ಅಲಪ್ಪುಳ : ಕೇರಳದ ಅತ್ಯಂತ ಕುಖ್ಯಾತ ಮತ್ತು ದೀರ್ಘಕಾಲದಿಂದ ತಲೆಮರೆಸಿಕೊಂಡಿರುವ ಅಪರಾಧಿ ಸುಕುಮಾರ ಕುರುಪ್ ಕಥೆಗೆ 42 ವರ್ಷಗಳ ನಂತರ ಮತ್ತೊಮ್ಮೆ ಹೊಸ ತಿರುವು ಸಿಕ್ಕಿದೆ. ತನಿಖಾ ತಂಡದಲ್ಲಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಲಿ ಅಕ್ಬರ್ ನೀಡಿರುವ ಹೊಸ ಹೇಳಿಕೆಯು ಈ ನಿಗೂಢತೆಯನ್ನು ಮತ್ತೆ ಸಜೀವಗೊಳಿಸಿದೆ.
ನಿವೃತ್ತ ಅಧಿಕಾರಿ ಅಲಿ ಅಕ್ಬರ್ ಅವರ ಪ್ರಕಾರ, ಸುಕುಮಾರ ಕುರುಪ್ ಇನ್ನೂ ಜೀವಂತವಾಗಿದ್ದು, ಬ್ರೂನಿಯಲ್ಲಿ ಇಂಡೋ-ಮಲೇಷಿಯನ್ ಮೂಲದ ವ್ಯಕ್ತಿಯಾಗಿ ನಕಲಿ ಗುರುತಿಸಿಕೊಳ್ಳುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಕುರುಪ್ ನ ಛಾಯಾಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಅಕ್ಬರ್, ಆತ ತನ್ನ ಪತ್ನಿ, ವಿದೇಶದಲ್ಲಿರುವ ಸಂಬಂಧಿಕರು ಹಾಗೂ ಪ್ರಭಾವಿ ರಾಜಕೀಯ ಮತ್ತು ಸಮುದಾಯದ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಹೊಸ ವಿವರಣೆಯ ಕುರಿತು ಪ್ರತಿಕ್ರಿಯಿಸಿದ ಅಪರಾಧ ವಿಭಾಗದ ಮುಖ್ಯಸ್ಥ ಎಡಿಜಿಪಿ ಎಚ್. ವೆಂಕಿತೇಶ್, “ಬಹಿರಂಗವಾಗಿರುವ ಛಾಯಾಚಿತ್ರ, ಪಾಸ್ಪೋರ್ಟ್ ಹಾಗೂ ಮೊಬೈಲ್ ಸಂಖ್ಯೆಗಳ ಕುರಿತು ಮಾಹಿತಿ ಪಡೆಯಲು ಇಂಟರ್ಪೋಲ್ ಅನ್ನು ಸಂಪರ್ಕಿಸಲಾಗುವುದು. ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದಂತೆ ತನಿಖೆ ನಡೆಸಲಾಗುವುದು,” ಎಂದಿದ್ದಾರೆ.
ಆದರೆ, ಅಪರಾಧ ವಿಭಾಗದ ಎಸ್ಪಿ ಜಿಲ್ಸನ್ ಮ್ಯಾಥ್ಯೂ ಮಾತನಾಡಿ, “ಅಕ್ಬರ್ ಅವರ ಬಳಿ ಇಂತಹ ಸಾಕ್ಷ್ಯಾಧಾರಗಳಿದ್ದರೆ ಅವರು ಮಾಧ್ಯಮಗಳಿಗಿಂತ ಮುಂಚಿತವಾಗಿ ತನಿಖಾ ಸಂಸ್ಥೆಗೆ ನೀಡಬೇಕಿತ್ತು,” ಎಂದು ಪ್ರಶ್ನಿಸಿದ್ದಾರೆ.
ಪ್ರಕರಣದ ಹಳೆಯ ಫೈಲ್ಗಳನ್ನು ತೆರವುಗೊಳಿಸುವ ವಿಶೇಷ ಅಭಿಯಾನದ ಭಾಗವಾಗಿ ಅಪರಾಧ ವಿಭಾಗವು 3 ತಿಂಗಳ ಹಿಂದೆ ಈ ಪ್ರಕರಣವನ್ನು ಮರುಪರಿಶೀಲಿಸಿತ್ತು. 1989ರಲ್ಲಿ ಜಾರ್ಖಂಡ್ನ ಬೊಕಾರೊ ಆಸ್ಪತ್ರೆಯ ಐಸಿಯುನಲ್ಲಿ ತೀವ್ರ ಎದೆನೋವಿನಿಂದ ದಾಖಲಾಗಿದ್ದ ಕುರುಪ್ ಅವರನ್ನು ನೋಡಿರುವುದಾಗಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ರತ್ನಮ್ಮ ಎಂಬುವವರು ಹೇಳಿಕೆ ನೀಡಿದ್ದರು. ಈ ಆಧಾರದ ಮೇಲೆ ಮತ್ತು ಕುರುಪ್ ಅವರಿಗೆ ಇದ್ದ ಹೃದಯ ಕಾಯಿಲೆಯನ್ನು ಗಮನಿಸಿದ ತನಿಖಾಧಿಕಾರಿಗಳು, ಆತ 1989ರ ಸುಮಾರಿಗೇ ಸತ್ತಿರಬಹುದು ಎಂದು ತೀರ್ಮಾನಿಸಿದ್ದರು. ಪ್ರಸ್ತುತ ಆತನಿಗೆ 83 ವರ್ಷ ವಯಸ್ಸಾಗಿರುತ್ತಿತ್ತು.
ಏನಿದು ಭೀಕರ ಚಾಕೊ ಕೊಲೆ ಪ್ರಕರಣ?
8 ಲಕ್ಷ ರೂಪಾಯಿ ಮೊತ್ತದ ವಿಮಾ ಹಣವನ್ನು ಅಕ್ರಮವಾಗಿ ಪಡೆಯಲು ಸುಕುಮಾರ ಕುರುಪ್ ಮತ್ತು ಆತನ ಸಹಚರರು ಸಂಚು ರೂಪಿಸಿದ್ದರು. ಜನವರಿ 22, 1984 ರಂದು ಅಲಪ್ಪುಳ ಮೂಲದ ಚಲನಚಿತ್ರ ಪ್ರತಿನಿಧಿ ಚಾಕೊ ಎಂಬುವವರನ್ನು ಕೊಲೆ ಮಾಡಿ, ಅವರ ದೇಹವನ್ನು ಕಾರಿನಲ್ಲಿಟ್ಟು ಬೆಂಕಿ ಹಚ್ಚಿ, ಅದು ಕುರುಪ್ ಅವರದ್ದೇ ಮೃತದೇಹ ಎಂದು ಬಿಂಬಿಸಲು ಯತ್ನಿಸಲಾಗಿತ್ತು.
ಅಂದಿನಿಂದ ಕಣ್ಮರೆಯಾದ ಕುರುಪ್ನನ್ನು ಹುಡುಕಲು ಗಲ್ಫ್ ರಾಷ್ಟ್ರಗಳು, ನೇಪಾಳ ಮತ್ತು ಭೂತಾನ್ಗಳಲ್ಲೂ ಶೋಧ ನಡೆಸಲಾಯಿತಾದರೂ ಯಾವುದೇ ಸುಳಿವು ಸಿಗಲಿಲ್ಲ.
ಇನ್ನು ಮಲೆಯಾಳಂನ ನಲ್ಲಿ ಸುಕುಮಾರ ಕುರುಪ್ ಹೆಸರಿನಲ್ಲಿ ಹಲವು ಸಿನೆಮಾಗಳು ತಯಾರಾಗಿದ್ದವು.








