ಜೆಹನಾಬಾದ್ (ಬಿಹಾರ) : ಊಟ ನೀಡಲು ತಡವಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ಮಾನಸಿಕ ಅಸ್ವಸ್ಥ ಹಾಗೂ ಮಾದಕ ವ್ಯಸನಿಯಾಗಿದ್ದ ಅಳಿಯನೊಬ್ಬ ತನ್ನ ಅತ್ತಿಗೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ಕಡಿದ ತಲೆಯನ್ನು ಮನೆಯ ಮುಂಭಾಗದ ಮರಕ್ಕೆ ನೇತುಹಾಕಿದ ರಾಕ್ಷಸೀಯ ಘಟನೆ ಬಿಹಾರದ ಜೆಹನಾಬಾದ್ ಜಿಲ್ಲೆಯ ಪಾರ್ಸ್ ಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ಇಮಾದ್ಪುರ ಗ್ರಾಮದಲ್ಲಿ ನಡೆದಿದೆ.
ಇಮಾದ್ಪುರ ಗ್ರಾಮದ ನಿವಾಸಿ ಧರ್ಮೇಂದ್ರ ಕುಮಾರ್ ಅವರ ಪತ್ನಿ ಅಂಶು ದೇವಿ (25) ಹತ್ಯೆಯಾದ ದುರ್ದೈವಿ. ಧರ್ಮೇಂದ್ರ ಅವರ ಸಹೋದರ, ಮಾದಕ ವ್ಯಸನಿ ಕುನಾಲ್ ಕುಮಾರ್ ಕೊಲೆ ಮಾಡಿದ ಆರೋಪಿ. ಘಟನೆ ನಡೆದ ಸಮಯದಲ್ಲಿ ಕುಟುಂಬದ ಇತರ ಸದಸ್ಯರೆಲ್ಲರೂ ಭತ್ತ ನಾಟಿ ಮಾಡಲು ಹೊಲಗಳಿಗೆ ತೆರಳಿದ್ದರಿಂದ ಅಂಶು ದೇವಿ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಹೊಲದಿಂದ ಮನೆಗೆ ಬಂದ ಕುನಾಲ್ ಕುಮಾರ್ ಅತ್ತಿಗೆ ಬಳಿ ಆಹಾರ ಕೇಳಿದ್ದಾನೆ. ಊಟ ನೀಡುವುದು ಕೊಂಚ ತಡವಾಗಿದ್ದಕ್ಕೆ ಆಕ್ರೋಶಗೊಂಡ ಆರೋಪಿ, ಮನೆಯಲ್ಲಿದ್ದ ಹರಿತವಾದ ಕೊಡಲಿಯಿಂದ ಅಂಶು ದೇವಿ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾನೆ. ಬಳಿಕ ಕಡಿದ ತಲೆಯನ್ನು ತಂದು ಮನೆಯ ಮುಂಭಾಗದಲ್ಲಿದ್ದ ಮರಕ್ಕೆ ನೇತುಹಾಕಿದ್ದಾನೆ. ಈ ದೃಶ್ಯ ಕಂಡು ಇಡೀ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪಾರ್ಸ್ ಬಿಘಾ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಕುನಾಲ್ ಕುಮಾರ್ನನ್ನು ಬಂಧಿಸಿದ್ದಾರೆ. ಹತ್ಯೆಗೆ ಬಳಸಿದ್ದ ಕೊಡಲಿಯನ್ನು ಜಪ್ತಿ ಮಾಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.








