ನಾಗ್ಪುರ: ಡ್ಯಾನ್ಸ್ ಕ್ಲಾಸ್ಗೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿ ನಡುವೆ ನಡೆದ ಜಗಳ ದುರಂತದಲ್ಲಿ ಅಂತ್ಯಗೊಂಡಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 38 ವರ್ಷದ ಯಾಮಿನಿ ಕೃಷ್ಣ ಲಾಲ್ ಯಾದವ್ ಎಂಬ ಮಹಿಳೆ ಪತಿಯ ಹಲ್ಲೆಯಿಂದ ಮೃತಪಟ್ಟಿದ್ದಾರೆ. ಘಟನೆ ವೇಳೆ ಪತಿ ಕೃಷ್ಣ ಲಾಲ್ ಯಾದವ್ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಕೆಲಸ ಮುಗಿಸಿ ಮನೆಗೆ ಬಂದ ಕೃಷ್ಣ ಲಾಲ್, ಪತ್ನಿ ಹಾಗೂ ಮಕ್ಕಳಿಗಾಗಿ ಅಡುಗೆ ಮಾಡುವಂತೆ ಯಾಮಿನಿಗೆ ತಿಳಿಸಿದ್ದಾರೆ. ಆದರೆ ಯಾಮಿನಿ ತಮ್ಮ ವಸತಿ ಸಮುಚ್ಚಯದಲ್ಲಿದ್ದ ಡ್ಯಾನ್ಸ್ ಕ್ಲಾಸ್ಗೆ ತೆರಳಲು ಸಿದ್ಧವಾಗಿದ್ದ ಕಾರಣ ಅಡುಗೆ ಮಾಡಲು ನಿರಾಕರಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಅದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ ಎನ್ನಲಾಗಿದೆ.
ಈ ವೇಳೆ ಆರೋಪಿ ಪತ್ನಿಯ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತೀವ್ರ ನೋವು ಕಾಣಿಸಿಕೊಂಡಿದ್ದರೂ ಆರಂಭದಲ್ಲಿ ಘಟನೆಯನ್ನು ಅಪಘಾತದ ಸಾವು ಎಂದು ದಾಖಲಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಮೂಳೆ ಮುರಿತ, ಕರುಳಿಗೆ ಗಂಭೀರ ಹಾನಿ ಸೇರಿದಂತೆ ಹಲವು ಗಾಯಗಳು ಪತ್ತೆಯಾಗಿವೆ. ಕತ್ತು ಹಿಸುಕಿರುವ ಗುರುತುಗಳೂ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ಪತಿಯನ್ನು ಬಂಧಿಸಿದ್ದಾರೆ.
ಯಾಮಿನಿ ಮತ್ತು ಕೃಷ್ಣ ಲಾಲ್ ದಂಪತಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಘಟನೆ ವೇಳೆ ಮಕ್ಕಳು ಮನೆಯಲ್ಲೇ ಇದ್ದರು ಎಂದು ವರದಿ ತಿಳಿಸಿದೆ. ಹಿಂದೆಯೂ ದಂಪತಿ ನಡುವೆ ಜಗಳಗಳು ನಡೆಯುತ್ತಿದ್ದವು ಎಂದು ಯಾಮಿನಿ ಅವರ ಸಹೋದರ ಹೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.








