ಶಿಲ್ಲಾಂಗ್: ವ್ಯಾಪಕ ಚರ್ಚೆಗೆ ಕಾರಣವಾಗಿದ್ದ 2025ರ ‘ಹನಿಮೂನ್ ಕೊಲೆ’ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಲು ಮೇಘಾಲಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಮೇಘಾಲಯ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಡಬ್ಲ್ಯೂ. ಡಿಯೆಂಗ್ಡೋಹ್ ಅವರ ಏಕಸದಸ್ಯ ಪೀಠ, ಕೆಳ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ವಾದಗಳನ್ನು ಸುಮಾರು ಹತ್ತು ದಿನಗಳ ಕಾಲ ಆಲಿಸಿದ ಹೈಕೋರ್ಟ್, ಜೂನ್ 10ರಂದು ತೀರ್ಪನ್ನು ಕಾಯ್ದಿರಿಸಿತ್ತು. ಬಳಿಕ ಪ್ರಕಟಿಸಿದ ತೀರ್ಪಿನಲ್ಲಿ ಸರ್ಕಾರದ ಮನವಿಯನ್ನು ವಜಾಗೊಳಿಸಿ, ಸೋನಂಗೆ ನೀಡಿದ್ದ ಷರತ್ತುಬದ್ಧ ಜಾಮೀನನ್ನು ಮುಂದುವರಿಸಲು ಅವಕಾಶ ನೀಡಿದೆ.
ಇದಕ್ಕೂ ಮೊದಲು, ಶಿಲ್ಲಾಂಗ್ನ ಹೆಚ್ಚುವರಿ ಉಪ ಕಮಿಷನರ್ (ನ್ಯಾಯಾಂಗ) ದಶಲೀನ್ ಆರ್. ಖರ್ಬಟಾಂಗ್ ಅವರು ಸೋನಂ ಬಂಧನದ ವೇಳೆ ಕಾನೂನು ಪ್ರಕ್ರಿಯೆಯಲ್ಲಿ ದೋಷಗಳು ನಡೆದಿವೆ ಎಂದು ಅಭಿಪ್ರಾಯಪಟ್ಟಿದ್ದರು. ಬಂಧನದ ಸಂದರ್ಭದಲ್ಲಿ ಪೊಲೀಸರು ಆರೋಪಕ್ಕೆ ಸಂಬಂಧಿಸಿದ ಸರಿಯಾದ ಕಾನೂನು ಸೆಕ್ಷನ್ ಅನ್ನು ಉಲ್ಲೇಖಿಸದೇ, ಕೊಲೆಗೆ ಸಂಬಂಧಿಸಿದ ಬಿಎನ್ಎಸ್ ಸೆಕ್ಷನ್ 103(1) ಬದಲಿಗೆ ಸೆಕ್ಷನ್ 403(1) ಅನ್ನು ದಾಖಲಿಸಿದ್ದರಿಂದ ಆರೋಪಿಯ ಸಂವಿಧಾನಬದ್ಧ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಕೆಳ ನ್ಯಾಯಾಲಯ ತಿಳಿಸಿತ್ತು. ಇದೇ ಆಧಾರದ ಮೇಲೆ ಸೋನಂಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು.
ಆದರೆ, ಆರೋಪಿಗೆ ಬಂಧನದ ನಿಖರ ಕಾರಣಗಳನ್ನು ಸಮರ್ಪಕವಾಗಿ ತಿಳಿಸಲಾಗಿತ್ತು ಎಂದು ವಾದಿಸಿದ ರಾಜ್ಯ ಸರ್ಕಾರ, ಮೇ 4ರಂದು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಸರ್ಕಾರದ ವಾದವನ್ನು ಒಪ್ಪದೇ ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣದ ವಿವರ
ಮಧ್ಯಪ್ರದೇಶದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರು ಕಳೆದ ವರ್ಷದ ಮೇ ತಿಂಗಳಲ್ಲಿ ಪತ್ನಿ ಸೋನಂ ರಘುವಂಶಿ ಅವರೊಂದಿಗೆ ಮೇಘಾಲಯದ ಸೋಹ್ರಾ (ಚಿರಾಪುಂಜಿ)ಗೆ ಹನಿಮೂನ್ಗೆ ತೆರಳಿದ್ದರು. ಈ ವೇಳೆ ಪತಿಯನ್ನು ಹತ್ಯೆ ಮಾಡಲು ಸೋನಂ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಸುಪಾರಿ ಹಂತಕರನ್ನು ನೇಮಿಸಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು.
ತನಿಖೆ ವೇಳೆ ಬಯಲಾದ ಮಾಹಿತಿಯ ಪ್ರಕಾರ, ಹನಿಮೂನ್ ಪ್ರವಾಸದ ಸಮಯದಲ್ಲೇ ರಾಜಾ ರಘುವಂಶಿ ಅವರನ್ನು ಹಂತಕರು ಕೊಲೆ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೋನಂ ರಘುವಂಶಿಯನ್ನು ಪ್ರಮುಖ ಆರೋಪಿಯಾಗಿ ಬಂಧಿಸಿದ್ದು, ಈ ಪ್ರಕರಣ ದೇಶದಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.








