ಮೈಸೂರು/ಕೋಝಿಕೋಡ್ : ಹೆಂಡತಿಯೊಂದಿಗೆ ನಡೆದ ಕೌಟುಂಬಿಕ ಕಲಹವೊಂದು ತಲೆಮರೆಸಿಕೊಂಡಿದ್ದ ದರೋಡೆಕೋರನ 36 ವರ್ಷಗಳ ಕರಾಳ ರಹಸ್ಯವನ್ನು ಬಯಲು ಮಾಡಿದೆ! 1990 ರಲ್ಲಿ ಕೇರಳದಲ್ಲಿ ನಡೆದಿದ್ದ ಗನ್ ಪಾಯಿಂಟ್ ನಲ್ಲಿ ಕೇರಳ ಸಾರಿಗೆ ಬಸ್ ನ ಕಂಡಕ್ಟರ್ ನಿಂದ 200 ರೂಪಾಯಿ ದರೋಡೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣಾ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ.
ಕೋಝಿಕೋಡ್ ಮೂಲದ ವಿ.ಕೆ. ಜೋಸ್ (71) ಬಂಧಿತ ವೃದ್ಧ ಆರೋಪಿ. ಕಳೆದ 36 ವರ್ಷಗಳಿಂದ ಈತ ಮೈಸೂರಿನಲ್ಲಿ ‘ಶಿವಕುಮಾರ್’ ಎಂಬ ನಕಲಿ ಹೆಸರಿನಲ್ಲಿ ವಾಸವಾಗಿದ್ದನು. ಮೈಸೂರಿನ ಜೋಸ್ ನಿವಾಸದಲ್ಲಿ ಪತಿ-ಪತ್ನಿ ನಡುವೆ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿತ್ತು. ಮಾತಿಗೆ ಮಾತು ಬೆಳೆದು ದೈಹಿಕ ಹಲ್ಲೆಗೆ ಕಾರಣವಾದಾಗ, ಪ್ರಾಣಭಯದಿಂದ ಜೋಸ್ ಪತ್ನಿ ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಕೋರಿದ್ದರು. ಸ್ಥಳಕ್ಕೆ ಧಾವಿಸಿದ ನರಸಿಂಹರಾಜ ಠಾಣೆಯ ಪೊಲೀಸರು ಮನೆಯನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಇಡೀ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಪೊಲೀಸರು ಮನೆಯನ್ನು ಶೋಧಿಸುವಾಗ ಜೋಸ್ ಮಲಗುತ್ತಿದ್ದ ಹಾಸಿಗೆಯ ಕೆಳಗೆ ಅಡಗಿಸಿಟ್ಟಿದ್ದ ಒಂದು ನಾಡಬಂದೂಕು (Country-made Gun) ಪತ್ತೆಯಾಗಿದೆ. ಜೊತೆಗೆ ಜೋಸ್ ಅವರ ಹಿಂದಿನ ಜೀವನಕ್ಕೆ ಸಂಬಂಧಿಸಿದಂತೆ ಕೇರಳದ ಕೋಝಿಕೋಡ್ ವಿಳಾಸವಿರುವ ಅಧಿಕೃತ ದಾಖಲೆಗಳೂ ಲಭ್ಯವಾಗಿವೆ. ಈ ಹಾಸಿಗೆಯ ಸುತ್ತಮುತ್ತ ಯಾರಿಗೂ ಗುಡಿಸಲು ಹಾಗೂ ಸ್ವಚ್ಛಗೊಳಿಸಲು ಜೋಸ್ ತೀವ್ರವಾಗಿ ನಿರಾಕರಿಸುತ್ತಿದ್ದನು ಎಂದು ತಿಳಿದು ಬಂದಿದೆ.. ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮೈಸೂರು ಪೊಲೀಸರು ತಕ್ಷಣವೇ ಕೇರಳದ ತಿರುವಾಂಬಾಡಿ ಪೊಲೀಸರನ್ನು ಸಂಪರ್ಕಿಸಿದಾಗ, ಜೋಸ್ನ ಅಸಲಿ ಮುಖವಾಡ ಕಳಚಿ ಬಿದ್ದಿದೆ!
1990 ರಲ್ಲಿ ಕೋಝಿಕ್ಕೋಡ್ನ ತಿರುವಾಂಬಾಡಿಯಿಂದ ಕೂಂಪಾರಕ್ಕೆ ಸಂಚರಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ನಲ್ಲಿ ಈತ ದರೋಡೆ ನಡೆಸಿದ್ದನು. ಅಂದು ದೊಡ್ಡ ಮೀಸೆ ಹೊಂದಿದ್ದ ಜೋಸ್, ರಾತ್ರಿ ವೇಳೆ ಬಸ್ ಕಂಡಕ್ಟರ್ಗೆ ಕತ್ತಲಿನಲ್ಲಿ ಇದೇ ನಾಡಬಂದೂಕನ್ನು ತೋರಿಸಿ ಹೆದರಿಸಿ, ಕೇವಲ 200 ರೂಪಾಯಿ ನಗದು ಹಾಗೂ ಟಿಕೆಟ್ ಪುಸ್ತಕಗಳನ್ನು ದೋಚಿ ಪರಾರಿಯಾಗಿದ್ದನು. ತನಿಖೆ ಆರಂಭವಾಗುತ್ತಿದ್ದಂತೆ ಕರ್ನಾಟಕಕ್ಕೆ ಓಡಿಬಂದ ಜೋಸ್, ಮೈಸೂರಿನಲ್ಲಿ Painter ಕೆಲಸ ಮಾಡಲು ಆರಂಭಿಸಿದನು. ನಂತರ ಇಲ್ಲಿನ ಸ್ಥಳೀಯ ಮಹಿಳೆಯೊಬ್ಬರನ್ನು ಮದುವೆಯಾಗಿ, ಕಳೆದ 36 ವರ್ಷಗಳಿಂದ ಯಾರಿಗೂ ಸಂಶಯ ಬಾರದಂತೆ ಜೀವಿಸುತ್ತಿದ್ದನು.
ಸದ್ಯ ಆರೋಪಿಯನ್ನು ಮೈಸೂರಿನಿಂದ ಕೇರಳದ ಕೋಝಿಕೋಡ್ ಸಬ್ ಜೈಲಿಗೆ ವರ್ಗಾಯಿಸಲಾಗಿದೆ. 36 ವರ್ಷಗಳ ಬಳಿಕ ದರೋಡೆಕೋರ ಸಿಕ್ಕಿಬಿದ್ದಿರುವುದರಿಂದ ಈ ಹಳೇ ಪ್ರಕರಣದ ಮರು ತನಿಖೆ ಆರಂಭಿಸುವುದಾಗಿ ತಿರುವಾಂಬಾಡಿ ಸಬ್-ಇನ್ಸ್ಪೆಕ್ಟರ್ ರಮ್ಯಾ ತಿಳಿಸಿದ್ದಾರೆ.








