ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿ ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದೆ. ಎಸ್ಐಟಿ ವರದಿಯಲ್ಲಿ ಮಾನಸಿಕ ಖಿನ್ನತೆ, ಆಪ್ತ ವ್ಯಕ್ತಿಯಿಂದ ಉಂಟಾದ ವಿಶ್ವಾಸದ್ರೋಹ ಹಾಗೂ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿಯಿಂದ ಉಂಟಾದ ಮಾನಸಿಕ ಒತ್ತಡ ರಾಯ್ ಅವರ ಸಾವಿಗೆ ಪ್ರಮುಖ ಕಾರಣಗಳಾಗಿರಬಹುದು ಎಂದು ಉಲ್ಲೇಖಿಸಲಾಗಿದೆ.
ಬನ್ನೇರುಘಟ್ಟ ರಸ್ತೆಯಲ್ಲಿದ್ದ ರಾಯ್ ಅವರ ರೆಸಾರ್ಟ್ನ ನಿರ್ವಹಣೆಯನ್ನು ನಂಬಿಕಸ್ಥ ವ್ಯಕ್ತಿಯೊಬ್ಬರಿಗೆ ವಹಿಸಲಾಗಿತ್ತು. ಆದರೆ, ಆತ ಕೋಟ್ಯಂತರ ರೂಪಾಯಿ ವಂಚಿಸಿದ್ದರಿಂದ ರಾಯ್ ಆತನನ್ನು ದೂರವಿಟ್ಟಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಮತ್ತೊಂದೆಡೆ, ಐಟಿ ದಾಳಿ ನಡೆದ ಸಂದರ್ಭದಲ್ಲಿ ಕಂಪನಿಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬರು ಕೆಲಸ ತೊರೆದಿದ್ದರಿಂದ ಅಗತ್ಯ ದಾಖಲೆಗಳನ್ನು ಸಲ್ಲಿಸುವಲ್ಲಿ ರಾಯ್ ಅವರಿಗೆ ತೊಂದರೆ ಎದುರಾಗಿತ್ತು ಎಂದು ಎಸ್ಐಟಿ ತನಿಖೆಯಲ್ಲಿ ತಿಳಿದುಬಂದಿದೆ.
ವೈಯಕ್ತಿಕ ಜೀವನ, ಉದ್ಯಮ ಹಾಗೂ ಆರೋಗ್ಯ ಸೇರಿದಂತೆ ಹಲವು ಆಯಾಮಗಳಲ್ಲಿ ಎಸ್ಐಟಿ ತನಿಖೆ ನಡೆಸಿದೆ. ಕುಟುಂಬ ಸದಸ್ಯರು ಸೇರಿದಂತೆ ಹಲವರನ್ನು ವಿಚಾರಣೆ ನಡೆಸಲಾಗಿದ್ದು, ರಾಯ್ ಅವರ ಮಾನಸಿಕ ಸ್ಥಿತಿಗತಿ ಕುರಿತು ನಿಮ್ಹಾನ್ಸ್ನಿಂದಲೂ ಮಾಹಿತಿ ಪಡೆದು ಪರಿಶೀಲಿಸಲಾಗಿದೆ ಎಂದು ವರದಿ ತಿಳಿಸಿದೆ.








