ರೀಂಗಸ್ ಪಟ್ಟಣಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.
ಭಾನುವಾರ ರೀಂಗಸ್ನ ಹೋಟೆಲ್ ಒಂದರಲ್ಲಿ ಆರೋಪಿ ಓಡಾಡುತ್ತಿರುವ ಬಗ್ಗೆ ಲಭಿಸಿದ ನಿಖರ ಮಾಹಿತಿ ಆಧರಿಸಿ, ಆತನ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿತು.
ಆರೋಪಿ ಝಾ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಹೋಟೆಲ್ನಿಂದ ಹೊರಬರುತ್ತಿದ್ದಂತೆಯೇ, ಸಾಧಾರಣ ಉಡುಪಿನಲ್ಲಿದ್ದ (Civil Clothes) ಪೊಲೀಸರು ಏಕಾಏಕಿ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದು ಜೈಪುರಕ್ಕೆ ಕರೆತಂದಿದ್ದಾರೆ.
ಆರೋಪಿ ರಾಹುಲ್ ಝಾ ತನ್ನ ಪತ್ನಿ ಗೀತಾ (40), ಹಾಗೂ ಮಕ್ಕಳಾದ ನಂದನಿ (23), ರಾಧಿಕಾ (17) ಮತ್ತು ಗೌರಿ (14) ಅವರನ್ನು ಅಮಾನುಷವಾಗಿ ಕೊಲೆ ಮಾಡಿದ್ದ. ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕುಟುಂಬದಲ್ಲಿದ್ದ ನಿರಂತರ ಭಿನ್ನಾಭಿಪ್ರಾಯ, ತೀವ್ರ ಕೌಟುಂಬಿಕ ಕಲಹ ಹಾಗೂ ವಿಶೇಷವಾಗಿ ಪತ್ನಿ ಮತ್ತು ಹಿರಿಯ ಮಗಳೊಂದಿಗಿನ ವೈಷಮ್ಯವೇ ಈ ಕೊಲೆಗಳಿಗೆ ಕಾರಣ ಎಂದು ಆತ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ. ಕುಟುಂಬ ವಾಸವಿದ್ದ ಗೋವಿಂದ್ ವಾಟಿಕಾ ಮನೆಯಿಂದ ಆರೋಪಿಯ ರಕ್ತಸಿಕ್ತ ಬಟ್ಟೆಗಳು ಹಾಗೂ ಆತ ಸ್ವಿಚ್ ಆಫ್ ಮಾಡಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದು, ಮುಂದಿನ ತನಿಖೆ ಕಾಯ್ದುಕೊಂಡಿದ್ದಾರೆ.








