ಕಾಸರಗೋಡು: ಸುಮಾರು 20 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ಯೊಂದು ರಸ್ತೆಬದಿಯ ಪೊದೆಗಳನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಇಲ್ಲಿನ ಪಟ್ಟಣದ ನೆಲ್ಲಿಕ್ಕುನ್ನು ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಗಾಯಗಳಾಗಿಲ್ಲ, ಭಾರಿ ಅನಾಹುತವೊಂದು ತಪ್ಪಿದೆ. ಮಾಜಿ ಶಾಸಕ ಎನ್.ಎ. ನೆಲ್ಲಿಕ್ಕುನ್ನು ಅವರ ನಿವಾಸದ ಬಳಿಯ ಬಂಕಾರಕುನ್ನು-ಕುದೂರು ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೀಡಾದ ಬಸ್ ತಂಗಳ್ ಉಪ್ಪಪ್ಪ ಸಮಿತಿಯಿಂದ ನಿರ್ವಹಿಸಲ್ಪಡುವ ನೆಲ್ಲಿಕ್ಕುನ್ನುನಲ್ಲಿರುವ ಅನ್ವರುಲ್ ಉಲೂಮ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ (ಎಯು ಎಯುಪಿ ಶಾಲೆ) ಸೇರಿದ್ದಾಗಿದೆ. ಬಸ್ನಲ್ಲಿ ಇದೇ ಸಮಿತಿಯ ತಂಗಳ್ ಉಪ್ಪಪ್ಪ ಆಂಗ್ಲ ಮಾಧ್ಯಮ ಶಾಲೆಯ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಅಪಘಾತ ನಡೆದ ಬಂಕಾರಕುನ್ನು-ಕುದೂರು ರಸ್ತೆ ಕೇವಲ 2.5 ಮೀಟರ್ ಅಗಲವಿದ್ದು, ಇಳಿಜಾರು, ತಗ್ಗು-ಗುಂಡಿಗಳು ಹಾಗೂ ಅಪಾಯಕಾರಿ ತಿರುವುಗಳಿಂದ ಕೂಡಿದೆ. ರಸ್ತೆಬದಿಯಲ್ಲಿ ಬೆಳೆದಿರುವ ಪೊದೆಗಳನ್ನು ತಪ್ಪಿಸಲು ಬಸ್ ಚಾಲಕ ಅಕ್ಬರ್ ಯತ್ನಿಸಿದಾಗ ಬಸ್ ರಸ್ತೆಯ ಅಂಚಿನಿಂದ ಜಾರಿ ಪಕ್ಕದ ಕಂದಕಕ್ಕೆ ಉರುಳಿದೆ.
ಬಸ್ ಕಂದಕಕ್ಕೆ ಉರುಳುತ್ತಿದ್ದಂತೆ ಒಳಗಿದ್ದ ಮಕ್ಕಳು ಭಯದಿಂದ ಕಿರುಚಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಬಸ್ನಿಂದ ಹೊರತೆಗೆದಿದ್ದಾರೆ.
ಘಟನೆಯ ಬಳಿಕ ಸ್ಥಳೀಯರು ರಸ್ತೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಿರಿದಾದ ರಸ್ತೆ ಹಾಗೂ ಗುಂಡಿಗಳೇ ಅಪಾಯಕ್ಕೆ ಕಾರಣವಾಗುತ್ತಿವೆ ಎಂದು ಆರೋಪಿಸಿದ್ದಾರೆ. ಶಾಲಾ ಬಸ್ಗಳು ಸೇರಿದಂತೆ ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವುದರ ಜೊತೆಗೆ ರಸ್ತೆಬದಿಯ ಪೊದೆಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ








