ಕಣ್ಣೂರು: ಮಂಗಳೂರು ಮೂಲದ ಯುವಕನ ಕೊಲೆ ಕೇಸ್ನಲ್ಲಿ ಸೌದಿ ಅರೇಬಿಯಾದ ಜೈಲು ಸೇರಿ, ಬಳಿಕ ಬರೋಬ್ಬರಿ 80 ಲಕ್ಷ ರೂಪಾಯಿ ‘ಬ್ಲಡ್ ಮನಿ’ ಪಾವತಿಸಿ ಭಾರತಕ್ಕೆ ಮರಳಿದ್ದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ, ಇದೀಗ ಬೆಂಗಳೂರಿನಿಂದ ಕೇರಳಕ್ಕೆ ಸಿಂಥೆಟಿಕ್ ಮಾದಕವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಂತರರಾಜ್ಯ ಮೆಥಾಂಫೆಟಮೈನ್ ಕಳ್ಳಸಾಗಣೆ ಜಾಲದ ಮಾಸ್ಟರ್ ಮೈಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳದ ಕರಿಕೊಟ್ಟಕ್ಕರಿ ನಿವಾಸಿ ಫಜಲುದ್ದೀನ್ ಟಿ (45) ಜುಲೈ 14 ರಂದು ಇರಿಟ್ಟಿ ಪೊಲೀಸರಿಂದ ಬಂಧನಕ್ಕೊಳಗಾದ ಕುಖ್ಯಾತ ಡ್ರಗ್ ಕಿಂಗ್ಪಿನ್ ಆಗಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಫಜಲುದ್ದೀನ್ 2006 ರಲ್ಲಿ ಸೌದಿ ಅರೇಬಿಯಾದಲ್ಲಿ ಟ್ಯಾಕ್ಸಿ ಚಾಲಕನಾಗಿದ್ದಾಗ ಮಂಗಳೂರು ಮೂಲದ ಅಶ್ರಫ್ (23) ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಸೌದಿ ಜೈಲು ಸೇರಿದ್ದನು. ಅಲ್ಲಿ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಬಳಿಕ, ಸ್ವಯಂಸೇವಾ ಸಂಸ್ಥೆಗಳು ಹಾಗೂ ದಾನಿಗಳ ಬೆಂಬಲದೊಂದಿಗೆ ಕ್ರೋಢೀಕರಿಸಲಾದ ಬರೋಬ್ಬರಿ 80 ಲಕ್ಷ ರೂ. ‘ಬ್ಲಡ್ ಮನಿ’ಯನ್ನು ಸಂತ್ರಸ್ತರ ಕುಟುಂಬಕ್ಕೆ ನೀಡಿ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಸ್ ಬಂದಿದ್ದನು.
ಭಾರತಕ್ಕೆ ಬಂದ ಮೇಲೂ ಈತನ ಬುದ್ಧಿ ಬದಲಾಗಲಿಲ್ಲ. 2023 ರಲ್ಲಿ ಬೆಂಗಳೂರಿನ ಚಹಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, 50 ಕೆಜಿ ಗಾಂಜಾ ಹೊಂದಿದ್ದ ಮತ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಈತನನ್ನು ಹೆಡೆಮುರಿ ಕಟ್ಟಿದ್ದರು. ಈ ಪ್ರಕರಣದಲ್ಲಿ ಮೂರು ವರ್ಷಗಳ ಕಾಲ ಬೆಂಗಳೂರಿನ ಜೈಲಿನಲ್ಲಿದ್ದ ಫಜಲುದ್ದೀನ್, ಜೈಲಿನ ಒಳಗಡೆಯೇ ದೊಡ್ಡ ಮಾದಕವಸ್ತು ಸಿಂಡಿಕೇಟ್ನ ಕಿಂಗ್ಪಿನ್ಗಳ ಜೊತೆ ಡೀಲ್ ಕುದುರಿಸಿದ್ದನು. ಕಳೆದ ಜನವರಿಯಲ್ಲಿ ಬೆಂಗಳೂರು ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾದ ಬಳಿಕ ಕೇರಳಕ್ಕೆ ಮರಳಿದ್ದನು.
ಕೇರಳದ ಇರಿಟ್ಟಿಯಲ್ಲಿರುವ ತನ್ನ ಸಂಬಂಧಿಕರ ಉಪಾಹಾರ ಗೃಹದಲ್ಲಿ (ರೆಸ್ಟೋರೆಂಟ್) ಕೆಲಸಕ್ಕಿಳಿದ ಫಜಲುದ್ದೀನ್, ಬೆಂಗಳೂರಿನ ಜೈಲಿನಲ್ಲಿ ತನಗೆ ಸಿಕ್ಕಿದ್ದ ಲಿಂಕ್ಗಳನ್ನು ಬಳಸಿ ಕೇರಳದ ಯುವ ಪೀಳಿಗೆಗೆ ಮಾರಕ ‘ಮೆಥಾಂಫೆಟಮೈನ್’ (Methamphetamine) ಹಾಗೂ ಸಿಂಥೆಟಿಕ್ ಡ್ರಗ್ಸ್ ಸಪ್ಲೈ ಮಾಡಲು ಬೃಹತ್ ನೆಟ್ವರ್ಕ್ ನಿರ್ಮಿಸಿದ್ದನು. ಬೆಂಗಳೂರಿನಿಂದ ಕೇರಳಕ್ಕೆ ಚಲಿಸುವ ಅಂತರರಾಜ್ಯ ಲಕ್ಸುರಿ ಪ್ರವಾಸಿ ಬಸ್ಗಳ ಪ್ರಯಾಣಿಕರು ಮತ್ತು ಕ್ಲೀನರ್ಗಳ ಮೂಲಕ ಈತ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದನು. ಜೂನ್ 22 ರಂದು ಪೊಲೀಸರು ಡೆನ್ನಿ ಅಬ್ರಹಾಂ ಎಂಬ ಡ್ರಗ್ ಕ್ಯಾರಿಯರ್ನನ್ನು ಬಂಧಿಸಿದಾಗ ಈ ಅಂತರರಾಜ್ಯ ಜಾಲದ ಮಾಹಿತಿ ಹೊರ ಬಿದ್ದಿದೆ. ಡೆನ್ನಿಯ ಕಾಲ್ ರೆಕಾರ್ಡ್ಸ್ ಹಾಗೂ ಬ್ಯಾಂಕ್ ಖಾತೆಗಳ ವಹಿವಾಟನ್ನು ತಾಂತ್ರಿಕವಾಗಿ ಪರಿಶೀಲಿಸಿದಾಗ, ಆತನಿಗೆ ಹಣ ಹಾಗೂ ಡ್ರಗ್ಸ್ ನೀಡುತ್ತಿದ್ದ ಮಾಸ್ಟರ್ ಮೈಂಡ್ ಫಜಲುದ್ದೀನ್ ಎಂಬುದು ಸಾಬೀತಾಗಿದೆ. ಸದ್ಯ ಇರಿಟ್ಟಿ ಪೊಲೀಸರು ಫಜಲುದ್ದೀನ್ನನ್ನು ಕಸ್ಟಡಿಗೆ ಪಡೆದು ಬೆಂಗಳೂರಿನಲ್ಲಿರುವ ಈತನ ಡ್ರಗ್ ಸೋರ್ಸ್ ಯಾರು ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.
ಒಬ್ಬನ ಜೀವ ಉಳಿಸುವ ಸಲುವಾಗಿ ವಿವಿಧ ಸಂಘಸಂಸ್ಥೆಗಳು ಹಣ ಒಟ್ಟು ಮಾಡಿ..ಸೌದಿಯಿಂದ ಬಿಡುಗಡೆಗೊಳಿಸಿದ್ದರೆ, ಆತ ಮಾಡಿರುವ ಕೆಲಸಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.








