ಖಮ್ಮಂ: ಸಾಕು ನಾಯಿ ಆಟೋ ಬಳಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ತೆಲಂಗಾಣದ ಖಮ್ಮಂ ನಗರದಲ್ಲಿ ನಡೆದಿದೆ. ವಿವಾದದ ವೇಳೆ 23 ವರ್ಷದ ಯುವಕನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡ ಆತ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ಅಲಂಕಾರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಉಂಡೇಟಿ ಶ್ರೀನಾಥ್ (23) ಎಂದು ಗುರುತಿಸಲಾಗಿದೆ.
ಆಗಸ್ಟ್ 13ರಂದು ರಾತ್ರಿ 10.30ರ ನಂತರ ಶ್ರೀನಾಥ್ ತನ್ನ ಸ್ನೇಹಿತ ವೀರೇಶ್ ಜೊತೆ ಆಟೋದಲ್ಲಿ ಕುಳಿತಿದ್ದಾಗ ಘಟನೆ ನಡೆದಿದೆ. ಇದೇ ವೇಳೆ ಸ್ಥಳೀಯ ನಿವಾಸಿ ವೇಮುಲ ಮಧು (28) ತನ್ನ ಸಾಕು ನಾಯಿಯನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗಿದ್ದ. ಈ ವೇಳೆ ನಾಯಿ ಶ್ರೀನಾಥ್ ಹಾಗೂ ವೀರೇಶ್ ಕುಳಿತಿದ್ದ ಆಟೋ ಸಮೀಪ ಮೂತ್ರ ವಿಸರ್ಜನೆ ಮಾಡಿದ್ದು, ಅವರತ್ತ ಬೊಗಳಿದೆ ಎನ್ನಲಾಗಿದೆ.
ಇದನ್ನು ಪ್ರಶ್ನಿಸಿದ ಶ್ರೀನಾಥ್ ಹಾಗೂ ಮಧು ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಈ ವಿಚಾರ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಶ್ರೀನಾಥ್ ಹಾಗೂ ವೀರೇಶ್ ಮಧುವಿನ ಮನೆ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ.
ಅಲ್ಲಿ ಮೂವರ ನಡುವೆ ಹೊಡೆದಾಟ ನಡೆದಿದ್ದು, ಕೋಲುಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಮಧು ಮನೆಯೊಳಗೆ ತೆರಳಿ ತರಕಾರಿ ಕತ್ತರಿಸಲು ಬಳಸುವ ಚಾಕುವನ್ನು ತಂದು ಶ್ರೀನಾಥ್ ಮೇಲೆ ಹಲವು ಬಾರಿ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಚಾಕು ಇರಿತದ ಬಳಿಕ ಮಧು ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಶ್ರೀನಾಥ್ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವಗೊಂಡು ಚರಂಡಿ ಸಮೀಪ ಕುಸಿದುಬಿದ್ದಿದ್ದಾನೆ. ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಧುವನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀನಾಥ್ ಸಾವಿಗೆ ಕಾರಣವಾದ ನಿಖರ ಘಟನೆಗಳ ಸರಣಿ ಹಾಗೂ ಜಗಳದ ಸಂಪೂರ್ಣ ಹಿನ್ನೆಲೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








