ಬೆಂಗಳೂರು: ಬಡ್ಡಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ನಗ್ನಗೊಳಿಸಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಮಹಿಳೆಯನ್ನು ನಗ್ನಗೊಳಿಸಿ ವಿಡಿಯೋ ಮಾಡಿಕೊಂಡು, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಈ ಘಟನೆ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರೇಷ್ಮಾ ಬಾನು, ನಝತ್ ಮತ್ತು ಸುಹೇಲ್ ಎಂದು ಗುರುತಿಸಲಾಗಿದೆ.
ಇನ್ನು, ಸಂತ್ರಸ್ತ ಮಹಿಳೆ ಮತ್ತು ಆರೋಪಿ ರೇಷ್ಮಾ ಬಾನು ನಡುವೆ ಈ ಹಿಂದೆ ಪರಿಚಯವಿತ್ತು ಎನ್ನಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ರೇಷ್ಮಾ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ರೇಷ್ಮಾ ಮೂಲಕವೇ ಸಂತ್ರಸ್ತ ಮಹಿಳೆಗೆ ನಝತ್ ಎಂಬಾಕೆಯ ಪರಿಚಯವಾಗಿತ್ತು. ಬಳಿಕ ನಝತ್ ಬಳಿಯೂ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ.
ನಝತ್ಗೆ ಪ್ರತಿ ತಿಂಗಳು ಕಂತಿನ ರೂಪದಲ್ಲಿ 5 ಸಾವಿರ ರೂಪಾಯಿ ಪಾವತಿಸುತ್ತಿದ್ದ ಮಹಿಳೆ, ರೇಷ್ಮಾಗೆ ಬಡ್ಡಿ ಹಣ ನೀಡುತ್ತಿದ್ದರು. ಆದರೆ, ಹಣಕಾಸಿನ ಸಮಸ್ಯೆಯಿಂದ ಕಳೆದ ಆರು ತಿಂಗಳಿಂದ ಬಡ್ಡಿ ಹಣ ಹಾಗೂ ಎರಡು ತಿಂಗಳಿಂದ ಕಂತಿನ ಹಣ ಪಾವತಿಸಿರಲಿಲ್ಲ, ಇದರಿಂದ ರೇಷ್ಮಾ ಪದೇಪದೇ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ, ಸಂತ್ರಸ್ತ ಮಹಿಳೆ ಆಕೆಯ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಬಳಿಕ ಮನೆ ಖಾಲಿ ಮಾಡಿಕೊಂಡು ತಾಯಿ ಮನೆಗೆ ತೆರಳಿದ್ದರು.
ಈ ನಡುವೆ, ಹಣ ಬರುತ್ತದೆ, ಕೆಲಸವೊಂದಿದೆ ಎಂದು ಹೇಳಿ ನಝತ್ ಸಂತ್ರಸ್ತ ಮಹಿಳೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಮಹಿಳೆ ನಝತ್ ಮನೆಗೆ ತೆರಳಿದ ಬಳಿಕ ಅಲ್ಲಿಗೆ ರೇಷ್ಮಾ ಬಾನು ಮತ್ತು ಆಕೆಯ ಪತಿ ಸುಹೇಲ್ ಬಂದಿದ್ದಾರೆ. ಈ ವೇಳೆ ಮೂವರು ಸೇರಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಚಾಕುವಿನಿಂದ ಹಲ್ಲೆ ನಡೆಸಿ, ಬಳಿಕ ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದು ಕಿಡ್ನಾಪ್ ಮಾಡಿದ್ದಾರೆ. ನಂತರ ಕುಂಬಳಗೋಡು ಸಮೀಪದ ಮನೆಯೊಂದರಲ್ಲಿ ಮಹಿಳೆಯನ್ನು ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಇದೆ.
ಇದೇ ವೇಳೆ ಮಹಿಳೆಯನ್ನು ನಗ್ನಗೊಳಿಸಿ ವಿಡಿಯೋ ಮಾಡಿಕೊಂಡು, ಹಣ ನೀಡದಿದ್ದರೆ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇತ್ತ, ಮಗಳು ಕಾಣೆಯಾಗಿದ್ದಾಳೆ ಎಂದು ಸಂತ್ರಸ್ತ ಮಹಿಳೆಯ ತಾಯಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಚಂದ್ರಾ ಲೇಔಟ್ ಪೊಲೀಸರು, ಸಂತ್ರಸ್ತ ಮಹಿಳೆಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ.
ಬಳಿಕ ಸಂತ್ರಸ್ತ ಮಹಿಳೆಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೇಷ್ಮಾ ಬಾನು, ನಝತ್ ಮತ್ತು ಸುಹೇಲ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಚಂದ್ರಾ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.








