ಮಂಗಳೂರು:ಅಸ್ತ್ರ ಹೆಸರಲ್ಲಿ ಕಳೆದ 3-4 ವರ್ಷಗಳಲ್ಲಿ ಮೂರು ಸೀಸನ್ ಲಕ್ಕಿ ಸ್ಕೀಮ್ ಮಾಡಿದ್ದು ಇದರಲ್ಲಿ ಅಂದಾಜು 50 ಸಾವಿರದಷ್ಟು ಜನರು ತಿಂಗಳ ಕಂತು ಹಣ ಕಟ್ಟಿದ್ದಾರೆ. ಪ್ರತಿ ಸ್ಕೀಮ್ ಮುಕ್ತಾಯದಲ್ಲಿ ಅದೃಷ್ಟ ಸಿಗದ ಎಲ್ಲರಿಗೆ ಹಣ ಹಿಂತಿರುಗಿಸಬೇಕಿದ್ದರೂ, ಏಜಂಟರು ಅವರೆಲ್ಲರನ್ನೂ ಮುಂದಿನ ಸ್ಕೀಮಿಗೆ ಸೇರಿಸಿ ಹಣ ಕಟ್ಟುವಂತೆ ಮಾಡುತ್ತಿದ್ದರು. ಇದೀಗ ಮೂರು ಸೀಸನಲ್ಲಿ ಹಣ ಕಟ್ಟಿದರೂ, ಒಂದು ಬಾರಿಯೂ ಹಣ ಸಿಗದವರು ಇನ್ನು ಕೈಗೆ ಚೊಂಬೇ ಗತಿ ಎನ್ನುತ್ತಾ ಬಂಗಾರದ ಬಣ್ಣದ ಬಳೆ ಹಾಕ್ಕೊಂಡು ಪೋಸು ನೀಡುತ್ತಿದ್ದ ಲಂಚು ಹುಡುಕಾಟಕ್ಕೆ ಬಿದ್ದಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ಮೂರನೇ ಸೀಸನ್ ಹೆಸರಲ್ಲಿ ಅಸ್ತ್ರ ಲಕ್ಕಿ ಸ್ಕೀಮ್ ಯೋಜನೆಯನ್ನು ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಲಾಂಚ್ ಮಾಡಿದ್ದು ಅಲ್ಲಿಯೂ ಸಾಕಷ್ಟು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಲಾಗಿತ್ತು. ಆದರೆ, ಕಳೆದ ಎಪ್ರಿಲ್ ನಂತರ ಲಂಚುಲಾಲ್ ತನ್ನ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ, ಸ್ವಲ್ಪ ಟೈಮ್ ಬೇಕಾಗುತ್ತೆ ಎಂದು ಹಣ ಕೇಳಲು ಬಂದ ಮಂಗಳೂರಿನ ಕೆಲವು ಏಜಂಟರನ್ನು ನಂಬಿಸುತ್ತ ಬಂದಿದ್ದ. ಆದರೆ ಬ್ಯಾಂಕ್ ಫ್ರೀಜ್ ಸುಮ್ಮನೆ ಆಗಲ್ಲ ಅನ್ನೋ ಸಾಮಾನ್ಯ ಜ್ಞಾನವಾದ್ರೂ ಇವರಿಗೆ ಇರಬೇಕಾಗಿತ್ತು. ಐಟಿ, ಇಡಿಯವರು ಎಂಟ್ರಿಯಾಗಿದ್ದು ಅಥವಾ ಖಾತೆ ಮೇಲೆ ಎಫ್ಐಆರ್ ಆಗಿದ್ದರೆ ಮಾತ್ರ ಬ್ಯಾಂಕ್ ಖಾತೆ ಫ್ರೀಜ್ ಆಗುತ್ತದೆ. ಈತ ಮಾತ್ರ ತನ್ನ ಖಾತೆಯಲ್ಲಿ ಹಣ ಇದೆ, ಬ್ಯಾಂಕಿನವರು ಫ್ರೀಜ್ ಮಾಡಿದ್ದರಿಂದ ತೆಗಿಯೋಕೆ ಆಗ್ತಾ ಇಲ್ಲವೆಂದು ನಂಬಿಸುತ್ತಿದ್ದ. ಹಣ ಕೇಳಿ ಜೋರು ಮಾಡಿದವರಿಗೆ ಮಾತ್ರ ಒಂದಷ್ಟು ಕೊಟ್ಟು ಕಳಿಸುತ್ತಿದ್ದ ಎನ್ನುವ ಮಾಹಿತಿ ಇದೆ.
ಮಂಗಳೂರಿನ ನವಭಾರತ್ ಸರ್ಕಲ್ ಬಳಿಯಿರುವ ಅಸ್ತ್ರ ಗ್ರೂಪ್ ಕಚೇರಿಗೆ ಇಂದು (ಜುಲೈ24) ಬೆಳಗ್ಗಿನಿಂದಲೇ ನೂರಾರು ಜನರು ಬಂದಿದ್ದು ಗಲಾಟೆ ಆರಂಭಿಸಿದ್ದಾರೆ. ಲಂಚು ಎಲ್ಲಿಯಪ್ಪಾ, ಪ್ರತಿ ಬಾರಿ ದಿನಾಂಕ ಕೇಳಿ ಸಾಕಾಗಿದೆ, ಕೂಡಲೇ ಎದುರು ಬರೋಕ್ಕೆ ಹೇಳಿ ಎಂದು ಅಲ್ಲಿರುವ ಏಜಂಟರನ್ನು ದಬಾಯಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಮೂರು ದಿನಗಳಿಂದ ಲಂಚು ಯಾರಿಗೂ ಕಾಣ ಸಿಕ್ಕಿಲ್ವಂತೆ. ಕೆಲವರು ಹೇಳುವ ಪ್ರಕಾರ, ಆತ ದುಬೈಗೆ ಹಾರಿದ್ದಾನೆ ಎಂದೂ ಹೇಳಲಾಗುತ್ತಿದೆ. ಕೆಲವರು ಫಳ್ನೀರಿನಲ್ಲಿ ಜುವೆಲ್ಲರಿ ಮಾಡಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ತೋರಿಸಿದ್ದ ನೆನಪಲ್ಲಿ ಅಲ್ಲಿಗೂ ಹೋಗಿದ್ದಾರೆ. ಅಲ್ಲಿ ನೋಡಿದರೆ, ಒಳಗಿದ್ದುದನ್ನು ಖಾಲಿ ಮಾಡಿಕೊಂಡು ಹೋಗಿದ್ದಾನಂತೆ.
ಹತ್ತು ಕೊಟ್ಟರೆ 15 ಲಕ್ಷ ಆಫರ್ !
ಇದಲ್ಲದೆ, ದೊಡ್ಡ ಮೊತ್ತದ ಹಣ ಸಂಗ್ರಹಿಸುವ ಕುರಿ ಫಂಡ್ ರೀತಿಯಲ್ಲೂ ಈತನ ವ್ಯವಹಾರಗಳಿದ್ದವು. ಹತ್ತು ಲಕ್ಷ ಕೊಟ್ಟರೆ, ತಿಂಗಳಿಗೆ ಒಂದು ಲಕ್ಷದಂತೆ 15 ತಿಂಗಳಿಗೆ 15 ಲಕ್ಷ ಹಿಂತಿರುಗಿಸುವ ಸ್ಕೀಮ್ ಇತ್ತು. ಈ ಸ್ಕೀಮಿನಲ್ಲೂ ಮಂಗಳೂರು ಆಸುಪಾಸಿನ ನೂರಾರು ಜನ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದಾರೆ. ಇದೇ ಹಣದಲ್ಲಿ ಲಂಚು ಉಳಿದೆಲ್ಲ ಬಿಸ್ನೆಸ್ ಗಳಿಗೆ ಟರ್ನ್ ಓವರ್ ಮಾಡುತ್ತಿದ್ದ. ತುಳು ಸಿನಿಮಾಕ್ಕೂ ಹಣವನ್ನು ಸುರಿದು ಶೋಕಿ ಜೀವನ ಶುರುಮಾಡಿದ್ದ. ಫ್ಲಾಟ್ ಮಾಡಿಸಿಕೊಡುತ್ತೇನೆಂದು ಹೇಳಿ ಕೇರಳದ ಗಡಿಯ ತಲಪಾಡಿ ಒಳಭಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟಿಸುತ್ತಿರುವುದಾಗಿ ಹೇಳಿ ನಂಬಿಸಿದ್ದ. ಆದರೆ ಈಚೆಗೆ ತಿಂಗಳಿಗೆ ಒಂದು ಸಾವಿರದಂತೆ ಹಣ ಕಟ್ಟುವವರ ಸಂಖ್ಯೆ ಮಿತಿಮೀರಿದ ಬಳಿಕ ವಹಿವಾಟು ನಡೆಸುವುದಕ್ಕೇ ತೊಂದರೆಯಾಗಿತ್ತು. ಸಂಪೂರ್ಣ ಅಕ್ರಮವಾಗಿ ನಡೆಯುತ್ತಿದ್ದ ಈತನ ಖಾತೆಯನ್ನು ಐಟಿ, ಇಡಿಯವರು ಇದಕ್ಕೂ ಮೊದಲೇ ಫ್ರೀಜ್ ಮಾಡಿಸಬೇಕಿತ್ತು. ಈಗ್ಲಾದ್ರೂ ತನಿಖೆಗೆ ಇಳಿದಿದ್ದಾರೋ ಗೊತ್ತಿಲ್ಲ.
ಒಂದು ವರ್ಷದ ಹಿಂದೆ ಮಂಗಳೂರಿಗೆ ಸುಧೀರ್ ರೆಡ್ಡಿ ಕಮಿಷನರ್ ಆಗಿ ಬಂದಾಗಲೇ ಲಕ್ಕಿ ಸ್ಕೀಮ್ ವಂಚನೆ ಜೋರಾಗಿತ್ತು. ಆಗಲೇ ಎಚ್ಚತ್ತಿದ್ದ ಕಮಿಷನರ್, ಲಕ್ಕಿ ಸ್ಕೀಮ್ ಮಾಡೋರು ಇಂತಿಷ್ಟು ಹಣವನ್ನು ಪೊಲೀಸ್ ಠಾಣೆಯಲ್ಲಿ ಬಾಂಡ್ ಆಗಿ ನೀಡುವಂತೆ ಮಾಡಿದ್ದರು. ಲಂಚುಲಾಲ್ ಕಮಿಷನರ್ ಬಳಿ 5 ಕೋಟಿ ಬಾಂಡ್ ನೀಡಿದ್ದಾಗಿಯೂ ಮಾಹಿತಿಗಳಿದ್ದವು. ಆದರೆ 30-40 ಸಾವಿರ ಜನರಿಗೆ ಹಣ ಆಗಬೇಕಿದ್ದರೆ, ಈ ಐದು ಕೋಟಿ ಯಾವ ಲೆಕ್ಕಕ್ಕೆ ಬರುತ್ತೆ ಹೇಳಿ. ಇಷ್ಟಕ್ಕೂ ಪೊಲೀಸ್ ದೂರು ದಾಖಲಾಗದೆ ನಾವ್ಯಾಕೆ ಅಡ್ಡಿ ಬರಬೇಕು ಅನ್ನುವ ವನ್ ಲೈನ್ ಅಜೆಂಡಾ ಇಟ್ಕೊಂಡು ಪೊಲೀಸರು ಲಂಚೂನ ವಂಚನೆ ಪುರಾಣವನ್ನು ನೋಡುತ್ತ ಕೂತಿದ್ದೇ ಈಗ ದೊಡ್ಡ ಮಟ್ಚದ ವಂಚನೆ ಆಗೋದಕ್ಕೆ ಕಾರಣವಾಗಿದೆ ಅನ್ನೋದು ಸತ್ಯ.








