ಮಂಗಳೂರು: ತುಳುನಾಡಿನ ಹೆಮ್ಮೆಯ ಕರಾವಳಿ ಹೆಬ್ಬಾಗಿಲಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರವೀರರಾದ ಕೋಟಿ-ಚೆನ್ನಯರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಒತ್ತಾಯಿಸಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಈ ಕುರಿತು ಅಧಿಕೃತ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸುವಂತೆ ಮನವಿ ಮಾಡಿದ್ದಾರೆ. ಕೋಟಿ-ಚೆನ್ನಯರು ಕೇವಲ ಐತಿಹಾಸಿಕ ನಾಯಕರಲ್ಲ, ತುಳುನಾಡಿನ ಸ್ವಾಭಿಮಾನ, ಸಾಮಾಜಿಕ ನ್ಯಾಯ, ಸತ್ಯ, ಧರ್ಮ, ಶೌರ್ಯ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾಗಿದ್ದಾರೆ. ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಕರಾವಳಿಯ ಜನತೆಗೆ ನೀಡುವ ಬಹುದೊಡ್ಡ ಗೌರವವಾಗಲಿದೆ ಎಂದು ಮಿಥುನ್ ರೈ ಪತ್ರದಲ್ಲಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವ ಬೇಡಿಕೆಯ ಸುದೀರ್ಘ ಹೋರಾಟದ ಬಗ್ಗೆಯೂ ಮಿಥುನ್ ರೈ ನೆನಪಿಸಿದ್ದಾರೆ. ತಾವು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2010ರ ಡಿಸೆಂಬರ್ 10ರಂದು ಕೆ.ಪಿ.ಟಿ ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಬೃಹತ್ ‘ಪಂಜಿನ ಮೆರವಣಿಗೆ’ಯನ್ನು ಮುನ್ನಡೆಸಿ, ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವಂತೆ ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ. ಈ ಬೇಡಿಕೆಗೆ ಕರಾವಳಿಯ ಸಮಸ್ತ ಜನತೆಯ ಬೆಂಬಲವಿದ್ದು, ದಶಕಗಳ ಹೋರಾಟದ ಹಿನ್ನೆಲೆಯಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ಮಹತ್ವದ ಸಂದರ್ಭದಲ್ಲೇ, ಮಂಗಳೂರು ವಿಮಾನ ನಿಲ್ದಾಣವನ್ನು ‘ಕೋಟಿ-ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಂಪುಟದಲ್ಲಿ ಅನುಮೋದಿಸಬೇಕು. ಬಳಿಕ ಕೇಂದ್ರ ಸರ್ಕಾರಕ್ಕೆ ಅಂತಿಮ ಶಿಫಾರಸು ಕಳುಹಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವಿಸುವಂತೆ ಮಿಥುನ್ ರೈ ಅವರು ಸಚಿವ ಯು.ಟಿ. ಖಾದರ್ ಅವರನ್ನು ಕೋರಿದ್ದಾರೆ.








