ಮಂಗಳೂರು: ಸೆಪ್ಟೆಂಬರ್ 18ರಂದು ಪಡೀಲ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಚಿವರು ಮಂಗಳೂರಿಗೆ ಆಗಮಿಸಲಿದ್ದಾರೆ. ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಧ್ಯಾಹ್ನ ಮೇರಿಹಿಲ್ನ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಲಿದ್ದು, ನಂತರ ಮತ್ತೆ ಮಂಗಳೂರು ನಗರಕ್ಕೆ ಮರಳಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 19ರ ಬೆಳಗ್ಗೆ ಅವರು ನಗರದಿಂದ ನಿರ್ಗಮಿಸಲಿದ್ದಾರೆ. ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ಪೊಲೀಸರು ಸೂಚಿಸಿದ್ದಾರೆ.
ಗಣ್ಯರ ಸಂಚಾರ ಇರುವ ರಸ್ತೆಗಳು
ಸೆಪ್ಟೆಂಬರ್ 17ರ ಸಂಜೆದಿಂದ ಸೆಪ್ಟೆಂಬರ್ 19ರ ಬೆಳಗ್ಗೆಯವರೆಗೆ:
ಬಜಪೆ ವಿಮಾನ ನಿಲ್ದಾಣ → ಕಾವೂರು → ಬೊಂದೆಲ್ → ಮೇರಿಹಿಲ್ → ಕೆ.ಪಿ.ಟಿ. → ಕದ್ರಿ ಕಂಬಳ → ಬಂಟ್ಸ್ ಹಾಸ್ಟೆಲ್ → ಬಿ.ಆರ್. ಅಂಬೇಡ್ಕರ್ ಜಂಕ್ಷನ್ → ಹಂಪನಕಟ್ಟೆ → ಕ್ಲಾಕ್ ಟವರ್ → ಹ್ಯಾಮಿಲ್ಟನ್ ಜಂಕ್ಷನ್ ಮಾರ್ಗದಲ್ಲಿ ಗಣ್ಯರ ಸಂಚಾರ ಇರಲಿದೆ.
ಸೆಪ್ಟೆಂಬರ್ 18ರಂದು ಬೆಳಗ್ಗೆ:
ಹ್ಯಾಮಿಲ್ಟನ್ ಜಂಕ್ಷನ್ → ಕ್ಲಾಕ್ ಟವರ್ → ಹಂಪನಕಟ್ಟೆ → ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್ → ಕೆ.ಪಿ.ಟಿ. ಜಂಕ್ಷನ್ → ನಂತೂರು ವೃತ್ತ → ಪಂಪುವೆಲ್ → ನಾಗುರಿ → ಬಜಾಲ್ ಕ್ರಾಸ್ (ಪ್ರಜಾಸೌಧ) → ಪಡೀಲ್ ಜಂಕ್ಷನ್ ಮಾರ್ಗದಲ್ಲಿ ಸಂಚಾರ ಇರಲಿದೆ.
ಮೇಲಿನ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ತಿಳಿಸಲಾಗಿದ್ದು, ಸುಗಮ ಸಂಚಾರಕ್ಕಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ.
ಬದಲಿ ಮಾರ್ಗಗಳು
- ಬದ್ರಿಯಾ ಜಂಕ್ಷನ್ನಿಂದ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ: ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮಾರ್ಗ ಬಳಸುವ ಬದಲು ಬದ್ರಿಯಾ ಜಂಕ್ಷನ್ – ನೀಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
- ಹ್ಯಾಮಿಲ್ಟನ್ ಜಂಕ್ಷನ್ನಿಂದ ಬದ್ರಿಯಾ ಜಂಕ್ಷನ್ ಕಡೆಗೆ: ತಾಜ್ ವಿವಾಂತ್ ಮುಂಭಾಗದ ಮಾರ್ಗದ ಬದಲು ಹ್ಯಾಮಿಲ್ಟನ್ ಜಂಕ್ಷನ್ – ನೆಲ್ಲಿಕಾಯಿ ರಸ್ತೆ ಮಾರ್ಗ ಬಳಸಬಹುದು.
- ಪಂಪುವೆಲ್ ಜಂಕ್ಷನ್–ನಾಗುರಿ–ಪಡೀಲ್ ಮಾರ್ಗ: ಪಂಪುವೆಲ್ನಿಂದ ನಾಗುರಿ ಮೂಲಕ ಪಡೀಲ್ ಅಥವಾ ಪಡೀಲ್ನಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ಹೋಗುವ ವಾಹನಗಳು ನಂತೂರು ವೃತ್ತ – ಕೈಕಂಬ – ಮರೋಳಿ ಮಾರ್ಗವನ್ನು ಬಳಸಬಹುದು. ಮತ್ತೊಂದು ಪರ್ಯಾಯವಾಗಿ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
- ಬಜಾಲ್ ಕ್ರಾಸ್ (ಪ್ರಜಾಸೌಧ) ಭಾಗ: ಬಜಾಲ್ ಕಡೆಗೆ ಅಥವಾ ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳು ಪಡೀಲ್–ಬಜಾಲ್ ಕ್ರಾಸ್ ಮಾರ್ಗದ ಬದಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ – ಬಜಾಲ್ ಮೂಲಕ ಸಂಚರಿಸಬಹುದು.
- ತೊಕ್ಕೊಟ್ಟಿನಿಂದ ಪಂಪುವೆಲ್ ಕಡೆಗೆ: ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮಾರ್ಗವಾಗಿ ನಗರಕ್ಕೆ ತೆರಳುವಂತೆ ಮಂಗಳೂರು ಪೊಲೀಸರು ತಿಳಿಸಿದ್ದಾರೆ.








