ಹಾಸನ : ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. ಜಗಳ ಬಿಡಿಸಲು ಹೋದ ಜೈಲು ಸಿಬ್ಬಂದಿಯ ಮೇಲೆಯೂ ಕೈದಿಗಳು ಏಕಾಏಕಿ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋನ್ ಕರೆ ವಿಚಾರಕ್ಕೆ ಶುರುವಾಯ್ತು ಜಗಳ
ಜೈಲಿನೊಳಗೆ ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ ಹಾಗೂ ರಂಗಸ್ವಾಮಿ ನಡುವೆ ಮೊದಲು ಫೋನ್ ಮಾಡುವ ವಿಚಾರವಾಗಿ ಮಾತಿನ ಚಕಮಕಿ ಶುರುವಾಗಿದೆ. ಜಗಳ ತಾರಕಕ್ಕೇರಿ ಇಬ್ಬರೂ ಪರಸ್ಪರ ಬಡಿದಾಡಿಕೊಳ್ಳಲು ಆರಂಭಿಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಜೈಲು ಮುಖ್ಯ ವೀಕ್ಷಕರಾದ ಪರಶುರಾಮ ಹಾಗೂ ವೀರೇಶ್ ಸಂಗಮದ್ ಮುಂದಾಗಿದ್ದಾರೆ.
ಕೊಠಡಿಯೊಳಗೆ ನುಗ್ಗಿ ಹಲ್ಲೆ: ಜೈಲು ಸಿಬ್ಬಂದಿಗೆ ಗಾಯ
ಇದೇ ಸಂದರ್ಭದಲ್ಲಿ ಏಕಾಏಕಿ ಪಿ.ಸಿ.ಎಸ್. (PCS) ಕೊಠಡಿಯೊಳಗೆ ನುಗ್ಗಿದ ಶಶಿಧರ, ರಾಕೇಶ, ಯಲ್ಲಾಲಿಂಗ, ಆಕಾಶ, ಉಮೇಶ, ಸಾಯಿನಾಥ, ನಿರೂಪ್, ಭರತ ಹಾಗೂ ಚೇತನ್ ಎಂಬ ಒಂಭತ್ತು ಮಂದಿ ವಿಚಾರಣಾಧೀನ ಕೈದಿಗಳು ಸೇರಿಕೊಂಡು ರಂಗಸ್ವಾಮಿ ಎಂಬ ಕೈದಿಯ ಮೇಲೆ ದಾಳಿ ನಡೆಸಿದ್ದಾರೆ.
ರಂಗಸ್ವಾಮಿ ರಕ್ಷಣೆಗೆ ಧಾವಿಸಿದ ಜೈಲು ಸಿಬ್ಬಂದಿಗಳಾದ ವೀರೇಶ್ ಸಂಗಮದ್, ಶಿವಕುಮಾರ ಮತ್ತು ಪರಶುರಾಮ.ಹೆಚ್ ಅವರ ಮೇಲೆಯೂ ಈ 9 ಮಂದಿ ಕೈದಿಗಳು ಹಲ್ಲೆ ಮಾಡಿದ್ದಾರೆ. ಜೈಲು ವೀಕ್ಷಕ ವೀರೇಶ್ ಸಂಗಮದ್ ಅವರನ್ನು ನೆಲಕ್ಕೆ ತಳ್ಳಿ ತೀವ್ರವಾಗಿ ಹಲ್ಲೆ ನಡೆಸಲಾಗಿದ್ದು, ಗಾಯಗೊಂಡ ಅವರಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ರೌಡಿಶೀಟರ್ ಕೊಲೆ ಪ್ರಕರಣದ ಆರೋಪಿಗಳ ಕೃತ್ಯ
ಹಲ್ಲೆ ನಡೆಸಿದ ಮೋಹನಕುಮಾರ, ಶಶಿಧರ, ರಾಕೇಶ, ಯಲ್ಲಾಲಿಂಗ, ಆಕಾಶ, ಉಮೇಶ, ಸಾಯಿನಾಥ, ನಿರೂಪ್, ಭರತ ಹಾಗೂ ಚೇತನ್ ನಟೋರಿಯಸ್ ರೌಡಿಶೀಟರ್ ಮಂಜೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಜೈಲಿನೊಳಗೆ ಕಾನೂನು ಕೈಗೆತ್ತಿಕೊಂಡ ಆರೋಪಿಗಳ ವಿರುದ್ಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.








