ಪುಣೆ: ಕೆಲವು ತಿಂಗಳುಗಳ ಹಿಂದೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ‘ಮೇಘಾಲಯ ಹನಿಮೂನ್ ಮರ್ಡರ್’ ಮಾದರಿಯಲ್ಲೇ ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೊಂದು ಘೋರ ಹತ್ಯೆ ನಡೆದಿದೆ. ₹17 ಕೋಟಿ ವೆಚ್ಚದ ಅದ್ಧೂರಿ ವಿವಾಹ ನಿಶ್ಚಿತವಾಗಿದ್ದ ಕೋಟ್ಯಧಿಪತಿ ಉದ್ಯಮಿಯೊಬ್ಬರ ಮಗನನ್ನು ತನ್ನ ಪ್ರಿಯಕರನೊಂದಿಗೆ ಸೇರಿ 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಲಾಗಿದ್ದು. ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದ್ದು, ಕೊಲೆಗಾತಿಯ ಪ್ರಿಯಕರ ಧರಿಸಿದ್ದ ಹೂಡೀ ಶರ್ಟ್.
ಜೂನ್ 18 ರಂದು ಲೋಹಾಗಢ ಕೋಟೆಯ ಬಳಿಯ ಕಂದಕದಲ್ಲಿ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲಾಗಿದ್ದರೂ, ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಸಾಬೀತಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ಭಾವಿ ಪತ್ನಿ ಸಿಯಾ ಗೋಯೆಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಬಾಬುಲಾಲ್ ಚೌಧರಿ (22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಕೇತನ್ ಅಗರ್ವಾಲ್ ಪುಣೆಯ ಪ್ರಸಿದ್ಧ ‘ಅಗರ್ವಾಲ್ ಬಿಲ್ಡರ್ಸ್’ ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರಾಗಿದ್ದರು. ಆಸ್ಟ್ರೇಲಿಯಾದಲ್ಲಿ ಎಂಬಿಎ ಮುಗಿಸಿ ಭಾರತಕ್ಕೆ ಮರಳಿದ್ದ ಇವರಿಗೂ, ಕೋರೆಗಾಂವ್ ಪಾರ್ಕ್ ನಿವಾಸಿ ಹಾಗೂ ಫ್ಯಾಷನ್ ಕಮ್ಯುನಿಕೇಶನ್ ವಿದ್ಯಾರ್ಥಿನಿಯಾಗಿದ್ದ ಸಿಯಾ ಗೋಯೆಲ್ ನಡುವೆ ಫೆಬ್ರುವರಿ 14 ರಂದು ಅತ್ಯಂತ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಇದೇ ನವೆಂಬರ್ 28 ರಂದು ಉದಯಪುರದ ‘ದಿ ಒಬೆರಾಯ್ ಉದಯವಿಲಾಸ್’ ಅರಮನೆಯಲ್ಲಿ ₹17 ಕೋಟಿ ವೆಚ್ಚದಲ್ಲಿ ವಿವಾಹ ನಿಗದಿಪಡಿಸಲಾಗಿತ್ತು. ಜುಲೈನಲ್ಲಿ ಬಾಲಿಗೆ ಪ್ರಿ-ವೆಡ್ಡಿಂಗ್ ಶೂಟ್ಗೆ ಸಿದ್ಧತೆಯೂ ನಡೆದಿತ್ತು. ಆದರೆ, ಚೇತನ್ನನ್ನು ಪ್ರೀತಿಸುತ್ತಿದ್ದ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಕುಟುಂಬದ ಒತ್ತಡಕ್ಕೆ ಮಣಿದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಿಯಾ, ಮದುವೆ ತಪ್ಪಿಸಲು ಕೇತನ್ನನ್ನು ಮುಗಿಸಲು ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದಳು.
ಅನುಭವಿ ಚಾರಣಿಗನಾಗಿದ್ದ ಕೇತನ್ ಲೋಹಾಗಢದಲ್ಲಿ ಕಾಲು ಜಾರಿ ಬೀಳಲು ಸಾಧ್ಯವೇ ಇಲ್ಲ ಎಂದು ಆತನ ತಂದೆ ಅನುಮಾನ ವ್ಯಕ್ತಪಡಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಮಹತ್ವದ ಸುಳಿವು ನೀಡಿದವು. ಜೂನ್ 18 ರಂದು ಪುಣೆಯಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ, ಹೂಡೀ ಶರ್ಟ್ ಹಾಗೂ ಮಾಸ್ಕ್ ಧರಿಸಿದ್ದ ಯುವಕನೊಬ್ಬ ಬೈಕ್ನಲ್ಲಿ ಕೇತನ್-ಸಿಯಾ ಕಾರನ್ನು ಹಿಂಬಾಲಿಸಿದ್ದು ಪತ್ತೆಯಾಯಿತು. ಆ ಬೈಕ್ ನಂಬರ್ ಆಧರಿಸಿ ಚೇತನ್ನನ್ನು ವಶಕ್ಕೆ ಪಡೆಯಲಾಯಿತು.
ಚೇತನ್ ಪೊಲೀಸರನ್ನು ಹಾದಿ ತಪ್ಪಿಸಲು ತನ್ನ ಮೊಬೈಲನ್ನು ಮನೆಯಲ್ಲೇ ಇಟ್ಟು, ಬೇರೆಯವರ ಫೋನ್ ಬಳಸಿ ಲೋಹಾಗಢ ತಲುಪಿದ್ದನು. ಆದರೆ ಆ ಫೋನ್ನ ವಾಟ್ಸ್ಆ್ಯಪ್ ಚಾಟ್ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಕೊಲೆಯ ದಿನ ಬೆಳಗ್ಗೆ 10:28ಕ್ಕೆ ಚೇತನ್, “ರೆಡಿ. ಅವನು ವಿಂಡ್ ಪಾಯಿಂಟ್ ಹತ್ರ ಬಂದ್ನಾ?” ಎಂದು ಸಿಯಾಗೆ ಸಂದೇಶ ಕಳುಹಿಸಿದ್ದ. ಅದಕ್ಕೆ ಸಿಯಾ “ಹ್ಮ್. 2 ನಿಮಿಷ” ಎಂದು ಉತ್ತರಿಸಿದ್ದಳು. 10:32ಕ್ಕೆ ಚೇತನ್ “ಡನ್” ಎಂದು ಕಳುಹಿಸಿದ ತಕ್ಷಣ, 10:45ಕ್ಕೆ ಸಿಯಾ ಪೊಲೀಸರಿಗೆ ಕರೆ ಮಾಡಿ “ಕೇತನ್ ಕಾಲು ಜಾರಿ ಬಿದ್ದ” ಎಂದು ನಾಟಕವಾಡಿದ್ದಳು. ಅಷ್ಟೇ ಅಲ್ಲದೆ, ಅಂದು ರಾತ್ರಿ ಇನ್ಸ್ಟಾಗ್ರಾಮ್ನಲ್ಲಿ “ಐ ಲವ್ಡ್ ಯೂ ಸೋ ಮಚ್ ಕೇತನ್… ಐ ಮಿಸ್ ಯೂ…” ಎಂದು ಸ್ಟೋರಿ ಹಾಕಿ ಕಣ್ಣೀರು ಹಾಕುವ ನಟನೆ ಮಾಡಿದ್ದಳು.
ಜೂನ್ 23 ರಂದು ಡಿಜಿಟಲ್ ಪುಟ್ಪ್ರಿಂಟ್ಗಳು ಹಾಗೂ ಸಿಸಿಟಿವಿ ಸಾಕ್ಷ್ಯಗಳನ್ನು ಮುಂದಿಟ್ಟು ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಜೂನ್ 14 ರಂದೇ ಮೊದಲ ಬಾರಿ ಕೋಟೆಗೆ ಕರೆದೊಯ್ದು ‘ಕಲ್ಲಿನ ಸಂದಿಯಲ್ಲಿ ಹಾವು ಇದೆ’ ಎಂದು ಹೆದರಿಸಿ ತಳ್ಳಲು ನೋಡಿದ್ದಾಗ ಜನಸಂದಣಿಯಿಂದಾಗಿ ಅದು ವಿಫಲವಾಗಿತ್ತು. ತದನಂತರ ಜೂನ್ 18 ರಂದು ಸಿಯಾಳ ಹುಟ್ಟುಹಬ್ಬದ ನೆಪವೊಡ್ಡಿ ಮತ್ತೆ ಕೋಟೆಯ ವಿಂಡ್ ಪಾಯಿಂಟ್ಗೆ ಕರೆದೊಯ್ದು, ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಹಿಂದಿನಿಂದ ಇಬ್ಬರೂ ಸೇರಿ ಕೇತನ್ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ಲೋನಾವಾಲಾ ಗ್ರಾಮೀಣ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) (ಕೊಲೆ) ಮತ್ತು 61(2) (ಕ್ರಿಮಿನಲ್ ಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಜೂನ್ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.








