ರೇವಾರಿ : ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಹರ್ಯಾಣದ ಬಿಜೆಪಿಯ ಹಿರಿಯ ನಾಯಕನೊಬ್ಬರ ಸೋದರಳಿಯನನ್ನು ಆತನ ಬಾಲ್ಯದ ಗೆಳೆಯನೇ ಕಬ್ಬಿಣದ ರಾಡ್ನಿಂದ ಹೊಡೆದು ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರೇವಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 40 ವರ್ಷದ ಜಿತೇಂದ್ರ ಎಂದು ಗುರುತಿಸಲಾಗಿದೆ.ಈತ ಹರ್ಯಾಣದ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಉತ್ತಮ ಸಿಂಗ್ ಅವರ ಸೋದರಳಿಯ ಹಾಗೂ ಹಾಲಿನ ಡೈರಿ ಉದ್ಯಮ ನಡೆಸುತ್ತಿದ್ದ ವ್ಯಕ್ತಿ.ಆರೋಪಿ ಪ್ರವೀಣ್ उर्फ ಪಪ್ಲಾ, ಜಿತೇಂದ್ರನಿಗೆ ಬಾಲ್ಯದ ಸ್ನೇಹಿತನಾಗಿದ್ದ. ಆದರೆ, ತನ್ನ ಹೆಂಡತಿಯೊಂದಿಗೆ ಜಿತೇಂದ್ರ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಪ್ರವೀಣ್ ಮನಸ್ಸಿನಲ್ಲಿ ಬಲವಾಗಿ ಬೆಳೆದಿತ್ತು.
ಇದಕ್ಕಾಗಿ ಮಾಸ್ಟರ್ ಪ್ಲಾನ್ ರೂಪಿಸಿದ್ದ ಪ್ರವೀಣ್, ಸೆಪ್ಟೆಂಬರ್ 7ರಂದು ಬಿಯರ್ ಪಾರ್ಟಿ ಮಾಡುವ ನೆಪದಲ್ಲಿ ಜಿತೇಂದ್ರನನ್ನು ಕರೆದುಕೊಂಡು ಹೋಗಿದ್ದ. ಮೊದಲು ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಿ, ಬಳಿಕ ಕನಾಲ್ ಸೇತುವೆ ಬಳಿ ಕುಡಿದಿದ್ದಾರೆ.ನಂತರ ಹೆಚ್ಪಿಸಿಎಲ್ ರಿಫೈನರಿ ಹತ್ತಿರದ ನಿರ್ಜನ ರಸ್ತೆಯತ್ತ ಕರೆದೊಯ್ದಿದ್ದಾರೆ.
ಜಿತೇಂದ್ರ ಕಾರಿನಿಂದ ಹೊರಬರುತ್ತಿದ್ದಂತೆಯೇ, ಪ್ರವೀಣ್ ತನ್ನ ಬಳಿಯಿದ್ದ ಕಬ್ಬಿಣದ ರಾಡ್ನಿಂದ ಆತನ ತಲೆಗೆ ಸರಣಿ ಪ್ರಹಾರ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಜಿತೇಂದ್ರ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.ಈ ಭೀಕರ ಕೃತ್ಯ ನಡೆಯುವಾಗ ಆರೋಪಿ ಪ್ರವೀಣ್ನ ಸೋದರಳಿಯ ಅಮಾನ್ ಯಾರಿಗೂ ತಿಳಿಯದಂತೆ ನಿಂತು ಕಾವಲು ಕಾಯುತ್ತಿದ್ದನು.ಈ ಸಂಪೂರ್ಣ ಹತ್ಯೆಯ ದೃಶ್ಯ ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸ್ ತನಿಖೆ ಹಾಗೂ ಬಂಧನ:
ಘಟನೆ ನಡೆದ ನಂತರ ಎಸ್ಪಿ ಹೇಮೇಂದ್ರ ಕುಮಾರ್ ಮೀನಾ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಜಿತೇಂದ್ರ ಕುಟುಂಬದವರ ಅನುಮಾನ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ (CCTV ಮತ್ತು ಕಾಲ್ ಡಿಟೇಲ್ಸ್) ಆಧಾರದ ಮೇಲೆ ಪೊಲೀಸರು ಮುಖ್ಯ ಆರೋಪಿ ಪ್ರವೀಣ್ ಮತ್ತು ಆತನಿಗೆ ಸಹಕರಿಸಿದ ಅಮಾನ್ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಪ್ರವೀಣ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.








