ಕೌಶಂಬಿ: ಉತ್ತರ ಪ್ರದೇಶದಲ್ಲಿ ನಿನ್ನೆ ನಡೆದ ಪಟಾಕಿ ಕಾರ್ಖಾನೆಯ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಪಿಪ್ರಿ ಗ್ರಾಮದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ನೌಶಾದ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಘಟನೆಯಲ್ಲಿ ಆತನ ಕಾಲಿಗೆ ಗುಂಡು ತಗುಲಿತ್ತು. ನಂತರ ಪೊಲೀಸರು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆತನನ್ನು ಬಂಧಿಸಿದ್ದಾರೆ.
ಪಟಾಕಿ ಕಾರ್ಖಾನೆ ಸ್ಫೋಟದ ನಂತರ ಪೊಲೀಸರು ತಮ್ಮ ಕ್ಷಿಪ್ರ ಕಾರ್ಯಾಚರಣೆಯನ್ನು ಮುಂದುವರೆಸಿದರು. ಗಾಯಗೊಂಡ ನೌಶಾದ್ ಅಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಶಾದ್ ಅಲಿ ಮೊಹಮ್ಮದ್ ಆದಿಲ್ ಅವರ ತಂದೆ. ಆರೋಪಿಯಿಂದ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಒ ಶಿವಾಂಗ್ ಸಿಂಗ್, ‘ಕೌಶಾಂಬಿ ಜಿಲ್ಲೆಯ ಪಿಪ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮೊಹಮ್ಮದ್ಪುರ ಮನೌರಿಯಲ್ಲಿ ಇದ್ದ ಪಟಾಕಿ ಕಾರ್ಖಾನೆಯಲ್ಲಿ ಆಗಸ್ಟ್ 31, 2026ರಂದು ಸ್ಫೋಟವಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ಘಟನೆಯ ನಂತರ ಪೊಲೀಸ್ ಸೂಪರಿಂಟೆಂಡೆಂಟ್ ಮುಖ್ಯ ಆರೋಪಿಯನ್ನು ಹಿಡಿಯಲು 4 ತಂಡಗಳನ್ನು ರಚಿಸಿದ್ದರು. ತಂಡಗಳು ನಿರಂತರ ಹುಡುಕಾಟ ನಡೆಸುತ್ತಿದ್ದವು’ ಎಂದು ಹೇಳಿದರು.
ಮುಂದುವರಿದು, ‘ಸೆಪ್ಟೆಂಬರ್ 1ರಂದು ಬೆಳಿಗ್ಗೆ ಸುಮಾರು 4 ಗಂಟೆಗೆ ಪೊಲೀಸರಿಗೆ ಬಲ್ಲ ಮೂಲಗಳಿಂದ ನಿರ್ದಿಷ್ಟ ಮಾಹಿತಿ ಬಂದಿತು. ಮುಖ್ಯ ಆರೋಪಿ ಚಾರ್ವಾ ಪೊಲೀಸ್ ಠಾಣೆಯ ವ್ಯಾಪ್ತಿಯ 13 ಮೈಲ್ ಸರಾಯ್ ಸಹಾವಾ ರಸ್ತೆಯ ಮೂಲಕ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂತು. ಈ ಮಾಹಿತಿಯ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ಸುತ್ತುವರಿದರು. ತನ್ನನ್ನು ಸುತ್ತುವರಿದಿರುವುದನ್ನು ನೋಡಿದ ಆರೋಪಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಪ್ರತ್ಯುತ್ತರ ನೀಡಿದಾಗ ಆರೋಪಿಗೆ ಗುಂಡಿನ ಗಾಯವಾಯಿತು’ ಎಂದು ಸಿಒ ಶಿವಾಂಗ್ ಸಿಂಗ್ ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಗಾಯಗೊಂಡ ಆರೋಪಿ ತನ್ನ ಹೆಸರು ನೌಷಾದ್, ತಂದೆ ನಿಜಾಮುದ್ದೀನ್, ಮನೌರಿ ನಿವಾಸಿ ಎಂದು ಹೇಳಿದ್ದಾನೆ. ಅವನನ್ನು ತಕ್ಷಣ ಮಂಝನ್ಪುರದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ತಂಡಗಳು ಇತರ ಆರೋಪಿಗಳನ್ನು ಹಿಡಿಯುವ ಪ್ರಯತ್ನ ಮುಂದುವರಿಸುತ್ತಿವೆ’ ಎಂದು ಹೇಳಿದರು.
ಕೌಶಂಬಿ ಜಿಲ್ಲೆಯ ಪಿಪ್ರಿ ಪೊಲೀಸ್ ಠಾಣೆ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭಾರಿ ಸ್ಫೋಟದಲ್ಲಿ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಅಮಿತ್ ಪಾಲ್ ಈ ಮಾಹಿತಿಯನ್ನು ನೀಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಐದು ಜನರಿಗೆ ಪ್ರಯಾಗರಾಜ್ನ ಎಸ್ಆರ್ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ರಕ್ಷಿಸಲಾದ ಎಲ್ಲಾ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ನಿನ್ನೆ ಹೇಳಿದ್ದರು.
ಮೃತರನ್ನು ಪ್ರಿಯಾಂಜಲಿ (5), ಪ್ರವೀಣ್ ಸಿಂಗ್ (13), ಜಾನ್ವಿ (12), ಆದಿತ್ಯ (12), ರವಿ (8), ಜ್ಞಾನ್ ಸಿಂಗ್ (40), ಆದಿತ್ಯ (8), ಅಂಜು (32), ವಿಕ್ರಮ್ ಸರೋಜ್ (35), ಅಂಶ್ (6) ಮತ್ತು ನನ್ಹಾ (4) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ಹೇಳಿದರು. ಘಟನೆಯಲ್ಲಿ 18 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








