ಮಂಗಳೂರು: ದೇಶದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನದ ಸುದ್ದಿ ಸಂಗೀತಾಭಿಮಾನಿಗಳನ್ನು ಮಾತ್ರವಲ್ಲದೆ, ಮಂಗಳೂರಿನ ಭಕ್ತರನ್ನೂ ದುಃಖದಲ್ಲಿ ಮುಳುಗಿಸಿದೆ. ಎರಡು ವಾರಗಳ ಹಿಂದಷ್ಟೇ ಅವರು ಯಾವುದೇ ಪ್ರಚಾರವಿಲ್ಲದೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ತಮ್ಮ ಸರಳ ವ್ಯಕ್ತಿತ್ವದಂತೆ ಯಾವುದೇ ಸದ್ದುಗದ್ದಲವಿಲ್ಲದೆ ದೇವಸ್ಥಾನಗಳಿಗೆ ಆಗಮಿಸಿದ್ದ ಎಸ್. ಜಾನಕಿ, ಅಲ್ಲಿದ್ದ ಅರ್ಚಕರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತರೊಂದಿಗೆ ಆತ್ಮೀಯವಾಗಿ ಮಾತನಾಡಿ ಎಲ್ಲರ ಮನ ಗೆದ್ದಿದ್ದರು.

ಆ ವೇಳೆ ಅನೇಕರು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇಂದು ಆ ನೆನಪುಗಳನ್ನು ಹಂಚಿಕೊಳ್ಳುತ್ತಾ ಕಣ್ಣೀರಿಡುತ್ತಿದ್ದಾರೆ. ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅರ್ಚಕರು ಸಹ ಈ ಸುದ್ದಿಯಿಂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿ ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡ ಬಳಿಕ ಆ ದುಃಖದಿಂದ ಹೊರಬರಲು ಅವರು ಸಾಕಷ್ಟು ಪ್ರಯತ್ನಿಸಿದ್ದರು. 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಭಾರತೀಯ ಸಂಗೀತ ಲೋಕದಲ್ಲಿ ಅಜರಾಮರರಾಗಿರುವ ಎಸ್. ಜಾನಕಿ, ತಮ್ಮ ಕೊನೆಯ ದಿನಗಳಲ್ಲಿ ಮಂಗಳೂರಿನ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಬಳಿಕ ಮೈಸೂರಿಗೆ ತೆರಳಿದ್ದರು.

ತಮ್ಮ ಕೊನೆಯ ಆಸೆಯಂತೆ ಮೈಸೂರಿನಲ್ಲೇ ಅಂತ್ಯಸಂಸ್ಕಾರ ನಡೆಯಬೇಕೆಂದು ಅವರು ಬಯಸಿದ್ದರೆಂದು ತಿಳಿದುಬಂದಿದ್ದು, ತಮ್ಮ ಜೀವನದ ಕೊನೆಯ ದಿನವನ್ನೂ ಮೈಸೂರಿನಲ್ಲೇ ಕಳೆದಿದ್ದಾರೆ.

ಎಸ್. ಜಾನಕಿ ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಸುಮಧುರ ಕಂಠ, ಸಾವಿರಾರು ಅಮರ ಗೀತೆಗಳು ಮತ್ತು ಸರಳ ವ್ಯಕ್ತಿತ್ವ ಎಂದೆಂದಿಗೂ ಅಭಿಮಾನಿಗಳ ಮನದಲ್ಲಿ ಜೀವಂತವಾಗಿರಲಿವೆ.

ನಿರಂತರ ನ್ಯೂಸ್ ತಂಡವು ಗಾನ ಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.








