ಮಂಗಳೂರು : ಗೆಳೆಯರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿಯೊಬ್ಬರ ಬ್ಯಾಂಕ್ ಖಾತೆ, ಚೆಕ್ ಬುಕ್ ಹಾಗೂ ಸಿಮ್ ಕಾರ್ಡ್ ಪಡೆದು ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ವಂಚನೆ ಎಸಗಿರುವ ಆಘಾತಕಾರಿ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ದೂರುದಾರ 23 ವರ್ಷದ ಯುವಕ 2022ರಲ್ಲಿ ಬಲ್ಮಠದ ಖಾಸಗಿ ಕಾಲೇಜಿನಲ್ಲಿ ಐಟಿಐ ಕಲಿಯುತ್ತಿದ್ದಾಗ ಮಂಥನ್ ಎಂಬಾತನ ಪರಿಚಯವಾಗಿತ್ತು. 2023ರ ಅಕ್ಟೋಬರ್ನಲ್ಲಿ ಮಂಥನ್, ತನ್ನ ಪರಿಚಯದ ಮೊಹಮ್ಮದ್ ಹಮ್ರಾಜ್ ಹಾಗೂ ಮೊಹಮ್ಮದ್ ನಿಜಾಮುದ್ದೀನ್ ಎಂಬುವವರನ್ನು ಕಾಲೇಜು ಬಳಿ ಕರೆತಂದು ದೂರುದಾರರಿಗೆ ಪರಿಚಯಿಸಿದ್ದ. ಈ ವೇಳೆ ಮೊಹಮ್ಮದ್ ಹಮ್ರಾಜ್, “ನನಗೆ ವಿದೇಶದಿಂದ ಹಣ ಬರಬೇಕಿದ್ದು, ವರ್ಗಾವಣೆಗೆ ಬ್ಯಾಂಕ್ ಖಾತೆಯ ಅಗತ್ಯವಿದೆ” ಎಂದು ನಂಬಿಸಿದ್ದ. ಇದನ್ನು ನಿಜವೆಂದು ನಂಬಿದ ವಿದ್ಯಾರ್ಥಿ, ಸೌತ್ ಇಂಡಿಯನ್ ಬ್ಯಾಂಕಿನಲ್ಲಿ ತನ್ನ ಕೆವೈಸಿ (KYC) ನೀಡಿ ಖಾತೆ ತೆರೆದಿದ್ದರು. ಬಳಿಕ ಬ್ಯಾಂಕ್ ಪಾಸ್ಬುಕ್, ಸಹಿ ಮಾಡಿದ ಚೆಕ್ಬುಕ್, ಎಟಿಎಂ ಕಾರ್ಡ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್ ಅನ್ನು ಹಮ್ರಾಜ್ಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಹಮ್ರಾಜ್ ದೂರುದಾರರಿಗೆ 2000 ನೀಡಿದ್ದ.
ಐಟಿಐ ಮುಗಿದ ಬಳಿಕ ದೂರುದಾರರು ಇವರ ಸಂಪರ್ಕದಲ್ಲಿರಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಖಾತೆಯ ಮೇಲೆ ಆನ್ಲೈನ್ ದೂರುಗಳು ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದು ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ಸತ್ಯ ಬಟಾಬಯಲಾಗಿದೆ. ಆರೋಪಿ ಮೊಹಮ್ಮದ್ ಹಮ್ರಾಜ್ ಹಾಗೂ ಆತನ ಸಹಚರರು ಈ ಖಾತೆಯನ್ನು ಆನ್ಲೈನ್ ಸೈಬರ್ ವಂಚನೆಯ ಹಣ ವರ್ಗಾವಣೆಗೆ ಬಳಸಿ, ಬಳಿಕ ಚೆಕ್ ಮೂಲಕ ಹಣ ಡ್ರಾ ಮಾಡಿಕೊಂಡಿದ್ದರು. ಈ ಸಂಬಂಧ ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಸೈಬರ್ ದೂರುಗಳು ದಾಖಲಾಗಿ ಖಾತೆ ಫ್ರೀಜ್ (Freeze) ಆಗಿರುವುದು ಕಂಡುಬಂದಿದೆ.
ತನ್ನ ಖಾತೆಯನ್ನು ಅಕ್ರಮ ಸೈಬರ್ ವಂಚನೆಗೆ ಬಳಸಿಕೊಂಡ ಸುರತ್ಕಲ್ ಕೃಷ್ಣಾಪುರದ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಮ್ರಾಜ್ ಹಾಗೂ ಆತನ ಜೊತೆಗಿರುವ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವಕ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.








