ನವದೆಹಲಿ:ದೇಶದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ದೇಶದ ಎಲ್ಲಾ ನೋಂದಾಯಿತ ಅಂಗಾಂಗ ಕಸಿ ಆಸ್ಪತ್ರೆಗಳು ತಮ್ಮ ವೆಬ್ಸೈಟ್ನ ಮುಖಪುಟದಲ್ಲಿ ಕಸಿ ಚಿಕಿತ್ಸೆಗಳ ಫಲಿತಾಂಶಗಳ ದತ್ತಾಂಶಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕಾಗಿದೆ.
ಕರ್ನಾಟಕದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಂಗಾಂಗ ಕಸಿ ಪ್ರಕರಣಗಳಲ್ಲಿ ಪಾರದರ್ಶಕತೆ ತರಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ NOTTO ನಿರ್ದೇಶಕ ಡಾ. ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ NOTTO ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸೂಕ್ತ ಪ್ರಾಧಿಕಾರಗಳಿಗೆ ಈ ಸಂಬಂಧ ಅಧಿಕೃತ ಸೂಚನೆ ನೀಡಿದೆ.
ಮಂಗಳೂರಿನ ಆರೋಗ್ಯ ತಜ್ಞರಾದ ಶ್ಯಾಮ್ ಕಾಮತ್ ಹಾಗೂ ಡಾ. ಲಿಯೋನೆಲ್ ಡಿಸೋಜಾ ಅವರು ಸಲ್ಲಿಸಿದ್ದ ಸಮಗ್ರ ವರದಿಯನ್ನು ಆಧರಿಸಿ ಸಂಸದ ಚೌಟ ಅವರು ಪತ್ರ ಬರೆದಿದ್ದರು. ಅಂಗಾಂಗ ಕಸಿ (Cadaveric Kidney Transplants) ನಂತರದ ಮರಣ ಪ್ರಮಾಣ, ದೀರ್ಘಕಾಲೀನ ನಿಗಾ ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
NOTTO ಸೂಚನೆಯಲ್ಲಿ ಏನಿದೆ?
ದೇಶಾದ್ಯಂತ 824 ಕಸಿ ಕೇಂದ್ರಗಳು NOTTO ರಿಜಿಸ್ಟ್ರಿಯೊಂದಿಗೆ ಸಂಪರ್ಕ ಹೊಂದಿದ್ದು, ರೋಗಿಗಳು ಮತ್ತು ದಾನಿಗಳ ಮಾಹಿತಿಯನ್ನು ದಾಖಲಿಸುವುದು ಕಡ್ಡಾಯವಾಗಿದೆ. ಪ್ರತಿ ಆಸ್ಪತ್ರೆಯು ನಡೆಸಿದ ಕಸಿ ಚಿಕಿತ್ಸೆಗಳ ಫಲಿತಾಂಶದ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ 6 ತಿಂಗಳು, 1 ವರ್ಷ, 3 ವರ್ಷ ಹಾಗೂ 5 ವರ್ಷಗಳ ಅವಧಿಯಲ್ಲಿ ಎಷ್ಟು ರೋಗಿಗಳು ಬದುಕಿದ್ದಾರೆ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಹಾಗೂ ಎಷ್ಟು ಕಸಿ ಪ್ರಕ್ರಿಯೆಗಳು ವಿಫಲವಾಗಿವೆ ಎಂಬ ವಿವರಗಳನ್ನು ದಾಖಲಿಸಬೇಕಾಗುತ್ತದೆ.
ಇದರ ಜೊತೆಗೆ ಕಸಿ ಪ್ರಕ್ರಿಯೆಗೆ ಮುನ್ನ ರೋಗಿ ಹಾಗೂ ಕುಟುಂಬ ಸದಸ್ಯರಿಗೆ ಚಿಕಿತ್ಸೆಯ ಅಪಾಯಗಳು ಮತ್ತು ಸಾಧ್ಯ ಫಲಿತಾಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಿ ಆಸ್ಪತ್ರೆಗಳು ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು NOTTO ಸೂಚಿಸಿದೆ.
ಸಂಸದರ ಪತ್ರದಲ್ಲಿ ಉಲ್ಲೇಖಿಸಿದ್ದ ಅಂಶಗಳು
ಅಂಗಾಂಗ ಕಸಿ ಯಶಸ್ವಿಯಾಗುವುದು ಮುಖ್ಯವಾದರೂ, ಕಸಿ ನಂತರ ಎದುರಾಗುವ ದೀರ್ಘಕಾಲೀನ ಸಮಸ್ಯೆಗಳು, ವೈಫಲ್ಯಗಳು ಮತ್ತು ಮರಣ ಪ್ರಮಾಣದ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಸಂಸದ ಚೌಟ ತಮ್ಮ ಪತ್ರದಲ್ಲಿ ತಿಳಿಸಿದ್ದರು.
ಕಿಡ್ನಿ ಕಸಿಯ ಅಲ್ಪಾವಧಿಯ ಯಶಸ್ಸನ್ನು ಮಾತ್ರ ಗಮನಿಸಲಾಗುತ್ತಿದ್ದು, ನಂತರದ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದ್ದರು. ಕಸಿ ಬಳಿಕ ನೀಡುವ ರೋಗ ನಿರೋಧಕ ಚಿಕಿತ್ಸೆಯಿಂದಾಗಿ ಕೆಲವು ರೋಗಿಗಳು ದೀರ್ಘಕಾಲದ ಆರೋಗ್ಯ ಸಮಸ್ಯೆ, ವಿಷತ್ವ, ದೌರ್ಬಲ್ಯ ಹಾಗೂ ಗಂಭೀರ ಸೋಂಕುಗಳನ್ನು ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿತ್ತು.
ಕಸಿ ನಂತರದ ದೀರ್ಘಾವಧಿ ಪರಿಣಾಮಗಳನ್ನು ಗಮನಿಸಲು ರಾಷ್ಟ್ರೀಯ ಮಟ್ಟದ ವ್ಯವಸ್ಥೆಯ ಅಗತ್ಯವಿದ್ದು, ಆಸ್ಪತ್ರೆಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಿಸಲು ದತ್ತಾಂಶ ದಾಖಲಾತಿ ಸಹಕಾರಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಇದೊಂದು ಮೈಲಿಗಲ್ಲು: ಕ್ಯಾ. ಬ್ರಿಜೇಶ್ ಚೌಟ
“ಮೇ 22ರಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ NOTTO ನಿರ್ದೇಶಕರಿಗೆ ಪತ್ರ ಬರೆದಿದ್ದೆ. ಅದಕ್ಕೆ ತಕ್ಷಣ ಸ್ಪಂದಿಸಿ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಸಾರ್ವಜನಿಕರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರ ತ್ವರಿತ ನಿರ್ಧಾರ ಕೈಗೊಳ್ಳುತ್ತದೆ ಎಂಬುದಕ್ಕೆ ಇದು ಉದಾಹರಣೆ. ಆಸ್ಪತ್ರೆಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲು” ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.








