ಕಣ್ಣೂರು : ತುಟಿಗೆ ಬಿದ್ದ ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬೆನ್ನಲ್ಲೇ 18 ತಿಂಗಳ ಹಸುಗೂಸೊಂದು ಪ್ರಜ್ಞೆ ಕಳೆದುಕೊಂಡು, ಐದು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿ ಶುಕ್ರವಾರ (ಜುಲೈ 10) ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಮದುವೆಯಾದ ಎಂಟು ವರ್ಷಗಳ ನಂತರ ಜನಿಸಿದ್ದ ದಂಪತಿಯ ಏಕೈಕ ಆಶಾಕಿರಣವಾಗಿದ್ದ ಮಗು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಎರಾಮಮ್-ಕುತ್ತೂರು ಗ್ರಾಮ ಪಂಚಾಯತ್ನ ಮಠಮಂಗಲಂ ನಿವಾಸಿಗಳಾದ ಟಿ. ಸೂರಜ್ ಮತ್ತು ವಿಜಿಷಾ ದಂಪತಿಯ ಏಕೈಕ ಪುತ್ರ ದೇವಾಂಶ್ ಶೌರಿಯಾ ಮೃತಪಟ್ಟ ದುರ್ದೈವಿ ಬಾಲಕ. ಮಗುವಿನ ಸಂಬಂಧಿ ಕೆ. ರಾಜೀವನ್ ನೀಡಿದ ದೂರಿನ ಮೇರೆಗೆ ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಯ ಅರಿವಳಿಕೆ ತಜ್ಞೆ ಡಾ. ಅಂಜಲಿ ಪೊದುವಾಲ್ ವಿರುದ್ಧ ಪಯ್ಯನ್ನೂರು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಜುಲೈ 5 ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಮಗು ದೇವಾಂಶ್ ಆಕಸ್ಮಿಕವಾಗಿ ಬಿದ್ದು ಆತನ ತುಟಿಗೆ ಗಾಯವಾಗಿತ್ತು. ತಕ್ಷಣ ಪೋಷಕರು ಮಗುವನ್ನು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರು ಗಾಯಕ್ಕೆ ಹೊಲಿಗೆ ಹಾಕುವ ಮುನ್ನ ಮಗುವಿಗೆ ಅರಿವಳಿಕೆ ನೀಡಿದ್ದರು. ಆದರೆ, ಅರಿವಳಿಕೆ ನೀಡಿದ ತಕ್ಷಣ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಆ ಬಳಿಕ ಎಂದಿಗೂ ಪ್ರಜ್ಞೆ ಮರಳಿ ಪಡೆಯಲೇ ಇಲ್ಲ. ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಯು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರು ಘಟಕಕ್ಕೆ ರವಾನಿಸಿತ್ತಾದರೂ, ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ವೈದ್ಯರು ಮಗುವಿನ ತೂಕವನ್ನು ಗಮನಿಸದೆ ಹೆಚ್ಚಿನ ಪ್ರಮಾಣದ ಅರಿವಳಿಕೆ ಡೋಸೇಜ್ ನೀಡಿದ್ದರಿಂದಲೇ ಮಗುವಿನ ಮೆದುಳಿಗೆ ತೀವ್ರ ಹಾನಿಯಾಗಿ (Brain Damage) ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಡಾ. ಅಂಜಲಿ ಪೊದುವಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಖಂಡಿಸಿ ಡಿವೈಎಫ್ಐ, ಯುವ ಕಾಂಗ್ರೆಸ್ ಮತ್ತು ಎಐವೈಎಫ್ ಕಾರ್ಯಕರ್ತರು ಪಯ್ಯನ್ನೂರು ಆಸ್ಪತ್ರೆಗೆ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ.
ಆದರೆ, ಆಸ್ಪತ್ರೆ ಮಂಡಳಿಯು ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ಕಂಪ್ಲೀಟ್ ಆಗಿ ನಿರಾಕರಿಸಿದೆ. “ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಅನಿರೀಕ್ಷಿತವಾಗಿ ಹೃದಯ ಸ್ತಂಭನ ಸಂಭವಿಸಿದೆ. ತಕ್ಷಣವೇ ವೆಂಟಿಲೇಟರ್ ಬೆಂಬಲ ನೀಡಿ ಕಣ್ಣೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಎಲ್ಲಾ ಅಧಿಕೃತ ವೈದ್ಯಕೀಯ ಪ್ರೋಟೋಕಾಲ್ಗಳನ್ನು ಪಾಲಿಸಲಾಗಿದೆ. ಸೂಕ್ತ ಡೋಸೇಜ್ ನೀಡಿದಾಗಲೂ ವೈದ್ಯಕೀಯ ಲೋಕದಲ್ಲಿ ಇಂತಹ ಅಪರೂಪದ ಅಡ್ಡಪರಿಣಾಮಗಳು ಉಂಟಾಗಬಹುದು” ಎಂದು ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ಸಮರ್ಥಿಸಿಕೊಂಡಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.








