ಬೆಂಗಳೂರು/ಬೆಳ್ತಂಗಡಿ : ವಕೀಲರಾಗಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬರು ಮದುವೆಯಾಗುವ ಭರವಸೆ ನೀಡಿ ಬಳಿಕ ದೈಹಿಕವಾಗಿ ಕಿರುಕುಳ ನೀಡಿದ್ದು, ಕೊನೆಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ 36 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬೆಳ್ತಂಗಡಿ ಮೂಲದ ಯುವ ವಕೀಲ ಜಿತಿನ್ ಜಿಜೊ (26) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲೊಡ್ಡಿ ನಿವಾಸಿ ಜಿಜೊ ಪೌಲ್ ಅವರ ಪುತ್ರನಾದ ಜಿತಿನ್, ಬೆಳ್ತಂಗಡಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾನೂನು ಪ್ರಕರಣದ ಮೂಲಕ ಆರಂಭವಾದ ಪರಿಚಯ
2021ರಲ್ಲಿ ವಿವಾಹವಾಗಿದ್ದ ಬೆಂಗಳೂರಿನ ಮಹಿಳೆ, ಪತಿಯೊಂದಿಗಿನ ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಗೃಹಹಿಂಸೆ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣದ ವಿಚಾರವಾಗಿ 2025ರ ಫೆಬ್ರವರಿಯಲ್ಲಿ ಯಲಹಂಕೆಯಲ್ಲಿ ವಾಸಿಸುತ್ತಿದ್ದ ಜಿತಿನ್ ಅವರ ಪರಿಚಯವಾಗಿತ್ತು. ಬಳಿಕ ಮಹಿಳೆ ತಮ್ಮ ಪ್ರಕರಣವನ್ನು ಅವರ ಮೂಲಕವೇ ನಡೆಸಲು ಮುಂದಾಗಿದ್ದರು.
ಪರಿಚಯ ಮುಂದುವರಿದಂತೆ ಜಿತಿನ್ ಪ್ರೀತಿಯ ವಿಚಾರ ತಿಳಿಸಿ, ಪತಿಯಿಂದ ವಿಚ್ಛೇದನ ದೊರಕಿದ ಬಳಿಕ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಮಹಿಳೆ ವಾಸಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಬಾಡಿಗೆ ಮನೆ ಮಾಡಿಕೊಂಡಿದ್ದ ಎನ್ನಲಾಗಿದೆ.
ತನ್ನ ಇಚ್ಛೆಗೆ ವಿರುದ್ಧವಾಗಿಯೂ ಆರೋಪಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ವಿಚ್ಛೇದನದ ನಂತರ ಸಂಬಂಧದಲ್ಲಿ ಬಿರುಕು
2026ರಲ್ಲಿ ಮಹಿಳೆಗೆ ಪತಿಯಿಂದ ವಿಚ್ಛೇದನ ದೊರೆತ ಬಳಿಕ ಜಿತಿನ್ ಅವರ ವರ್ತನೆಯಲ್ಲಿ ಬದಲಾವಣೆಯಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿಂದಿಸುತ್ತಿದ್ದನೆಂದು ಆರೋಪಿಸಲಾಗಿದೆ.
ಸೆಪ್ಟೆಂಬರ್ 2ರಂದು ಮತ್ತೆ ಮಹಿಳೆಯ ಮನೆಗೆ ತೆರಳಿದ್ದ ಜಿತಿನ್,ಸೆಪ್ಟೆಂಬರ್ 2 ರಂದು ಮಹಿಳೆಯ ಮನೆಗೆ ಬಂದ ಆರೋಪಿ ಆಕೆಯ ಮೊಬೈಲ್ ಪರಿಶೀಲಿಸಿ Signal Appನಲ್ಲಿದ್ದ ಸಂಭಾಷಣೆಗಳನ್ನು ಅಳಿಸಿದ್ದಾನೆ ಎನ್ನಲಾಗಿದೆ. ಮದುವೆಯಾಗುವುದಾಗಿ ನೀಡಿದ್ದ ಭರವಸೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನೂ ನಾಶಪಡಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಶ್ನಿಸಿದ್ದಕ್ಕೆ ಹಲ್ಲೆ
ಮೊಬೈಲ್ನಲ್ಲಿನ ಸಂಭಾಷಣೆಗಳನ್ನು ಏಕೆ ಅಳಿಸಲಾಗಿದೆ ಎಂದು ಮಹಿಳೆ ಪ್ರಶ್ನಿಸಿದಾಗ ಜಿತಿನ್ ಕೋಪಗೊಂಡಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆಗೆ ಬೆದರಿಕೆ ಹಾಕಿ, ಬಟ್ಟೆ ಹರಿದು ಮುಖ, ಎದೆ ಮತ್ತು ಬೆನ್ನಿಗೆ ಪದೇಪದೇ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ ದೇಹಕ್ಕೆ ಕಚ್ಚಿ ಹಲ್ಲೆ ನಡೆಸಿದ್ದು, ಕೋಣೆಯಲ್ಲಿದ್ದ ಸ್ಟ್ಯಾಂಡ್ ಫ್ಯಾನ್ನಿಂದಲೂ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ವೇಲ್ ಬಳಸಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸುವ ಮೂಲಕ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವೂ ಮಾಡಲಾಗಿದೆ.
ತಪ್ಪಿಸಿಕೊಂಡು ಆಸ್ಪತ್ರೆಗೆ ತೆರಳಿದ ಮಹಿಳೆ
ಆರೋಪಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಹಿಳೆ ಮನೆಯಿಂದ ಹೊರಬಂದು ಸಮೀಪದಲ್ಲಿರುವ ಎನ್.ಆರ್.ಆರ್. ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಹಲ್ಲೆಯಿಂದ ಉಂಟಾದ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಕುರಿತು ಸೆಪ್ಟೆಂಬರ್ 3ರಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಬಾಗಲಗುಂಟೆ ಠಾಣೆಯಲ್ಲಿ BNS-2023ರ ಸೆಕ್ಷನ್ 69, 126(2), 115(2), 118(1), 74, 351(2), 352 ಮತ್ತು 238 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಜಿತಿನ್ ಜಿಜೊ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.








