Author: admin
ವಿಟ್ಲ : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ವಿಟ್ಲಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್ಸು ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಯತ್ತ ತೆರಳುತ್ತಿತ್ತು. ಕುಂಟುಕುಡೇಲು ತಲುಪುತ್ತಿದ್ದಂತೆ ಇಳಿಜಾರಿನ ರಸ್ತೆಯಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ನೇರವಾಗಿ ರಸ್ತೆ ಬಿಟ್ಟು ಕೆಳಗಿಳಿದು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಸ್ಸಿನ ಮೇಲೆಯೇ ಬಿದ್ದಿದೆಯಾದರೂ, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಬಸ್ಸಿನಲ್ಲಿದ್ದ 15ಕ್ಕೂ ಹೆಚ್ಚು ಶಾಲಾ ಮಕ್ಕಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶ ರೀತಿಯಲ್ಲಿ ಸಂಪೂರ್ಣ ಸುರಕ್ಷಿತವಾಗಿ ಪಾರಾಗಿದ್ದಾರೆ.
ಸುರತ್ಕಲ್ : ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಾಗಿ ಗುತ್ತಿಗೆದಾರರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್ನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ ಭಾಸ್ಕರ (ಶೀಟ್ ಮೇಲ್ಛಾವಣಿ ನಿರ್ಮಾಣ ಗುತ್ತಿಗೆದಾರ) ಮೃತ ದುರ್ದೈವಿ. ಕೃಷ್ಣಾಪುರ 6ನೇ ಬ್ಲಾಕ್ನಲ್ಲಿರುವ ವಸತಿ ಸಮುಚ್ಚಯವೊಂದರ ತಗುಡು ಶೀಟ್ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕಾಗಿ ಭಾಸ್ಕರ ಅವರು ಕಬ್ಬಿಣದ ರಾಡ್ ಮೂಲಕ ಅಳತೆ ತೆಗದುಕೊಳ್ಳುತ್ತಿದ್ದರು. ಈ ವೇಳೆ ಕಬ್ಬಿಣದ ರಾಡ್ ಅನ್ನು ಕಂಕುಳಲ್ಲಿಟ್ಟುಕೊಂಡು ತಿರುಗುವ ಸಂದರ್ಭದಲ್ಲಿ, ಕಟ್ಟಡದ ಪಕ್ಕದಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ರಾಡ್ ಸ್ಪರ್ಶಿಸಿದೆ. ಪರಿಣಾಮ ತೀವ್ರ ಪ್ರಮಾಣದ ವಿದ್ಯುತ್ ಪ್ರವಾಹ ಹರಿದು ಭಾಸ್ಕರ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಭಾಸ್ಕರ ಅವರ ಪುತ್ರ ನೀಡಿದ ದೂರಿನನ್ವಯ ಸುರತ್ಕಲ್…
ತೆಲಂಗಾಣ: ವೇದಮಂತ್ರಗಳ ಸಮ್ಮುಖದಲ್ಲಿ ಏಳು ಹೆಜ್ಜೆ ತುಳಿದು, ಅಗ್ನಿಸಾಕ್ಷಿಯಾಗಿ ವಿವಾಹವಾದ ಪತಿಯನ್ನೇ ಕೊಲೆ ಮಾಡಲು ಪತ್ನಿಯೊಬ್ಬಳು ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಅಪಘಾತದ ರೂಪದಲ್ಲಿ ಕೊಲೆ ಮಾಡಬೇಕು, ಇಲ್ಲವಾದರೆ ತಾನೇ ಕೊಲ್ಲುವುದಾಗಿ ಪತ್ನಿ ಕಳುಹಿಸಿದ್ದ ಸಂದೇಶಗಳನ್ನು ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಡೋರ್ನಕಲ್ ಮಂಡಲದ ಚಿಲುಕೋಡು ಗ್ರಾಮದ ನಿವಾಸಿ, ಖಾಸಗಿ ಆಸ್ಪತ್ರೆ ಉದ್ಯೋಗಿ ಗಾಡೆ ರಾಜೇಶ್ವರರಾವ್ ಅವರಿಗೆ 2016ರಲ್ಲಿ ಭವಾನಿ ಎಂಬುವವರೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ರಾಜೇಶ್ವರರಾವ್ ಕಳೆದ ತಿಂಗಳ 27 ರಂದು ಮಧ್ಯಾಹ್ನ ಮನೆಗೆ ಹೋದಾಗ, ಪತ್ನಿ ಭವಾನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯವಾಗಿರುವುದನ್ನು ಕಂಡು ಅನುಮಾನಗೊಂಡಿದ್ದರು. ಮರುದಿನ ಈ ಕುರಿತು ಪಂಚಾಯಿತಿ ನಡೆಸಲು ಹಿರಿಯರನ್ನು ಕರೆತರಲು ತೆರಳುತ್ತಿದ್ದಾಗ, ಪ್ರಿಯಕರ ಪುರಿಮೆಟ್ಲ ಸೈದುಲು ರಾಜೇಶ್ವರರಾವ್ ಅವರನ್ನು ಹಿಂಬಾಲಿಸಿದ್ದ. ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಪರಾರಿಯಾಗಿದ್ದ ಬಳಿಕ ಪತ್ನಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಆಕೆಯ ವಿವಾಹೇತರ ಸಂಬಂಧ ಹಾಗೂ ಕೊಲೆ ಸಂಚಿನ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅಧಿಕೃತ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರನ್ನು ಪ್ರದರ್ಶಿಸಲಾಗಿದ್ದು, ಇದಕ್ಕೆ ಸರ್ಕಾರಿ ಅನುದಾನ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. ಅಧಿಕೃತ ನಿವಾಸವು ಹುದ್ದೆಯ ಆಧಾರದ ಮೇಲೆ ಹಂಚಿಕೆಯಾಗುವುದರಿಂದ, ನಾಮಫಲಕದಲ್ಲಿ ಅಧಿಕಾರಿಯ ಹೆಸರು ಮತ್ತು ಹುದ್ದೆ ಮಾತ್ರ ಇರುವುದು ಆಡಳಿತಾತ್ಮಕ ಶಿಷ್ಟಾಚಾರ. ಆದರೆ ಇಲ್ಲಿ ಸಂಗಾತಿಯ ಹೆಸರು ಸೇರಿಸಿರುವುದು ಸರ್ಕಾರಿ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ಈ ನಾಮಫಲಕದ ತಯಾರಿಕೆ ಮತ್ತು ಅಳವಡಿಕೆಗೆ ಸಾರ್ವಜನಿಕ ಹಣ ವಿನಿಯೋಗವಾಗಿದ್ದರೆ, ಅದು ನಿಯಮಬಾಹಿರವಾಗುತ್ತದೆ. ಈ ಕುರಿತು ವೆಚ್ಚದ ದಾಖಲೆಗಳು, ಬಿಲ್ಗಳು ಹಾಗೂ ಶಿಷ್ಟಾಚಾರದ ಮಂಜೂರಾತಿಯನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ನಾಮಫಲಕ ತೆರವುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಾದ್ಯಂತ ಸರ್ಕಾರಿ ನಿವಾಸಗಳಲ್ಲಿ ಏಕರೂಪದ ಮಾರ್ಗಸೂಚಿ ಹೊರಡಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ
ಮಂಗಳೂರು : ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಹಳಿ ಹಾಗೂ ಪ್ಲಾಟ್ಫಾರ್ಮ್ ನಡುವಿನ ಕಂದಕಕ್ಕೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರನ್ನು, ಆನ್ಡ್ಯೂಟಿ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್ ಅವರು ಸಮಯಪ್ರಜ್ಞೆ ಮೆರೆದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಸೋಮವಾರ (ಆಗಸ್ಟ್ 10) ನಡೆದಿದೆ ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್ ಅವರು ತಕ್ಷಣ ಅಪಾಯವನ್ನು ಅರಿತು, ಕ್ಷಣಾರ್ಧದಲ್ಲಿ ಆ ಸ್ಥಳಕ್ಕೆ ಓಡಿ ಬಂದಿದ್ದಾರೆ. ಕೆಲವೇ ಕ್ಷಣದಲ್ಲಿ ಜೀವದ ಹಂಗು ತೊರೆದು ಪ್ರಯಾಣಿಕನನ್ನು ಬಲವಾಗಿ ಹಿಡಿದು ಪ್ಲಾಟ್ಫಾರ್ಮ್ ಕಡೆಗೆ ಎಳೆದಿದ್ದಾರೆ. ಸಂದೀಪ್ ಅವರ ಈ ಸಮಯಪ್ರಜ್ಞೆ ಹಾಗೂ ಧೈರ್ಯದಿಂದಾಗಿ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ. ಸಂದೀಪ್ ನಾಯಕ್ ಅವರ ಅತ್ಯುತ್ತಮ ಕರ್ತವ್ಯ ನಿಷ್ಠೆ, ಚುರುಕುತನ ಹಾಗೂ ಧೈರ್ಯಕ್ಕೆ ಸುರತ್ಕಲ್ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಕೊಂಕಣ ರೈಲ್ವೆ ವಿಭಾಗ ಹಾಗೂ ಸಾರ್ವಜನಿಕ ವಲಯದಿಂದ ಭಾರೀ ಶ್ಲಾಘನೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ. ಸಂದೀಪ್ ನಾಯಕ್ ಅವರ ಸಮಯ ಪ್ರಜ್ಞೆ ಹಾಗೂ ಸಾಹಸಕ್ಕೆ…
ಮಹಾರಾಷ್ಟ್ರ : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸರ್ಕಾರಿ ಅನುದಾನಿತ ಬುಡಕಟ್ಟು ವಸತಿ ಶಾಲೆಯೊಂದರಲ್ಲಿ ಮಧ್ಯರಾತ್ರಿ ವಿಷಪೂರಿತ ಹಾವು ಕಚ್ಚಿ ಮೂವರು ವಿದ್ಯಾರ್ಥಿನಿಯರು ದಾರುಣವಾಗಿ ಮೃತಪಟ್ಟಿದ್ದು, ಮತ್ತೂ ಮೂವರು ಬಾಲಕಿಯರು ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಧನೋರಾ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಜಪ್ತಲೈ ಗ್ರಾಮದ ಅನುದಾನಿತ ಬುಡಕಟ್ಟು ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಭಾನುವಾರ ಮಧ್ಯರಾತ್ರಿ ಈ ಭೀಕರ ದುರಂತ ಸಂಭವಿಸಿದೆ. ಹಾಸ್ಟೆಲ್ನ ಕೊಠಡಿಯಲ್ಲಿ ನೆಲದ ಮೇಲೆ ಮಲಗಿದ್ದಾಗ ಬಾಲಕಿಯರಿಗೆ ವಿಷಪೂರಿತ ಹಾವು ಕಚ್ಚಿದೆ. ಹಾವು ಕಡಿತಕ್ಕೆ ಒಳಗಾದವರ ಪೈಕಿ 8, 12 ಮತ್ತು 14 ವರ್ಷದ ಮೂವರು ಬುಡಕಟ್ಟು ಬಾಲಕಿಯರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 11 ರಿಂದ 14 ವರ್ಷದೊಳಗಿನ ಮತ್ತೂ ಮೂವರು ಬಾಲಕಿಯರಿಗೆ ಹಾವು ಕಚ್ಚಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ. “ಘಟನೆ ಹೇಗೆ ಸಂಭವಿಸಿತು, ವಿದ್ಯಾರ್ಥಿನಿಯರು ವಾಸಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು…
ಉಡುಪಿಯ ಕಲ್ಪನಾ ಟಾಕೀಸ್ ಸಮೀಪ ಇರುವ ಸೊಸೈಟಿ ಒಂದರ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸಚಿನ್ ಶೆಟ್ಟಿ (44) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿನ್ ಶೆಟ್ಟಿ ಕಳೆದ ನಾಲ್ಕು ವರ್ಷಗಳಿಂದ ಸಾಯಿರಾಜ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಿಗ್ಗೆ ತಾವು ವಾಸವಿದ್ದ ಅಂಬಲಪಾಡಿ ಸಮೀಪದ ಫ್ಲಾಟಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯ ಬಳಿಕವಷ್ಟೇ ಆತ್ಮಹತ್ಯೆಗೆ ಕಾರಣ ತಿಳಿದುಬರಲಿದೆ.
ಕಾಪು: ಎಕ್ಸ್ಪ್ರೆಸ್ ಬಸ್ಗಳ ಚಾಲಕರು ಬಸ್ಗಳನ್ನು ಏಕಾಏಕಿ ರಸ್ತೆಯಲ್ಲೇ ನಿಲ್ಲಿಸಿ, ಪರಸ್ಪರ ತೀವ್ರ ವಾಗ್ವಾದ ನಡೆಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಎರಡು ಎಕ್ಸ್ಪ್ರೆಸ್ ಬಸ್ಗಳ ಚಾಲಕರು ರಸ್ತೆಯಲ್ಲೇ ಏಕಾಏಕಿ ಬಸ್ಗಳನ್ನು ನಿಲ್ಲಿಸಿ, ಪರಸ್ಪರ ತೀವ್ರ ವಾಗ್ವಾದ ನಡೆಸಿದರು. ಇದರಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಯಿತು. ಬಸ್ಗಳ ಸಮಯದ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಮೊದಲು ಬಸ್ನೊಳಗೇ ಚಾಲಕರು ಹಾಗೂ ನಿರ್ವಾಹಕರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಅವರು ಬಸ್ನಿಂದ ಕೆಳಗಿಳಿದು ಪ್ರಯಾಣಿಕರ ಸಮ್ಮುಖದಲ್ಲೇ ಪರಸ್ಪರ ವಾಗ್ವಾದ ಮುಂದುವರಿಸಿದರು. ಸ್ಥಳೀಯ ನಿವಾಸಿಗಳು ಹಾಗೂ ಆಟೊರಿಕ್ಷಾ ಚಾಲಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ಜಗಳವಾಡುತ್ತಿದ್ದ ಬಸ್ ಸಿಬ್ಬಂದಿ ಸುಮಾರು 10 ನಿಮಿಷಗಳ ಕಾಲ ವಾಗ್ವಾದ ಮುಂದುವರಿಸಿದರು. ಕಾಪು ಸರ್ವಿಸ್ ಬಸ್ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ಬಸ್ ಸಿಬ್ಬಂದಿಯ ಇಂತಹ ಅಶಿಸ್ತಿನ ವರ್ತನೆ ಪದೇಪದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.…
ಶಿವಮೊಗ್ಗ: ಆಗುಂಬೆಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಚಕ್ರ ಕಳಚಿ ಬಿದ್ದ ಘಟನೆ ನಡೆದಿದೆ. ಚಕ್ರ ಕಳಚುತ್ತಿದ್ದಂತೆ ಎಚ್ಚೆತ್ತ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಬಸ್ ಉಡುಪಿಯಿಂದ – ಶಿವಮೊಗ್ಗಕ್ಕೆ ಬರುತ್ತಿತ್ತು. ಉಡುಪಿಯಿಂದ ಘಾಟ್ ಹತ್ತಿ, ಆಗುಂಬೆ ಬಳಿ ಬಂದಾಗ ಬಸ್ನ ಚಕ್ರ ಕಳಚಿದೆ. ಫೋಟೋದಲ್ಲಿ ಚಕ್ರ ಕಳಚಿ ಬಿದ್ದ ಜಾಗದಿಂದ ಸುಮಾರು 50 ಮೀಟರ್ ದೂರದಲ್ಲಿ ಬಸ್ ನಿಂತಿರುವುದನ್ನು ನೋಡಬಹುದಾಗಿದೆ. ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬಸ್ ನಿಧಾನಗತಿಯಲ್ಲಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಅಕಸ್ಮಾತ್ ಘಾಟಿಯಲ್ಲಿದ್ದಾಗ ಅಥವಾ ವೇಗವಾಗಿದ್ದಾಗ ಈ ಅವಘಡ ಆಗಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪುತ್ತೂರು: ಮೆಲ್ಕಾರ್ನಿಂದ ಸುಬ್ರಹ್ಮಣ್ಯಕ್ಕೆ ಸಿಮೆಂಟ್ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ರವಿವಾರ ಕಡಬ ಸಮೀಪದ ಮರ್ದಾಳದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆ ಬದಿಗೆ ಚಲಿಸಿ ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಲಾರಿ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆ ಬಳಿಕ ಲಾರಿಯಲ್ಲಿದ್ದ ಸಿಮೆಂಟ್ ಇಟ್ಟಿಗೆಗಳನ್ನು ಮತ್ತೊಂದು ಲಾರಿಗೆ ಸ್ಥಳಾಂತರಿಸಿ ಸುಬ್ರಹ್ಮಣ್ಯಕ್ಕೆ ಕಳುಹಿಸಲಾಯಿತು. ಬಳಿಕ ಕ್ರೇನ್ನ್ನು ಸ್ಥಳಕ್ಕೆ ತರಿಸಿ ಚರಂಡಿಗೆ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತಲಾಯಿತು. ಅಪಘಾತದ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಸಮಾಧಾನಕರ ಸಂಗತಿಯಾಗಿದೆ.



