ನವದೆಹಲಿ: ಭಾರತದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲು ಪ್ರಸ್ತುತ ಇರುವ ‘ಗಲ್ಲಿಗೇರಿಸುವ’ ಪದ್ಧತಿಯನ್ನೇ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಮರಣದಂಡನೆಯನ್ನು ಕಡಿಮೆ ನೋವಿನಿಂದ ಕೂಡಿದ ಇತರ ವಿಧಾನಗಳಾದ ಮಾರಣಾಂತಿಕ ಇಂಜೆಕ್ಷನ್ ಅಥವಾ ಗುಂಡಿಕ್ಕುವ ವಿಧಾನ ಮೂಲಕ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮರಣದಂಡನೆಯನ್ನು ಗಲ್ಲಿಗೇರಿಸುವ ಬದಲಾಗಿ ಕಡಿಮೆ ನೋವಿನ ವಿಧಾನಗಳನ್ನು ಬಳಸಬೇಕು ಮತ್ತು ಇದು ಘನತೆಯಿಂದ ಕೂಡಿರಬೇಕು ಎಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗಲ್ಲಿಗೇರಿಸುವಿಕೆಯು ಕ್ರೂರ ಮತ್ತು ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯ ಘನತೆಗೆ ಕುಂದು ಬರುವಂತಿರುತ್ತದೆ ಎಂಬುದು ಅವರ ವಾದ. ಆದರೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಅರ್ಜಿಯನ್ನು ತಳ್ಳಿಹಾಕಿದೆ.
ಅರ್ಜಿದಾರರ ವಾದದ ಪ್ರಕಾರ, ಗಲ್ಲಿಗೇರಿಸುವ ವ್ಯಕ್ತಿ ದೀರ್ಘಕಾಲ ಬಾಧೆ ಪಡಬೇಕಾಗುತ್ತದೆ. ಆತ ಸತ್ತಿದ್ದಾನೆಂದು ಖಚಿತಪಡಿಸಲು 40 ನಿಮಿಷ ಬೇಕಾಗುತ್ತದೆ. ಆದರೆ, ಗ್ಯಾಸ್ ಚೇಂಬರ್, ಲೆಥಲ್ ಇಂಜೆಕ್ಷನ್, ಶೂಟ್ ವಿಧಾನಗಳಲ್ಲಿ 5 ನಿಮಿಷದಲ್ಲಿ ವ್ಯಕ್ತಿಯ ಸಾವನ್ನು ಖಚಿತಪಡಿಸಬಹುದು.
ಸದ್ಯಕ್ಕೆ ದೇಶದಲ್ಲಿ ಮರಣದಂಡನೆಗಾಗಿ ಗಲ್ಲಿಗೇರಿಸುವ ಪದ್ಧತಿಯು ಸಂವಿಧಾನಬದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಇದು ಅಂತಿಮ ತೀರ್ಪಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.








