ಕೋಲ್ಕತ್ತಾ: ಬಂಗಾಳದ ಬಿರ್ಭಮ್ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ನಿವೃತ್ತ ಸರ್ಕಾರಿ ಬಸ್ ಚಾಲಕನ (ಈಗ ಕಲ್ಲು ವ್ಯಾಪಾರಿ) ಮನೆ ಮೇಲೆ ದಾಳಿ ನಡೆಸಿದ ವೇಳೆ ಭಾರೀ ಸಂಪತ್ತನ್ನ ಕಂಡು ಬೆಚ್ಚಿಬಿದ್ದಿದ್ದಾರೆ.
ನಿವೃತ್ತ ಸರ್ಕಾರಿ ಬಸ್ ಚಾಲಕನ ಮನೆ ಮೇಲೆ ದಾಳಿ ನಡೆಸಿದ ಬಂಗಾಳ ಪೊಲೀಸರು ಕನಿಷ್ಠ 28.5 ಕೋಟಿ ನಗದು, 15 ಚಿನ್ನ ಜಪ್ತಿಮಾಡಿದ್ದಾರೆ. ಜಪ್ತಿ ಮಾಡಿದ ಚಿನ್ನದ ಮೌಲ್ಯ 20 ಕೋಟಿ ರೂ.ಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ನಿವೃತ್ತ ಬಸ್ ಚಾಲಕ ಮಿನಾರ್ ಮತ್ತು ಅವರ ಮಗನನ್ನ ಬಂಧಿಸಿದ್ದಾರೆ. ಜೊತೆಗೆ ಇತರ ಸ್ಥಳಗಳಲ್ಲೂ ಹಣ ಸಂಗ್ರಹಿಸಲಾಗಿದೆಯೇ ಅನ್ನೋದ್ರ ಬಗ್ಗೆ ಪ್ರಶ್ನೆ ಮಾಡಲಾಗ್ತಿದೆ. ಮಿನಾರ್, ಎಸ್ಕೇಪ್ ಆಗಿರುವ ಟಿಲ್ಲು ಮೊಂಡಲ್ ಅಲಿಯಾಸ್ ಮೊಹಮ್ಮದ್ ನಜೀಬುದ್ದೀನ್ ಅವರ ಸೋದರ ಮಾವ.
ಟಿಲ್ಲು ಮಂಡಲ್ ಬಿರ್ಭಮ್ನ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಅನುಬ್ರತಾ ಮೊಂಡಲ್ ಅವರ ಆಪ್ತ. ಸರ್ಕಾರಿ ಬಸ್ ಚಾಲಕನ ವೃತ್ತಿಯಿಂದ ನಿವೃತ್ತಿ ಆದ ಬಳಿಕ ಕಲ್ಲು ವ್ಯಾಪಾರದಲ್ಲಿ ವಹಿವಾಟುಗಳಲ್ಲಿ ಬಲವಾದ ಹಿಡಿತ ಹೊಂದಿದ್ದರು ಎಂದು ಹೇಳಲಾಗ್ತಿದೆ.
ಈ ಹಿಂದೆ ಕೂಡ ಮಿನಾರ್ ಅವರನ್ನ ದನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣದಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು. ಇನ್ನೂ ಮರಳು ಮಾಫಿಯಾ ವಿರುದ್ಧದ ಅಧಿಕಾರಿಗಳು ಕೈಗೊಂಡ ಕಾರ್ಯಾಚರಣೆ ಹಾಗೂ ಕಾನೂನು ಕ್ರಮವನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಶ್ಲಾಘಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ, ʻಮರಳು ಮಾಫಿಯಾ ವಿರುದ್ಧದ ಕಾರ್ಯಾಚರಣೆಗಾಗಿ ನಮ್ಮ ಕಾನೂನು ಸಿಬ್ಬಂದಿಯ ಕೆಲಸ ಶ್ಲಾಘನೀಯ. ನಿಖರ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳ ಪೊಲೀಸರು, ಡಿಜಿಪಿ, ಎಸ್ಪಿ ಬಿರ್ಭಮ್ ಪೊಲೀಸ್ ಮತ್ತು ಬಿರ್ಭಮ್ ಜಿಲ್ಲಾ ಪೊಲೀಸ್ ಸಿಬ್ಬಂದಿ ಅವರ ತ್ವರಿತ, ವೃತ್ತಿಪರ ಮತ್ತು ನಿರ್ಣಾಯಕ ಕ್ರಮಕ್ಕಾಗಿ ನಾನು ಅವರನ್ನ ಪ್ರಶಂಸಿಸುತ್ತೇನೆ ಎಂದಿದ್ದಾರೆ.
ಭ್ರಷ್ಟರ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಕೈಗೊಳ್ಳುತ್ತಿರುವ ಕಾರ್ಯಾಚರಣೆಯು ‘ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ’ಯನ್ನು ನಮ್ಮ ಮಾರ್ಗದರ್ಶಿ ತತ್ವವಾಗಿ ಮುಂದುವರಿಸುತ್ತದೆ. ಇದು ಸ್ಪಷ್ಟವಾಗಿರಲಿ: ಸಾರ್ವಜನಿಕ ಸಂಪನ್ಮೂಲಗಳ ಶೋಷಣೆ ಮತ್ತು ಹಿಂದಿನ ಆಡಳಿತ ರಾಜಕೀಯ ಪಕ್ಷದೊಂದಿಗಿನ ಒಡನಾಟದ ಮೂಲಕ ಸಂಪತ್ತನ್ನ ಸಂಗ್ರಹಿಸಿರುವ ಯಾವುದೇ ವ್ಯಕ್ತಿಯನ್ನ ಬಿಡೋದಿಲ್ಲ. ಸಾರ್ವಜನಿಕ ಸಂಪತ್ತು ಜನರಿಗೆ ಸೇರಿದ್ದು, ಅದನ್ನು ಲೂಟಿ ಮಾಡುವವರು ಕಾನೂನಿನ ಸಂಪೂರ್ಣ ಬಲವನ್ನು ಎದುರಿಸಬೇಕಾಗುತ್ತದೆ. ಜಾಗರೂಕತೆ ಮತ್ತು ರಾಜಿಯಾಗದ ಕ್ರಮ ಮುಂದುವರಿಯುತ್ತದೆ. ಜೊತೆಗೆ ಮಾಫಿಯಾ ಸಿಂಡಿಕೇಟ್ಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.








