ಆಂಧ್ರಪ್ರದೇಶ: ತೀವ್ರವಾಗಿ ಅಸ್ವಸ್ಥಗೊಂಡಿದ್ದ ಏಳನೇ ತರಗತಿಯ ಬುಡಕಟ್ಟು ಬಾಲಕಿಯೊಬ್ಬಳನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು, ಕಲ್ಲು-ಮುಳ್ಳುಗಳಿಂದ ಕೂಡಿದ ದುರ್ಗಮ ಹಾದಿಯಲ್ಲಿ ಬರೋಬ್ಬರಿ 6 ಕಿಲೋಮೀಟರ್ ನಡೆದು ಆಸ್ಪತ್ರೆಗೆ ದಾಖಲಿಸುವ ಮೂಲಕ ಶಿಕ್ಷಕಿಯೊಬ್ಬರು ಬಾಲಕಿಗೆ ಜೀವದಾನ ಮಾಡಿದ್ದಾರೆ. . ಆಂಧ್ರಪ್ರದೇಶದ ಪಾರ್ವತಿಪುರ ಮಣ್ಯಂ ಜಿಲ್ಲೆಯ ಗುಮ್ಮಲಕ್ಷ್ಮಿಪುರದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿಯ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಲ್ಲಿನ ಆದಿವಾಸಿ ಬಾಲಕಿಯರ ಕಲ್ಯಾಣ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮನಿ ಅವರೇ ಇಡೀ ದೇಶ ಮೆಚ್ಚುವಂತಹ ಸಾಹಸ ಮತ್ತು ಮಾನವೀಯ ಕಾರ್ಯ ಮಾಡಿದ ನಿಸ್ವಾರ್ಥ ಶಿಕ್ಷಕಿ. ಅದೇ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಭುವನೇಶ್ವರಿ ಎಂಬ ವಿದ್ಯಾರ್ಥಿನಿ ಹಠಾತ್ತನೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾಳೆ. ದೂರದ ಬೆಟ್ಟದ ಮೇಲಿರುವ ಬುಡಕಟ್ಟು ಪ್ರದೇಶದ ಆ ಶಾಲೆಯಿಂದ ಆಸ್ಪತ್ರೆಗೆ ಸಾಗಿಸಲು ಯಾವುದೇ ಸೂಕ್ತ ಸಾರಿಗೆ ಅಥವಾ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ರಸ್ತೆಯೂ ಸಂಪೂರ್ಣ ಹದಗೆಟ್ಟಿತ್ತು. ಬಾಲಕಿಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿರುವುದನ್ನು ಕಂಡು ಶಾಲೆಯ ಸಿಬ್ಬಂದಿ ಕಂಗಾಲಾಗಿದ್ದರು. ಈ ವೇಳೆ ಸ್ವಲ್ಪವೂ ಹಿಂಜರಿಯದ ಶಿಕ್ಷಕಿ ಹೇಮನಿ, ಬಾಲಕಿಯನ್ನು ತನ್ನ ಬೆನ್ನಿಗೆ ಗಟ್ಟಿಯಾಗಿ ಕಟ್ಟಿಕೊಂಡು ಕಲ್ಲು-ಮುಳ್ಳುಗಳ ರಸ್ತೆಯಲ್ಲೇ ಬಿರುಸಿನ ಹೆಜ್ಜೆ ಹಾಕಲಾರಂಭಿಸಿದ್ದಾರೆ.
ತನ್ನ ಆಯಾಸವನ್ನು ಲೆಕ್ಕಿಸದೆ ಬರೋಬ್ಬರಿ 6 ಕಿಲೋಮೀಟರ್ ದೂರದಲ್ಲಿದ್ದ ಜಿಲ್ಲಾ ಆಸ್ಪತ್ರೆಗೆ ಬಾಲಕಿಯನ್ನು ಹೊತ್ತೊಯ್ದು ಸಕಾಲದಲ್ಲಿ ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಸಮಯಪ್ರಜ್ಞೆ ಮೆರೆದು ಒಂದು ಅಮೂಲ್ಯ ಜೀವ ಉಳಿಸಿದ ಶಿಕ್ಷಕಿ ಹೇಮನಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಆಂಧ್ರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇಲಾಖಾ ಕಚೇರಿಗೆ ಆಹ್ವಾನಿಸಿ ಆತ್ಮೀಯವಾಗಿ ಸನ್ಮಾನಿಸಿದೆ. ಈ ಘಟನೆಯು ಒಂದು ಕಡೆ ಶಿಕ್ಷಕಿಯ ಉದಾತ್ತ ಗುಣವನ್ನು ಸಾರಿದರೆ, ಮತ್ತೊಂದೆಡೆ ಬುಡಕಟ್ಟು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕಾಡುತ್ತಿರುವ ಮೂಲಸೌಕರ್ಯ ಹಾಗೂ ರಸ್ತೆಗಳ ಕೊರತೆಯನ್ನು ಎತ್ತಿ ತೋರಿಸಿದೆ.








