ಕರೀಂನಗರ: ಆನ್ಲೈನ್ ಜೂಜಾಟ ಹಾಗೂ ಲಾಟರಿ ಆ್ಯಪ್ಗಳ ವ್ಯಸನಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡು, ಸಾಲದ ಅಪ್ಲಿಕೇಶನ್ಗಳ ಏಜೆಂಟರ ಕಿರುಕುಳ ತಾಳಲಾರದೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕೂಲಿ ಮಹಿಳೆಯೊಬ್ಬರನ್ನು ಅಪಹರಿಸಿ, ಅವರ ಚಿನ್ನಾಭರಣ ದೋಚಿ, ಸಾಕ್ಷಿ ನಾಶಕ್ಕಾಗಿ ಕೃಷಿ ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಕರೀಂನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗೊಲ್ಲಪಲ್ಲಿ ಗ್ರಾಮದ ದ್ವಿತೀಯ ವರ್ಷದ ಪದವಿ (Degree) ವಿದ್ಯಾರ್ಥಿ ಧಮ್ಮ ದಿನೇಶ್ ರೆಡ್ಡಿ (21) ಬಂಧಿತ ಭೀಕರ ಅಪರಾಧಿ. ಕರೀಂನಗರ ಟವರ್ ಸರ್ಕಲ್ ಲೇಬರ್ ಅಡ್ಡಾದಲ್ಲಿ ಕೂಲಿ ಕೆಲಸಕ್ಕಾಗಿ ಕಾಯುತ್ತಿದ್ದ ಗಂಗಾಧರ ಲಕ್ಷ್ಮಿ (55) ಎಂಬ ಮಹಿಳೆ ಈ ಜೂಜುಕೋರನ ಕ್ರೌರ್ಯಕ್ಕೆ ಬಲಿಯಾದ ದುರ್ದೈವಿ.
ಜುಲೈ 1, 2026 ರಂದು ಬೆಳಿಗ್ಗೆ 10 ಗಂಟೆಗೆ ಕರೀಂನಗರ ಟವರ್ ಸರ್ಕಲ್ನಿಂದ ಗಂಗಾಧರ ಲಕ್ಷ್ಮಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕರೀಂನಗರ-3 ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಮಹಿಳೆಯನ್ನು ಅಪಹರಿಸಿ, ದರೋಡೆ ಮಾಡಿ ಕೊಲೆಗೆ ಯತ್ನಿಸಿರುವುದು ಪತ್ತೆಯಾದ ತಕ್ಷಣ ಪ್ರಕರಣವನ್ನು ಕರೀಂನಗರ-1 ಟೌನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ತಾಂತ್ರಿಕ ಪುರಾವೆ, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಲೊಕೇಶನ್ ವಿಶ್ಲೇಷಣೆ ನಡೆಸಿದ ಇನ್ಸ್ಪೆಕ್ಟರ್ ರಾಜೇಶ್ವರ್ ನೇತೃತ್ವದ ತಂಡ ಮಾರುಕಟ್ಟೆ ಬಳಿಯ ಹುತಾತ್ಮರ ಸ್ಮಾರಕದ ಬಳಿ ಆರೋಪಿ ದಿನೇಶ್ ರೆಡ್ಡಿಯನ್ನು ಹೆಡೆಮುರಿ ಕಟ್ಟಿದೆ.
ಆರೋಪಿ ದಿನೇಶ್ ರೆಡ್ಡಿ ಆನ್ಲೈನ್ ಜೂಜಾಟ, ಡಿಯುವಿನ್ ಮತ್ತು ಜಿಯೋ ಲಾಟರಿಯಂತಹ ಅಕ್ರಮ ಕಲರ್ ಟ್ರೇಡಿಂಗ್ ಆಟಗಳಿಗೆ ದಾಸನಾಗಿ ₹4 ಲಕ್ಷ ಕಳೆದುಕೊಂಡಿದ್ದ. ವಿವಿಧ ಲೋನ್ ಆ್ಯಪ್ಗಳ ಮೂಲಕ ಸಾಲ ಪಡೆದು ವಸೂಲಾತಿ ತೀವ್ರ ಒತ್ತಡ ಎದುರಿಸುತ್ತಿದ್ದರಿಂದ ಅಪರಾಧ ಮಾಡಲು ಸ್ಕೆಚ್ ಹಾಕಿದ್ದ. ಜುಲೈ 1 ರಂದು ಒಂಟಿಯಾಗಿದ್ದ ಗಂಗಾಧರ ಲಕ್ಷ್ಮಿ ಅವರ ಬಳಿ ಬಂದು ಕೆಲಸ ಕೊಡುವುದಾಗಿ ನಂಬಿಸಿ ರ್ಯಾಪಿಡೊ ಬೈಕ್ ಬುಕ್ ಮಾಡಿ ತಿಮ್ಮಾಪುರ ಮಾರ್ಗವಾಗಿ ನುಸ್ತುಲಾಪುರ ಗ್ರಾಮದ ಹೊರವಲಯದ ನಿರ್ಜನ ಹೊಲಗಳಿಗೆ ಕರೆದೊಯ್ದಿದ್ದ. ಅಲ್ಲಿ ಮಹಿಳೆಯ ಮೇಲೆ ಭೀಕರ ದಾಳಿ ನಡೆಸಿ ಐದು ಗ್ರಾಂ ಚಿನ್ನಾಭರಣ ಹಾಗೂ 20 ಗ್ರಾಂ ಬೆಳ್ಳಿಯ ಗಟ್ಟಿಯನ್ನು ದೋಚಿದ್ದ.
ತನ್ನ ಪಾಪಕೃತ್ಯ ಮತ್ತು ಗುರುತು ಹೊರಬರಬಾರದು ಎಂಬ ಕ್ರೂರ ಉದ್ದೇಶದಿಂದ ದಿನೇಶ್ ರೆಡ್ಡಿ ಆಕೆಯನ್ನು ಕೃಷಿ ಬಾವಿಗೆ ತಳ್ಳಿದ್ದ. ಈ ವೇಳೆ ಮಹಿಳೆ ಬಾವಿಯಲ್ಲಿದ್ದ ಹಗ್ಗ ಹಿಡಿದು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದಾಗ, ಕಟುಕ ದಿನೇಶ್ ರೆಡ್ಡಿ ಆಕೆ ಬದುಕುಳಿಯಬಾರದು ಎಂದು ಆ ಹಗ್ಗವನ್ನೇ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದ. ಆದರೆ ಗಂಗಾಧರ ಲಕ್ಷ್ಮಿ ಅವರಿಗೆ ಈಜು ಬರುತ್ತಿದ್ದರಿಂದ, ಅವರು ತಕ್ಷಣವೇ ಬಾವಿಯ ಮೋಟಾರ್ ಪೈಪ್ಗೆ ಕಟ್ಟಿದ್ದ ಮತ್ತೊಂದು ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡು ಸಾವು-ಬದುಕಿನ ನಡುವೆ ಇಡೀ ರಾತ್ರಿ ಇಂಚಿಂಚೂ ನರಕಯಾತನೆ ಅನುಭವಿಸಿದ್ದಾರೆ. ಮರುದಿನ ಬೆಳಿಗ್ಗೆ ಹೊಲಕ್ಕೆ ಬಂದ ರೈತರು ಆಕೆಯ ಕಿರುಚಾಟ ಕೇಳಿ ಹಾಸಿಗೆ ಹಾಗೂ ಹಗ್ಗದ ಸಹಾಯದಿಂದ ಆಕೆಯನ್ನು ರಕ್ಷಿಸಿ ಕರೀಂನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯಿಂದ ಬೈಕ್, ಮೊಬೈಲ್ ಫೋನ್, ₹5,000 ನಗದು ವಶಪಡಿಸಿಕೊಳ್ಳಲಾಗಿದೆ. ಕದ್ದ ಚಿನ್ನವನ್ನು ₹30,000 ಹಣಕ್ಕೆ ಖರೀದಿಸಿದ್ದ ಟವರ್ ಸರ್ಕಲ್ನ ಜ್ಯುವೆಲ್ಲರಿ ವ್ಯಾಪಾರಿ ವೇಣು ಮನೋಹರ ಚಾರಿ ಎಂಬಾತನನ್ನು ಬಂಧಿಸಿ ಆತನಿಂದಲೂ ಒಡವೆಗಳನ್ನು ಜಪ್ತಿ ಮಾಡಲಾಗಿದೆ.








