ಮಂಡ್ಯ : ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಅವರ ಮನೆಯಲ್ಲಿ ಮೂಟೆಗಟ್ಟಲೆ ನಗದು ಹಣ ಪತ್ತೆಯಾಗಿರುವ ವಿಸ್ಮಯಕಾರಿ ಘಟನೆ ನಡೆದಿದೆ.
ಮೃತ ವೃದ್ಧೆಯನ್ನು ನೂರ್ (70) ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಆಸರೆ ಇಲ್ಲದೆ ಕಳೆದ ಹಲವು ವರ್ಷಗಳಿಂದ ಮಂಡ್ಯ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿಕೊಂಡು ಗುತ್ತಲು ಬಡಾವಣೆಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಶನಿವಾರ ವಯೋಸಹಜ ಕಾಯಿಲೆಯಿಂದ ಅವರು ಮೃತಪಟ್ಟಿದ್ದು, ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅಂತ್ಯಸಂಸ್ಕಾರದ ಬಳಿಕ ಸ್ಥಳೀಯರು ಮತ್ತು ಸಂಬಂಧಿಕರು ನೂರ್ ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ಅಚ್ಚರಿ ಕಾದಿತ್ತು! ಮನೆಯ ಮೂಲೆ ಮೂಲೆಯಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ಸುತ್ತಿಟ್ಟಿದ್ದ ಕರೆನ್ಸಿ ನೋಟುಗಳ ಕಂತೆಗಳು ಹಾಗೂ ಚೀಲಗಳಲ್ಲಿ ತುಂಬಿಟ್ಟಿದ್ದ ನಾಣ್ಯಗಳ ರಾಶಿ ಪತ್ತೆಯಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಸತತವಾಗಿ ಎಣಿಕೆ ನಡೆಸಿದಾಗ ಒಟ್ಟು ಮೊತ್ತ ಬರೋಬ್ಬರಿ 8 ಲಕ್ಷ ರೂಪಾಯಿಗೂ ಅಧಿಕವಾಗಿರುವುದು ತಿಳಿದುಬಂದಿದೆ.
ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಸ್ಥಳೀಯ ಮುಖಂಡರು ಮಾತುಕತೆ ನಡೆಸಿ, ಪತ್ತೆಯಾದ ಸಂಪೂರ್ಣ ಹಣವನ್ನು ಮೃತ ವೃದ್ಧೆಯ ವಾರಸುದಾರರು ಹಾಗೂ ಸಂಬಂಧಿಕರಿಗೆ ಸೂಕ್ತವಾಗಿ ಹಸ್ತಾಂತರಿಸಿದ್ದಾರೆ. ವೃದ್ಧೆಯ ಬಳಿಯಿದ್ದ ನಗದಿನ ರಾಶಿ ಕಂಡು ಇಡೀ ಊರಿನ ಜನರೇ ಶಾಕ್ ಆಗಿದ್ದಾರೆ.








