ಹಾಸನ: ಕುಡಿದ ಅಮಲಿನಲ್ಲಿ ಮಂಗಳೂರು ಮೂಲದ ‘ಸುರಕ್ಷಾ’ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಸ್ಥಳೀಯರು ಆಂಬುಲೆನ್ಸ್ ತಡೆದು ಅದರಲ್ಲಿದ್ದ ರೋಗಿಯನ್ನು ಮತ್ತೊಂದು ಆಂಬುಲೆನ್ಸ್ಗೆ ಸ್ಥಳಾಂತರಿಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ಬಳಿ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಾಲಕನ ವರ್ತನೆ ಗಮನಿಸಿದ ಸ್ಥಳೀಯರು ಆಂಬುಲೆನ್ಸ್ ಅನ್ನು ತಡೆದು, ಅದರಲ್ಲಿದ್ದ ರೋಗಿಯನ್ನು ಬೇಲೂರಿನ ‘ಜೀವರಕ್ಷಕ’ ಆಂಬುಲೆನ್ಸ್ಗೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೇಲೂರು ಪೊಲೀಸರು ‘ಸುರಕ್ಷಾ’ ಆಂಬುಲೆನ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಸಾಗಿಸುವ ಜವಾಬ್ದಾರಿ ಹೊಂದಿರುವ ಚಾಲಕನೇ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದಾನೆ ಎಂಬ ಆರೋಪಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.








