ಕಾಸರಗೋಡು : ಮಂಜೇಶ್ವರದ ಹೊಸಂಗಡಿ ಬಳಿಯ ಅಂಗಡಿಪ್ಪಡವಿಯಲ್ಲಿ ವಲಸೆ ಕಾರ್ಮಿಕನೊಬ್ಬನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ 31 ವರ್ಷದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಮ್ ನಾಯಕ್ (31) ಬಂಧಿತ ಆರೋಪಿ. ಕೃತ್ಯ ಎಸಗಿ ಮಂಗಳೂರಿನ ಪಡೀಲ್ ಪ್ರದೇಶದಿಂದ ತಮ್ಮ ಸ್ವಗ್ರಾಮಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ಲಿಂಗನಾಯಕನಹಳ್ಳಿ ನಿವಾಸಿ ರಮೇಶ್ (38) ಕೊಲೆಯಾದ ದುರ್ದೈವಿ. ಶುಕ್ರವಾರ ಸಂಜೆ ಅಂಗಡಿಪ್ಪಡವಿಯಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಎರಡು ಅಂತಸ್ತಿನ ಬಾಡಿಗೆ ಮನೆಯ ಅಡುಗೆಮನೆಯಲ್ಲಿ ರಮೇಶ್ ಶವವಾಗಿ ಪತ್ತೆಯಾಗಿದ್ದರು. ಶವಪರೀಕ್ಷೆ ವರದಿಯಲ್ಲಿ ಎದೆಯ ಭಾಗಕ್ಕೆ ಆಳವಾಗಿ ಚೂರಿಯಿಂದ ಇರಿದಿದ್ದೇ ಸಾವಿಗೆ ಕಾರಣ ಎಂದು ದೃಢಪಟ್ಟಿದೆ.
ಪೋಲಿಸರ ಮಾಹಿತಿಯಂತೆ, ರಾಮ್ ನಾಯಕ್ ಮತ್ತು ರಮೇಶ್ ಸ್ನೇಹಿತರಾಗಿದ್ದು, ಒಟ್ಟಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ ಇಬ್ಬರೂ ಕೊಠಡಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾಗ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ರಾಮ್ ನಾಯಕ್, ರಮೇಶ್ಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದ.
ಅದೇ ಮನೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ಕೃಷ್ಣಪ್ಪ ಎಂಬವರು ಅಡುಗೆಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮೇಶ್ ಅವರ ದೇಹವನ್ನು ಕಂಡು ತಕ್ಷಣವೇ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆ ಮಾಲೀಕರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಸ್ಟೇಷನ್ ಹೌಸ್ ಆಫೀಸರ್ ಇನ್ಸ್ಪೆಕ್ಟರ್ ಎಂ.ವಿ.ವಿಷ್ಣು ಪ್ರಸಾದ್ ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದಿದೆ. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








