ಬೆಂಗಳೂರು: ಎಟಿಎಸ್ ಹುಡುಕಾಟದಲ್ಲಿದ್ದ ಶಂಕಿತ ಉಗ್ರ ಸೇರಿ ಹಲವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ಪೋರ್ಟ್ ನವೀಕರಣಕ್ಕೆ ನೆರವಾದ ಆರೋಪ ಎದುರಿಸುತ್ತಿರುವ ಅಂಗವಿಕಲ ಟ್ರಾವೆಲ್ ಏಜೆಂಟ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಪ್ರಕರಣಗಳಲ್ಲಿ ಕೇವಲ ಅಂಗವೈಕಲ್ಯ ಅಥವಾ ಆರೋಗ್ಯ ಸಮಸ್ಯೆಯನ್ನು ಆಧಾರವಾಗಿಸಿಕೊಂಡು ಆರೋಪಿಯು ಕಾನೂನಿನ ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದೇ ವೇಳೆ, ಒಂದೇ ವಿಳಾಸವನ್ನು ಆಧರಿಸಿ ಸುಮಾರು 15 ಪಾಸ್ಪೋರ್ಟ್ ಅರ್ಜಿಗಳನ್ನು ಪರಿಶೀಲಿಸದೆ ಅನುಮೋದಿಸಿದ್ದ ಪೊಲೀಸ್ ಕಾನ್ಸ್ಟೆಬಲ್ನ ಕಾರ್ಯವೈಖರಿಯನ್ನೂ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮಂಗಳೂರಿನ ಯು.ಎಂ. ಹೈದರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
ಆದೇಶದಲ್ಲಿ ನ್ಯಾಯಾಲಯ, ಅರ್ಜಿದಾರರ ಅಂಗವೈಕಲ್ಯ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾನವೀಯ ದೃಷ್ಟಿಕೋನ ಹೊಂದಬಹುದಾದರೂ, ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿರುವ ಗಂಭೀರ ಆರೋಪಗಳ ತನಿಖೆಯನ್ನು ತಡೆಯಲು ಅವು ಆಧಾರವಾಗಲಾರವು ಎಂದು ತಿಳಿಸಿದೆ. ವಿಚಾರಣೆಯನ್ನು ಎದುರಿಸಿ ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸುವುದು ಅರ್ಜಿದಾರರ ಜವಾಬ್ದಾರಿಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಟ್ರಾವೆಲ್ ಏಜೆಂಟ್ ಆಗಿರುವ ಹೈದರ್ ತಾವು ಕೇವಲ ದಾಖಲೆಗಳ ಕೆಲಸ ಅಥವಾ ಸಾಮಾನ್ಯ ಸಹಾಯ ಮಾಡಿದ್ದೇನೆ ಎಂದು ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗೆ ನಕಲಿ ವಿಳಾಸ ಮತ್ತು ದಾಖಲೆಗಳನ್ನು ಒದಗಿಸಿ ಪಾಸ್ಪೋರ್ಟ್ ಪಡೆಯಲು ನೆರವಾಗಿರುವುದು ಸಾಬೀತಾದರೆ, ಅದು ಕೇವಲ ಕ್ರಿಮಿನಲ್ ಅಪರಾಧವಷ್ಟೇ ಅಲ್ಲ, ರಾಷ್ಟ್ರದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ತರುವ ಗಂಭೀರ ಕೃತ್ಯವಾಗಲಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಹೈದರ್ ಅವರ ಟ್ರಾವೆಲ್ ಏಜೆನ್ಸಿಯಿಂದ ಸಲ್ಲಿಕೆಯಾಗಿದ್ದ ಸುಮಾರು 15 ಪಾಸ್ಪೋರ್ಟ್ ಅರ್ಜಿಗಳಲ್ಲಿ ಒಂದೇ ವಿಳಾಸವನ್ನು ಬಳಸಲಾಗಿದ್ದರೂ, ಸ್ಥಳ ಪರಿಶೀಲನೆ ನಡೆಸದೆ ಅವುಗಳಿಗೆ ಅನುಮೋದನೆ ನೀಡಿದ ಪೊಲೀಸ್ ಕಾನ್ಸ್ಟೆಬಲ್ ಲಕ್ಷ್ಮಣ್ ಅವರ ನಡೆ ತೀವ್ರ ಆಘಾತಕಾರಿ ಎಂದು ಪೀಠ ಹೇಳಿದೆ. ಇದು ಕೇವಲ ಕರ್ತವ್ಯ ಲೋಪವಲ್ಲ, ಸಾರ್ವಜನಿಕ ನಂಬಿಕೆಗೆ ಮಾಡಿದ ದ್ರೋಹವಾಗಿದೆ. ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಕಠಿಣವಾಗಿ ಅಭಿಪ್ರಾಯಪಟ್ಟಿದೆ.
ಪಾಸ್ಪೋರ್ಟ್ ಪರಿಶೀಲನೆ ವೇಳೆ ಕರ್ತವ್ಯ ನಿರ್ವಹಿಸಿದ್ದ ಕಾನ್ಸ್ಟೆಬಲ್ ಲಕ್ಷ್ಮಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಅನುಮತಿ ಕೋರಲಾಗಿದ್ದು, ಆ ಪ್ರಸ್ತಾವನೆ ಸದ್ಯ ಸಂಬಂಧಿತ ಪ್ರಾಧಿಕಾರದ ಪರಿಶೀಲನೆಯಲ್ಲಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಶೀಘ್ರವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಷ್ಟ್ರದ ವಿರುದ್ಧ ನೇರವಾಗಿ ಅಪರಾಧ ಎಸಗುವವರಷ್ಟೇ ಅಲ್ಲದೆ, ಅಂತಹ ಕೃತ್ಯಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೆರವಾಗುವವರು ಹಾಗೂ ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರುವ ಅಧಿಕಾರಿಗಳೂ ಕಾನೂನಿನ ವ್ಯಾಪ್ತಿಗೆ ಬರಲೇಬೇಕು ಎಂಬ ಸಂದೇಶವನ್ನು ನ್ಯಾಯಾಲಯ ತನ್ನ ಆದೇಶದ ಮೂಲಕ ನೀಡಿದೆ.
ಪ್ರಕರಣದ ಹಿನ್ನೆಲೆ:
ಪುತ್ತೂರು ತಾಲೂಕಿನ ಟ್ರಾವೆಲ್ ಏಜೆಂಟ್ ಯು.ಎಂ. ಹೈದರ್ ಅವರು, ಆಂಧ್ರಪ್ರದೇಶ ಎಟಿಎಸ್ ಹುಡುಕಾಟದಲ್ಲಿದ್ದ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಇಬ್ರಾಹಿಂ ಖಲೀಲ್ ಸೇರಿದಂತೆ ಸುಮಾರು 15 ಮಂದಿಗೆ ಮಂಗಳೂರಿನಲ್ಲಿ ನಕಲಿ ವಾಸ್ತವ್ಯದ ದಾಖಲೆಗಳು ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸೃಷ್ಟಿಸಿ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೆ, ಪೊಲೀಸ್ ಪರಿಶೀಲನೆ ಯಶಸ್ವಿಯಾಗುವಂತೆ ಮಾಡಲು ಸಂಚು ರೂಪಿಸಿ ಅಧಿಕಾರಿಗಳನ್ನು ವಂಚಿಸಿದ ಆರೋಪವೂ ಅವರ ಮೇಲಿದೆ.
ಈ ನಕಲಿ ದಾಖಲೆಗಳ ಆಧಾರದ ಮೇಲೆ ಬೆಂಗಳೂರಿನ ಪಾಸ್ಪೋರ್ಟ್ ಕಚೇರಿಯಿಂದ ಪಾಸ್ಪೋರ್ಟ್ಗಳನ್ನು ಪಡೆಯಲಾಗಿದೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಮಂಗಳೂರು ಪೂರ್ವ ಠಾಣೆ ಪೊಲೀಸರು ಹೈದರ್ (ಎ3), ಶಂಕಿತ ಉಗ್ರ ಇಬ್ರಾಹಿಂ ಖಲೀಲ್ (ಎ1) ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹೈದರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿದೆ.








