ದಾವಣಗೆರೆ : ಮೂರು ತಿಂಗಳ ಹಿಂದೆ ಶಂಕಾಸ್ಪದವಾಗಿ ಮೃತಪಟ್ಟಿದ್ದ ತಮ್ಮ ತಾಯಿಯ ಸಾವಿಗೆ ಸೂಕ್ತ ನ್ಯಾಯ ಸಿಗಲಿಲ್ಲ ಎಂಬ ಆಕ್ರೋಶದಿಂದ, ಸಮಾಧಿಯಲ್ಲಿ ಹೂತಿಟ್ಟಿದ್ದ ಕೊಳೆತ ಶವವನ್ನು ಮಧ್ಯರಾತ್ರಿ ಅಗೆದು ಹೊರತೆಗೆದು, ಬಟ್ಟೆಯಲ್ಲಿ ಸುತ್ತಿ ಬೈಕ್ನಲ್ಲಿ ಜಿಲ್ಲಾಸ್ಪತ್ರೆಗೆ ಹೊತ್ತೊಯ್ದ ಅತ್ಯಂತ ಭೀಕರ ಹಾಗೂ ಘೋರ ಘಟನೆಯೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಅದಾಪುರ ಗ್ರಾಮದಲ್ಲಿ ನಡೆದಿದೆ.
ಅದಾಪುರ ಗ್ರಾಮದ ಈರಮ್ಮ ಎಂಬುವವರು ಏಪ್ರಿಲ್ 29 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ವೈದ್ಯರು ಹಾಗೂ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇದನ್ನು ತೀವ್ರವಾಗಿ ನಿರಾಕರಿಸಿದ್ದ ಮೃತ ಈರಮ್ಮ ಅವರ ಮಕ್ಕಳಾದ ಮಂಜುನಾಥ್ ಹಾಗೂ ವೆಂಕಟೇಶ್, “ಇದು ಆತ್ಮಹತ್ಯೆಯಲ್ಲ, ಅಕ್ಕಪಕ್ಕದವರೇ ಸೇರಿ ಮಾಡಿದ ಭೀಕರ ಕೊಲೆ” ಎಂದು ಗಂಭೀರ ಆರೋಪ ಮಾಡಿದ್ದರು. ಗ್ರಾಮದಲ್ಲಿ ಬಾಕ್ಸ್ ಚರಂಡಿ ನಿರ್ಮಾಣದ ವಿಷಯವಾಗಿ ಸಂಬಂಧಿಕರಾದ ಕರಿಯಪ್ಪ, ಭದ್ರಾ, ಶಕುಂತಲಾ ಸೇರಿದಂತೆ ಸುಮಾರು 10 ರಿಂದ 11 ಜನರ ಜೊತೆ ಈರಮ್ಮ ಜಗಳವಾಡಿದ್ದರು. ಅವರೇ ತಾಯಿಯನ್ನು ಹೊಡೆದು ಕೊಂದು ಬಳಿಕ ನೇಣು ಹಾಕಿದ್ದಾರೆ, ತಾಯಿಯ ಮೈಮೇಲೆ ತೀವ್ರ ಗಾಯದ ಗುರುತುಗಳಿದ್ದವು ಎಂದು ಮಕ್ಕಳು ಆರೋಪಿಸಿ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸ್ಥಳೀಯ ಮಲೇಬೆನ್ನೂರು ಆಸ್ಪತ್ರೆಯಲ್ಲಿ ಮೊದಲ ಮರಣೋತ್ತರ ಪರೀಕ್ಷೆ ಮುಗಿಸಿ ಶವವನ್ನು ಹೂಳಲಾಗಿತ್ತು. ಆದರೆ, ಪೊಲೀಸರು ಪ್ರಕರಣವನ್ನು ಮುಚ್ಚಿಹಾಕುತ್ತಿದ್ದಾರೆ ಮತ್ತು ಮರು ಮರಣೋತ್ತರ ಪರೀಕ್ಷೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ಮಕ್ಕಳು ಹಗಲಿನಲ್ಲಿ ತೊಂದರೆಯಾಗಬಹುದೆಂದು ಅಂಜಿದ್ದರು. ಕೊನೆಗೆ ತಡರಾತ್ರಿ ತಮ್ಮ ತಾಯಿಯ ಸಮಾಧಿಯನ್ನು ತಾವೇ ಅಗೆದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬೈಕ್ನ ಮಧ್ಯದಲ್ಲಿ ಇರಿಸಿಕೊಂಡು ದಾವಣಗೆರೆ ಜಿಲ್ಲಾ ಆಸ್ಪತ್ರೆಯತ್ತ ಹೊರಟಿದ್ದಾರೆ.
ಮಧ್ಯರಾತ್ರಿ ಬೈಕ್ನಲ್ಲಿ ಕೊಳೆತ ಶವವನ್ನು ಹೊತ್ತು ತರುತ್ತಿದ್ದಾಗ ದಾವಣಗೆರೆಯ ಶಾಮನೂರು ರಸ್ತೆಯ ಬಳಿ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿದೆ. ತಕ್ಷಣ ಸ್ಥಳಕ್ಕೆ ಓಡಿ ಬಂದ ಸಾರ್ವಜನಿಕರು ಬಿದ್ದವರನ್ನು ರಕ್ಷಿಸಲು ಹೋದಾಗ ಬಟ್ಟೆಯಲ್ಲಿ ಸುತ್ತಿದ ಶವ ನೋಡಿ ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ತಾಯಿಗೆ ನ್ಯಾಯ ಕೊಡಿಸಲು ಮಕ್ಕಳು ಮಾಡಿದ ಈ ಘೋರ ಯತ್ನ ಬೆಳಕಿಗೆ ಬಂದಿದೆ. ಸದ್ಯ ಸಾರ್ವಜನಿಕರಲ್ಲಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.








