ನವದೆಹಲಿ: ಮಗುವಿಗೆ ಮಾತ್ರೆ ನೀಡುವ ಕ್ಷುಲ್ಲಕ ವಿಚಾರ ದಂಪತಿ ನಡುವೆ ಕಲಹಕ್ಕೆ ಕಾರಣವಾಗಿ, ಅಂತಿಮವಾಗಿ ಪತ್ನಿ ಕಡೆಯವರ ಮಾರಣಾಂತಿಕ ಹಲ್ಲೆಗೆ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ನೋಯ್ಡಾದ ಪ್ರತಿಷ್ಠಿತ ‘ಅಡೋಬ್’ ಕಂಪನಿಯಲ್ಲಿ ವಾರ್ಷಿಕ ₹60 ಲಕ್ಷ ವೇತನದ ಉದ್ಯೋಗದಲ್ಲಿದ್ದ ವಿನಯ್ ಗುಪ್ತಾ (31) ಹತ್ಯೆಯಾದ ದುರ್ದೈವಿ.
ಘಟನೆಯ ವಿವರ:
ವಿನಯ್ ಗುಪ್ತಾ ಹಾಗೂ ರೇಖಾ ಅವರ ವಿವಾಹವಾಗಿ ಮೂರೂವರೆ ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ (ಒಂದು ಗಂಡು, ಒಂದು ಹೆಣ್ಣು). ಇತ್ತೀಚೆಗೆ ಮಗುವಿಗೆ ಔಷಧ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕೋಪಗೊಂಡ ರೇಖಾ, ತವರು ಮನೆಗೆ ತೆರಳಿ ವಿಷಯ ಮುಟ್ಟಿಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ರೇಖಾ ತಮ್ಮ ತಂದೆ, ಇಬ್ಬರು ಸಹೋದರರು, ಅತ್ತಿಗೆ, ಚಿಕ್ಕಪ್ಪ ಸೇರಿದಂತೆ ಕುಟುಂಬದ ಇತರ ಸದಸ್ಯರನ್ನು ಕರೆದುಕೊಂಡು ಪತಿಯ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಸಂಬಂಧಿಕರಿಗೆ ಕುಡಿಯಲು ನೀರು ತರಲು ವಿನಯ್ ಅವರ ತಾಯಿ ಅಡುಗೆ ಮನೆಗೆ ಹೋದ ಸಮಯದಲ್ಲೇ, ರೇಖಾ ಕಡೆಯವರೆಲ್ಲರೂ ಏಕಾಏಕಿ ವಿನಯ್ ಮೇಲೆ ಮುಗಿಬಿದ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ವಿನಯ್ ಅವರ ತಾಯಿ ಕೈಮುಗಿದು ಬೇಡಿಕೊಂಡರೂ ಬಿಡದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ವಿನಯ್ ಅವರನ್ನು ನೆರೆಹೊರೆಯವರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ, ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆ ಸಂಬಂಧ ವಿನಯ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.








