ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ಪಶುವೈದ್ಯಕೀಯ ನೇಮಕಾತಿ ಹಗರಣದಲ್ಲಿ ಬಗೆದಷ್ಟೂ ಸ್ಫೋಟಕ ರಹಸ್ಯಗಳು ಬಯಲಾಗುತ್ತಿವೆ. ಕಾಸು ಕೊಟ್ರೆ ಸರ್ಕಾರಿ ಹುದ್ದೆ ಕಡ್ಲೆಪುರಿಯಂತೆ ಬಿಕರಿ ಆಗಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಹೌದು. ಡಿಗ್ರಿಯಲ್ಲೇ 5 ವಿಷಯಗಳಲ್ಲಿ ಫೇಲ್ ಆಗಿದ್ದ ಅಭ್ಯರ್ಥಿ ಮಹಮದ್ ಸುಹೇಲ್ ಬಂಡೇಗೋಳ್ ದುಡ್ಡು ಕೊಟ್ಟಿದ್ದಾನೆ ಅನ್ನೋ ಕಾರಣಕ್ಕೆ ಕೆಪಿಎಸ್ಸಿ ನಲ್ಲಿ ಟಾಪರ್ ಆಗಿದ್ದಾನೆ ಅನ್ನೋ ಅಚ್ಚರಿ ಸಂಗತಿ ತನಿಖೆ ವೇಳೆ ಬಯಲಾಗಿದೆ. ದುಡ್ಡು ಕೊಟ್ಟು ರ್ಯಾಂಕ್ ಪಡೆದ ಅಭ್ಯರ್ಥಿಯ ಅಂಕಪಟ್ಟಿ ಕೂಡ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ.
ಡಿಗ್ರಿಯಲ್ಲಿ ಓದೋದಕ್ಕೆ ಹೆಣಗಾಡುತ್ತಿದ್ದ ಸುಹೇಲ್ 5 ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಆದ್ರೆ ಪಶುವೈದ್ಯಾಧಿಕಾರಿಗಳ ಹುದ್ದೆಯಲ್ಲಿ ಕಾಸಿನ ದರ್ಬಾರ್ ನಡೆದು, ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಇದರಲ್ಲಿ ಕನ್ನಾಳೆಯ ಕೈಚಳಕವೂ ಇದೆ ಅಂತ ಖುದ್ದು ಅಭ್ಯರ್ಥಿಯೇ ಸಿಐಡಿ ಎದುರು ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.








